ಶುಕ್ರವಾರ, ಮಾರ್ಚ್ 30, 2018

ಊಟ - ವಸ್ತ್ರ (ಬಿಸಿಯೂಟ - ಸಮವಸ್ತ್ರ)


ಪುಟ್ಟ ಹಟ್ಟಿಯೊಳಗಿಂದ
ಇಣುಕುತ್ತಿದ್ದಾನೆ ಪುಟ್ಟ
ಲೋಕದ ಬೆಳಕಿಗೆ
ಮೈ ಒಡ್ಡಲಾಗದೇ.

ಹೊಟ್ಟೆಗೂ ಇಲ್ಲದ ಅನ್ನದ ವಾಸನೆಯನ್ನು
ಸವಿದು ಬರುತ್ತಾನೆ ಆಗಾಗ
ಹಟ್ಟಿಯಾಚೆಯ ಹೋಟೆಲಿನಲ್ಲಿ.

ತನ್ನಲ್ಲಿಲ್ಲದ ಅಂಗಿಯನ್ನು
ಕಂಡು ಬೆರೆಗಾಗುತ್ತಾನೆ ಆಗಾಗ
ಹಟ್ಟಿಯಾಚೆಯ ಹೊಲದ ಬೆಚ್ಚಿನಲ್ಲಿ(ಬೆದರುಗೊಂಬೆ).

ತಾನು ಗುನುಗುವ ಹಾಡುಗಳನ್ನು
ಬರೆಯಲೂಬಹುದೆಂಬ ಕಲ್ಪನೆಯಿಲ್ಲ,
ಬೆಪ್ಪಾಗಿ ನೋಡುತ್ತಾನೆ ಶಾಲೆಯ ಕಡೆಗೆ.
ಶಾಲೆಯೆದುರಿನ ಬೋರ್ಡಿನಲ್ಲಿರುವ
ಅನ್ನದ ಚಿತ್ರ, ಅಂಗಿಯ ಚಿತ್ರಗಳು
ಪುಟ್ಟನಲ್ಲೂ ಆಸೆ ಹುಟ್ಟಿಸುತ್ತವೆ!!

ಹೊಟ್ಟೆ ಹಸಿದು ಶಾಲೆಗೆ ಹೋದವನು
ಮತ್ತೂ ಹಸಿದು ಬರುತ್ತಾನೆ ಜ್ಞಾನಕ್ಕಾಗಿ.

ಗುರುವಾರ, ಮಾರ್ಚ್ 22, 2018

ಸೀರೆ

ಸೀರೆ ಸುತ್ತಿಕೊಂಡೇ
ಬಾಳು ಸವೆದವಳು ಅಮ್ಮ.

ಬಿಗಿಯಾದ ರವಿಕೆಯನು
ಎದೆಗೆ ಬಿಗಿದು,
ಬೇಸಿಗೆಯ ಬೆಂಕಿಗೆ
ಬೆವರಲಿ ತೊಯ್ದವಳು ನಿಡುಸುಯ್ಯಲಿಲ್ಲ.
ಅವಳಿಗೆ ಬೇರೆ ಉಡುಗೆಯೇ ಗೊತ್ತಿಲ್ಲ.

ಲೋಕದ ನಗೆಪಾಟಲಿಗೆ ಹೆದರಿ
ಅಮ್ಮನಿಗನ್ನಿಸಿದ್ದು " ಸೀರೆಯೇ ಸರಿ!"

ಯಾವ ಶಿಸ್ತಿಗೊಳಗಾಗಿ ನಮ್ಮ ಶಿಕ್ಷಕಿ
ಸೀರೆಯ ಶಿಕ್ಷೆಗೊಳಗಾದಳು?!
ಅರೆತೆರೆದ ಬೆನ್ನು, ಹೊರಗಿಣುಕುವ ಸೊಂಟ;
ಗಂಡಿನದೋ, ಗಂಡಸಿನದೋ ಕಣ್ಣು!
ಸಹಿಸಲಾಗದ ಮುಜುಗರದ ಸಂಕಟ!!

