ಬುಧವಾರ, ಮೇ 30, 2018

ಬಡವನ ಉದ್ಧಾರವೂ ಆದೀತೇನೋ!

ಬೆಂಗಳೂರಿನ ರೆಸಿಡೆನ್ಷಿಯಲ್ ಏರಿಯಾದ ರಸ್ತೆಯ ಬದಿಯಲ್ಲೊಂದು ಟ್ಯಾಕ್ಸಿ ನಿಂತಿತ್ತು. ಪೂರ್ತಿ ಕೆಂಪು ಗುಲಾಬಿಯಿಂದಲೇ ಮಾಡಿದ ದೊಡ್ಡದೊಂದು ಮಾಲೆಯನ್ನು ಟ್ಯಾಕ್ಸಿಗೆ ಹಾಕಿದ್ದರು. ಹೆಬ್ಬಾವಿನ ಗಾತ್ರದ ಮಾಲೆ. ಅಷ್ಟೊಂದು ದೊಡ್ಡ ಮಾಲೆಯನ್ನು ನಾನು  ಯಾವತ್ತೂ ಮುಟ್ಟಿ ನೋಡಿದ್ದೂ ಇಲ್ಲ, ಹತ್ತಿರದಿಂದ ನೋಡಿದ್ದೂ ಇಲ್ಲ.
ಮಾಲೆಯನ್ನು ನೋಡಿಯಾದ ಮೇಲೆ ಟ್ಯಾಕ್ಸಿ ಡ್ರೈವರ್ ನನ್ನು ಮಾತನಾಡಿಸಿದೆವು.  ಅವನ ಅಣ್ಣನ ಗೆಳೆಯ ತಾಲೂಕ ಪಂಚಾಯತ್ ಅಧ್ಯಕ್ಷನೆಂದೂ, ಅವನ ಸನ್ಮಾನಕ್ಕೆಂದು ಯಾರೋ ತಂದ ಮಾಲೆ ಅದೆಂದೂ ತಿಳಿಯಿತು. ಮಾಲೆಯ ಬೆಲೆ 10,000 ರೂಪಾಯಿಗಳೆಂದೂ ತಿಳಿಯಿತು.

ಇವಿಷ್ಟು ನಡೆಯುತ್ತಿರುವಾಗ ಪಕ್ಕದ ಗಾರೆ ಕೆಲಸದವರ ಶೆಡ್ ನಿಂದ ಕೇಳಿಬಂದ ಮಾತು ಹೀಗಿತ್ತು-
ಹೆಂಗಸು -" ನಮಗೇ ಸರಿಯಾಗಿ ಉಣ್ಣಾಕೆ ಇಲ್ಲ, ಇನ್ನು ಈ ಮಕ್ಳು ಹಸ್ದು ಅಳದು ನೋಡಕೆ ಹಿಂಸೆ."
ಗಂಡಸು- "ಹುಟ್ಸಿದ್ ದೇವರು ಹುಲ್ಲು ಮೇಯ್ಸಕಿಲ್ವಾ?"
ಹೆಂಗಸು - " ಮೇಯಾಕೆ ಹುಲ್ಲಾದ್ರೂ ಎಲ್ಲಯ್ತಿ ಈ ಊರಲ್ಲಿ? ದಿನಾ..."
ಮುಂದೆನೋ ಹೇಳುವವಳಿದ್ದಳು, ಆದರೆ ಅಷ್ಟರಲ್ಲಿ ಮಕ್ಕಳ ಗಲಾಟೆ ಶುರುವಾಯಿತು.

ಪುಟ್ಟ ಮಗುವೊಂದು ಪುಟ್ಟ ಪಾತ್ರೆಯನ್ನು ಕೈಲಿ ಹಿಡಿದುಕೊಂಡು ರಸ್ತೆಗೆ ಓಡಿಬಂತು. ಹಿಂದೆಯೇ ಇನ್ನಿಬ್ಬರು ಪುಟ್ಟ ಪುಟ್ಟ ಮಕ್ಕಳು ಬಂದರು. ಪಕ್ಕದಲ್ಲೇ ಇದ್ದ ಜಲ್ಲಿ ರಾಶಿಯ ಮೇಲೆ ಕುಳಿತು ಪಾತ್ರೆಯಲ್ಲಿದ್ದ ಅವಲಕ್ಕಿಯನ್ನು ತಿನ್ನಲಾರಂಭಿಸಿದರು.
ನಾನೂ, ನನ್ನ ಪತಿಯೂ ಇತ್ತ ಟ್ಯಾಕ್ಸಿ ಡ್ರೈವರ್ ನೂಡನೆ ಮಾತನಾಡುತ್ತಲೇ ಇದ್ದೇವೆ, ಅತ್ತ ನಮ್ಮ 2 ವರ್ಷದ ಮಗಳು ಆ ಮಕ್ಕಳ ಬಳಿ ಹೋಗಿ ಕುಳಿತಿದ್ದಾಳೆ. ಆ ಮಕ್ಕಳು ಇವಳಿಗೆ ಒಂದು ತುತ್ತನ್ನೂ ಹಾಕಿ ಆಗಿದೆ.

ಅಂದುಕೊಂಡೆ- ಬಡವನ ಮನೆಯ ಊಟ ಚಂದ, ದೊಡ್ಡವನ ಮನೆಯ ನೋಟ ಚಂದ.


ನಿಧಾನವಾಗಿ ಯೋಚಿಸಿದಾಗ ಅನ್ನಿಸಿದ್ದು- 10 ಸಾವಿರ ರೂಪಾಯಿಯ ಮಾಲೆಯನ್ನು ಕಟ್ಟಲು ಅದೆಷ್ಟು ಜನ ಶ್ರಮ ಪಟ್ಟಿದ್ದಾರೋ- ಹೂವಿನ ಗಿಡ ಬೆಳೆಸುವುದರಿಂದ ಹಿಡಿದು, ಮಾಲೆಯನ್ನು ಕಟ್ಟಿ ಸನ್ಮಾನ ಸಮಾರಂಭಕ್ಕೆ ತಲುಪಿಸಿದವರ ವರೆಗೆ ಎಲ್ಲರಿಗೂ ಅವರವರ ಕೂಲಿ ಸಂದಾಯವಾಗಿದೆ.

ಶ್ರೀಮಂತರನ್ನು ಹೆಚ್ಚು ಹೆಚ್ಚು ಖರ್ಚು ಮಾಡಲು ಪ್ರಾತ್ಸಾಹಿಸಿದರೆ ಬಡವನ ಉದ್ಧಾರವೂ ಆದೀತೇನೋ!

ಮಂಗಳವಾರ, ಮೇ 29, 2018

ನೀನು ಒಮ್ಮೆ ಸತ್ತವನು; ನಾನು ದಿನವೂ ಸಾಯುವವನು (ಕವಿತೆ)


ಕ್ರೂರ ನೋವನ್ನು ಹೊರಗಟ್ಟಿದಷ್ಟೇ ವೇಗದಲ್ಲಿ
ಮತ್ತೆ ಒಳಬಂದು ಚುಚ್ಚಿಕೊಳ್ಳುತ್ತದೆ.

 ನೀನು ಒಮ್ಮೆ ಸತ್ತವನು;
ನಾನು ದಿನವೂ ಸಾಯುವವನು.

ಸತ್ತವರು ಸಾಯುವುದೇ ಇಲ್ಲ
ಸತ್