ಬದುಕಿನುದ್ದೇಶವ ನೋಡಿ-
ಶಿಕ್ಷಕಿಗನ್ನಿಸಿದ್ದು "ಸೀರೆಯಾದರೂ ನಡೆದೀತು ಬಿಡಿ"

ಇನ್ನು ಪುಟ್ಟ ಗೌರಿಗೆ (any actress)
ಏನಿತ್ತೋ ಜರೂರತ್ತು
ಸೀರೆಯುಟ್ಟು ವೇಷ ಕಟ್ಟುವುದು;
ಜೀವನೋಪಾಯಕ್ಕೇನೆಂದು ಸೀರೆಯುಟ್ಟವಳು ಅವಳು.

ಪುಟ್ಟ ಗೌರಿ ಹೇಳಿದ್ದು "ಸೀರೆ ನೋಡಿ ಮರುಳಾಗಬೇಡಿ; ಬೇರೆ ಬಟ್ಟೆಯುಟ್ಟು ಜೀವನವ ಉಸಿರಾಡಿ!"

ಶುಕ್ರವಾರ, ಮಾರ್ಚ್ 16, 2018

ಸೀತೆ

ಆದರೂ ಪ್ರೀತಿ ಬದಲಾಗಲಿಲ್ಲ!

ಹೊತ್ತೊಯ್ದ ರಾವಣ
ಭಾವನೆಗಳ ಮೇಲೆ ಹತ್ತಿ ಕುಣಿದರೂ,
ಸೀತೆ ಬದಲಾಗಲಿಲ್ಲ!

ಕತ್ತಲ ಕೂಪಕ್ಕೆ ನೂಕಿದರೂ,
ಬೆತ್ತಲಾಗಿಸಿ ಬಿಸಿಲಿಗೆ ನೂಕಿದರೂ,
ದೇಹವೂ, ಆತ್ಮವೂ ಕೊಳೆಯಾಗಲಿಲ್ಲ.

ಮುಗಿಯದ ಸಮಯವನ್ನು ಮುಗಿಸಲಾಗಿ
ಕಡಿಲಿನೆಡೆಗೆ ಸಾಯಲು ಹೆಜ್ಜೆಹಾಕುವಾಗ
ಕೇಳಿಸಿದೆ ದಡದ ದನಿ- " ನಾನೂ ತೆರೆಗಳಿಗಾಗಿ ಕಾಯುತ್ತಿಲ್ಲವೇ?!"

ಅಶೋಕ ವನದಲ್ಲಿ ಹೂವೇ ಅರುಳುತ್ತಿಲ್ಲವೆಂದರು
ಸೇವಕೀಯರು;
ರಾಮನ ಪ್ರೇಮ ರಾವಣನ ಬಂಧಿಯಾಗಿರುವಲ್ಲಿ
ಹೂವುಗಳಿಗೇನು ಕೆಲಸ?

ಊಟ ಬಿಟ್ಟರೆ ಅನ್ನಕ್ಕೆ ಅಪಮಾನ,
ಹಠ ಬಿಟ್ಟರೆ ತನ್ನತನಕ್ಕೆ ಅಪಮಾನ,
ಉಂಡು ತೇಗಿದ್ದು
ರಾವಣನಿಗೆ ಕೇಳಿಸಿತೆಂಬ ಭಯ.

ಇಷ್ಟವಿಲ್ಲದ ದೇಶದಲ್ಲಿ
ಇನ್ನೆಷ್ಟು ದಿನ ಈ ಕಷ್ಟ?
ಪ್ರೀತಿಗೆ ಗುರುತ್ವ ಶಕ್ತಿ ಇಲ್ಲವೇ?!!!

ರಾಮನ ಪ್ರೇಮದ ನಿಮಿತ್ತ
ರವಣನೊಡನೆ ನಿತ್ಯ ಸಮರ ಸಾರಿ ಗೆದ್ದವಳು ಸೀತೆ;
ರಾಮ ನಿಮಿತ್ತ ಮಾತ್ರ!!

ಮಾಲು! ಅಮಲು! (ಕಥೆ)

ಕಾಲೇಜಿನಲ್ಲಿ ಪಿಯೂಸಿ ಓದುತ್ತಿರುವಾಗ ನಡೆದ ಘಟನೆಯೊಂದು ಸುಮಾರು ವರುಷ ನನ್ನನ್ನು ಕಾಡಿದೆ. ಘಟನೆಗೊಂದು ಪೀಠಿಕೆ ಹಾಕಿ ವಿವರಿಸುತ್ತೇನೆ.

ಕವನ ಬರೆಯುವ ಲಹರಿ ಬಂತೆಂದರೆ ಕಾಲೇಜಿನ ಹಿಂದಿನ ತೋಟದಲ್ಲಿರುವ ಬಾವಿ ಕಟ್ಟೆಯ ಹಿಂದೆ ಹೋಗಿ, ಚಿಕ್ಕೂ ಮರದ ನೆರಳಿನಲ್ಲಿ ಕುಳಿತು ಬರೆದೇ ತಿರುತ್ತಿದ್ದೆ. ಏಕನಮಿಕ್ಸ್ ಕ್ಲಾಸ್ ಇರಲಿ, ಜಿಯಾಗ್ರಾಫಿ ಇರಲಿ, ಅಕಂಟೆನ್ಸಿಯೇ ಇರಲಿ, ಲಹರಿ ಬಂದಾಗ ಬರೆಯದೇ ಬೇರೆ ವಿಧಿಯಿಲ್ಲ ಎಂಬಂತೆ ಆಗುತ್ತಿದ್ದೆ.

ಆ ದಿನ ಹತ್ತು ಗಂಟೆಗೆ ಪ್ರಾರ್ಥನೆ ಮುಗಿಸಿ ಬುಕ್ ಹಿಡಿದು ಬಾವಿಯ ಕಡೆಗೆ ಹೊರಟೆ. ಆದರೆ, ಆಗಲೇ ಯಾರೋ ಅಲ್ಲಿ ಬಂದು ಕುಳಿತಿರುವುದಕ್ಕೆ ಸಾಕ್ಷಿಯಂತೆ ಒಂದು ಬ್ಯಾಗ್ ಕಾಣಿಸಿತು. ಬ್ಯಾಗಿನ ಮೇಲೆ ಒಂದು ತುಂಬಾ ಪುಟ್ಟಗಿನ ಸ್ಟೀಲ್ ಡಬ್ಬ. ಮುಂದೆ ಹೋದಂತೆ ಇಬ್ಬರು ಹುಡುಗರ ತಲೆಯೂ ಕಾಣಿಸಿತು- ಅದೇ ಓಪಶನಲ್ ಕ್ಲಾಸ್ ನ ಪ್ರಶ್ನೆಯ ಭಂಡಾರಗಳು! ತಿಂಡಿ ತಿನ್ನಲು ಬಂದು ಕುಳಿತಿರಬಹುದೆಂದು; ಪುಟ್ಟ ಡಬ್ಬಿಯಲ್ಲಿ ಚಟ್ನಿಯೋ, ಚಟ್ನಿ ಪುಡಿಯೋ ಇರಬಹುದೆಂದು ಊಹಿಸಿದೆ. ತಿಂದಾದ ಮೇಲೆ ಎದ್ದು ಹೂಗಬಹುದೆಂದು ತಿಳಿದು, ಪಕ್ಕದಲ್ಲಿದ್ದ ಮಾವಿನ ಮರದ ಬೋಡ್ಡೆಯ ಬುಡಕ್ಕೆ ಹೋಗಿ ಕುಳಿತು ಕವಿತೆ ಬರೆಯಲು ಪ್ರಾರಂಭಿಸಿದೆ.

ನಾನು ಕುಳಿತ ಮಾವಿನ ಮರ ಬಾವಿಗಿಂತಲೂ ಸ್ವಲ್ಪ ಹಿಂದೆ ಇದ್ದುದ್ದರಿಂದ ನಾನು ಬಂದು ಕುಳಿತದ್ದು ಅವರಿಗೆ ಗೊತ್ತಾಗಲಿಲ್ಲ. ನನಗವರ ಮಾತು ಸ್ಪಷ್ಟವಾಗಿ ಕೇಳಿಸುತ್ತಿತ್ತು. ಅವರ ಹೆಸರುಗಳನ್ನಿಲ್ಲಿ ಪ್ರಸ್ತಾಪಿಸುವುದು ಬೇಡ; ಒಬ್ಬನಿಗೆ ಹೆಗಡೆ ಎಂದೂ, ಇನ್ನೊಬ್ಬನಿಗೆ ಭಟ್ಟ ಎಂದೂ ಕರೆಯೊಣ. ಬರೆಯುವುದನ್ನು ಒಂದು ಹಂತಕ್ಕೆ ನಿಲ್ಲಿಸಿ, ಅವರ ಸಂಭಾಷಣೆಯ ಕಡೆಗೂ ಸ್ವಲ್ಪ ಕಿವಿಗೂಟ್ಟೆ. ಹೀಗೆ ಕದ್ದಾಲಿಸಿದ್ದೆ ತಪ್ಪಾಯಿತು!!! ನಡೆಯಬಾರದ್ದು ನಡೆಯುತ್ತಿರುವುದು ಅರಿವಿಗೆ ಬಂತು. ನನ್ನೂರಲ್ಲಿ, ಅದೂ ಹಳ್ಳಿಯ ಕಾಲೇಜಿನಲ್ಲಿ ಯಾರೂ ಉಹಿಸದೇ ಇರುವ೦ಥದ್ದು ನನಗೆ ಗೊಚರಿಸಿ, ಮನಸ್ಸೆಲ್ಲ ಹಾಳಾಯಿತು.

ಅವರ ಸಂಭಾಷಣೆ ಹೀಗಿತ್ತು-
ಹೆಗಡೆ-"ಏನೋ ದೋಸ್ತ, ಇದು ಕಿಕ್ಕೇ ಇಲ್ಲ?"
ಭಟ್ಟ-"ಬಾಯಲ್ಲಿಟ್ಟ ಕೂಡಲೇ ಉರಿ ಹತ್ತಲಿಕ್ಕೆ ಇದೇನು ಮೆಣಸಿನ ಕಾಯಿಯ?! ತಾಳ್ಮೆ ಇರಲಿ"
ಹೆಗಡೆ-" ಮಾಲು ಎಲ್ಲಿಯದು?"
ಭಟ್ಟ-"ಅದೇ, ಗೋವಾ ಪೂಜಾರಿ"
ಹೆಗಡೆ-"strong ಪುಡಿಯನ್ನು ಸೆರಿಸಿದ್ದಾನಾ ಕೇಳಿ ತಂದ್ಯಾ?"
ಭಟ್ಟ-"ಮೂರೂ ವರುಷದಿಂದ ಕೊಡ್ತಾ ಇರೋವ್ನಿಗೆ ಮತ್ತೆಂತ ಕೇಳಿ ತರದು?"
ಹೆಗಡೆ-" ಗೋವಾ ಪೂಜಾರಿಯಿಂದ ತಗಳವಾಗ್ಲೆ ಒಂದ್ಸಲ ಮೂಸಿ ನೋಡೇ ತರಬೆಕಿತ್ತು. ಈ ಸಲದ್ದು ಮಾಲು ಏನೇನೂ ಸರಿಯಿಲ್ಲ. special ಪುಡಿ ಹಾಕಿದ್ದೇ ಸುಳ್ಳು"
ಭಟ್ಟ-"ಏಯ್! ಸುಮ್ನಿರೊ. ಸಿಕ್ತಾ ಇರೋದೇ ಹೆಚ್ಚು, ಇವನ ತಲೆಹರಟೆ ಬೇರೆ! ಗೋವಾ ಪೂಜಾರಿ ಆಗಿದ್ದಕೆ ಎಲ್ಲಿಂದಾದ್ರು ತಂದು ಕೊಡ್ತಾ ಇರದು, ಅದೂ special ಪುಡಿ ಹಾಕಿ. ಮನುಷ್ಯನಿಗೆ ನಂಬಿಕೆ ಮುಖ್ಯ. ನೀನು ಮತ್ತೆ ಬಾಯಿ ತೆಗದ್ರೆ, ನಾನು ನಿನನ್ನ ಈ ಬಾವಿಗೆ ನೂಕದು ಗ್ಯಾರಂಟಿ!"

ಅಲ್ಲಿಗೆ ಹೆಗಡೆ ಸುಮ್ಮನಾದ. ಭಟ್ಟನೂ "ನಶಾ ಹೆ ಪ್ಯಾರ್ ಕ ನಶಾ ಹೆ" ಎಂದು ಹಾಡು ಗುನುಗುತ್ತ ಕುಳಿತ. ಸ್ವಲ್ಪ ಹೊತ್ತಿಗೆ ಪುಟಾಣಿ ಸ್ಟೀಲ್ ಡಬ್ಬಿಯ ಮುಚ್ಚಳ ಹಾಕಿದ ಸದ್ದೂ ಕೇಳಿಸಿತು. ಅವ್ರು ಎದ್ದು ಹೊರಟರೆ, ನಾನು ಮಾವಿನ ಮರದಡಿ ಕುಳಿತಿರುವುದು ಕಾಣಿಸಿದರೆ- ಎಂದು ಭಯವಾಗಿ, ಸದ್ದು ಮಾಡದೇ ವೇಗವಾಗಿ ನಡೆದು ಕಾಲೇಜ್ ಕಡೆಗೆ ಹೋಗಿ, ಲೈಬ್ರರಿ ಯಲ್ಲಿ ಕುಳಿತೆ. ನನ್ನ ಬಳಿ ಯಾವುದೇ ಸಾಕ್ಷಿ ಇಲ್ಲವೆಂದು ಯಾರಿಗೂ ದೂರು ಕೊಡಲು ಹೋಗಲಿಲ್ಲ. ಇಂಥ ವ್ಯಸನಿಗಳು ನನಗೆಲ್ಲಾದರು ತೊಂದರೆ ಮಾಡಿದರೆ ಎಂಬ ಭಯದಿಂದಲೂ ಸುಮ್ಮನಾದೆ.

ಸುಮಾರು ವರ್ಷಗಳ ನಂತರ, ಬೆಂಗಳೂರಿನಲ್ಲಿ ನಾನು ಕೆಲಸ ಮಾಡುತ್ತಿದ್ದ ಒಂದು ಟೆಕ್ ಪಾರ್ಕ್ ಬದಿಯಲ್ಲಿರುವ ಟೀ ಅಂಗಡಿಯಲ್ಲೊಂದು ದಿನ ಭಟ್ಟ ಸಿಕ್ಕಿದ. ಹಳೆಯದೆಲ್ಲ ನೆನಪದರೂ, ನನ್ನ ಉರಿನವ ಎಂದೂ, ನನ್ನ ಕ್ಲಾಸ್ ಮೇಟ್ ಎಂದೂ ಖುಷಿಯಿಂದ ಚೆನ್ನಾಗಿಯೇ ಮಾತನಾಡಿದೆ. ನಂತರ ದಿನಗಳಲ್ಲಿ ಟೀ ಅಂಗಡಿಗೆ ಬಂದಾಗ ಆಗಾಗ ಸಿಗುತ್ತಿದ್ದ. ಚೆನ್ನಾಗಿ ಗೆಳೆತನ ಆದಮೇಲೆ ಒಂದು ದಿನ ಕೇಳಿದೆ- "ಸಿಗರೇಟು ಸೆದಲ್ವಾ?"
ಅವನ ಉತ್ತರ-"ಇಲ್ಲ"
"ಕುಡಿತ?"
"ನೋ!"
"ಸುಳ್ಳು ಹೇಳುತಿಯಾ?"
"ಸಿಗರೇಟು ಸೇದದಿರುವುದಕ್ಕೆ ಟೀ ಅಂಗಡಿಯವನೆ ಸಾಕ್ಷಿ!"
"ಹಾಗಾದರೆ, ಗಾಂಜಾ, ಹೆರಾಯಿನ್ ಮಾತ್ರ?"
"ಯಾರು?!!!!"ಎಂದನು ಜೋರಾಗಿ ನಗಹತ್ತಿದ. "ಏನಂದುಕೊಂಡಿದ್ದಿಯ ನನ್ನ?" ಎಂದು ಗಂಭೀರನಾದ. ನಾನು ಅಂದು ನಡೆದ ಘಟನೆಯನ್ನು ನಾನು ಕಂಡಂತೆ,ಕೇಳಿಸಿಕೊಂದಂತೆ ವಿಸ್ತಾರವಾಗಿ ವಿವರಿಸಿದೆ.

ಅವನು " ಕಾಲೇಜಿನ ಪ್ರಿನ್ಸಿಪಾಲರಿಗೊ, ಪೊಲೀಸ್ ಗೋ ದೂರು ದಾಖಲಿಸದುದಕ್ಕೆ ತುಂಬಾ ಧನ್ಯವಾದಗಳು ಮಾರಾಯ್ತಿ!"

"ಅವತ್ತು ನೀನು ನಮ್ಮನ್ನು ಅಲ್ಲಿಯೇ ಮತನಾಡಿಸಿದ್ದರೆ ವಿಶೇಷ ರುಚಿಯ ಕಬ್ಬಿನ ಹಾಲು ಸಿಗುತ್ತಿತ್ತಲ್ಲ!! ಗೋವಾ ಪೂಜಾರಿ ಒಬ್ಬ ಕಾಳು ಮೆಣಸಿನ  ವ್ಯಾಪಾರಿ. ಆಸುಪಾಸಿನಲ್ಲಿ ಎಲ್ಲೇ ಆಲೆಮನೆ ಆದರೂ, ನಮಗೆ ಕಬ್ಬಿನ ಹಾಲನ್ನು ತರಿಸಿ ಕೊಡುತ್ತಿದ್ದ. ಅದಕ್ಕೆ ಶು೦ಠಿ ಮತ್ತು ಜಾಯಿ ಕಾಯಿ ಪುಡಿಯನ್ನು ಹದವಾಗಿ ಬೆರೆಸಿ ಕೊಡುತ್ತಿದ್ದ. ಜಾಯಿ ಕಾಯಿ ನಿದ್ದೆ ಬರಿಸಲೂ, ಶು೦ಠಿ ನಿದ್ದೆಯನ್ನು ತಡೆಯಲು ಸಹಕಾರಿ. ಅದನ್ನೇ ಒಂದು ರೀತಿಯ ಅಮಲೆಂಬ ಭ್ರಮೆಯಲ್ಲಿ ನಾವಿದ್ದೆವು. ಹೆಗಡೆ ಅವತ್ತು ಕಿಕ್ ಎಂದಿದ್ದು ಅದಕ್ಕೇ. ಮತ್ತು, ಅವನು ಹಾಲು ಎಂದಿದ್ದು ನಿನಗೆ ಮಾಲು ಎಂದು ಕೇಳಿಸಿರಬೆಕು."

" ಮತ್ತೆ ಆ ಪುಟಾಣಿ ಡಬ್ಬಿಯಲ್ಲಿ ಏನಿತ್ತು?"
"ಉಪ್ಪಿನಕಾಯಿ!!!!!"

ಸೋಮವಾರ, ಮಾರ್ಚ್ 12, 2018

ಕಪ್ಪು ಹುಡುಗ (racism)

ಕಪ್ಪು ಹುಡುಗನಿಗೆ ಮುತ್ತು ಕೊಟ್ಟವಳು
ನಡುಗಿಹೋದಳು.
ಅವಳ ಭೂಮಿಯೇ ಕುಸಿದುಹೋಯಿತು.
ರಕ್ತ ಹೆಪ್ಪುಗಟ್ಟಿ ಮೈಯೆಲ್ಲ ಕಪ್ಪಗಾಯಿತು-
ಮೈಲಿಗೆ ಎಂದರೆ ಇದೇ ಇರಬೇಕು!
ವರ್ಣಭೇದ ಪದ್ದತಿಯ ಮೂರ್ತಿಯೇ ಅವನಾಗಿ ನಿಂತತೆನ್ನಿಸಿ,
ಪ್ರೀತಿಯ ಮುತ್ತೇ ತನಗೆ ಮುಳುವಾಗಿದ್ದು ಕಂಡು ರಕ್ತಕಾರಿದಳು.
ರಕ್ತಕಾರಿ ಕಾರಿ ಕರಗಿಹೋಗುತ್ತಿದ್ದ ಅವಳ ದೇಹಕ್ಕೆ
ರಕ್ತದಾನ ಮಾಡಿದವನು ಅವನೇ!
ಇಬ್ಬರ ರಕ್ತದ ಗುಂಪೂ ಒಂದೇ ಅಂತೆ.
ದೇಹ ಕಪ್ಪಾದರೂ ಒಳಗಿರುವ ರಕ್ತ ಕೆಂಪೇ!

ಶನಿವಾರ, ಮಾರ್ಚ್ 10, 2018

Inspired by Kateri music video-

ಹಣ್ಣನ್ನು ಸಿಹಿಯೆಂದವರೇ ಕಹಿ ಎಂದರು,
ಹೆಣ್ಣನ್ನು ದೇವಿಯೆಂದವರೇ ರಾಕ್ಷಸಿ ಎಂದರು.
ಬೆಳಕಿನ ವೇಷ ಹಾಕಿ,
ಬೆಳಕನ್ನೇ ಬಚ್ಚಿಟ್ಟರು.
 ಶ್ವೇತ ಕುಬ್ಜವಾದರು.

ಹಣ್ಣನ್ನು ತಿಂದವರೇ ತಿರುಗಿ ಕಕ್ಕಿಕೊಂಡರು,
 ಹೆಣ್ಣನ್ನು ಕೊಂದವರೇ ಪಾಪವ ದಕ್ಕಿಸಿಕೊಂಡರು.
ಬೆಳಕಿಗೆ ಕಣ್ಣರಳಿಸಿ
ಬೆಳಕಿನ ಕಣ್ಮುಚ್ಚಿಸಿ,
 ಕೆಂಪು ದೈತ್ಯವಾದರು.

ಹಣ್ಣನ್ನು ಬಿಸಾಕಿ,
ಹೆಣ್ಣನ್ನು ಹೊಸಕಿಹಾಕಿ,
ಕಾಲ ಕಳೆಯಹೊರಟವರು ದೇಶ-ಕಾಲದಲ್ಲಿ ಆಯಾಮವಿಲ್ಲದೆ ಹೀನವಾದರು.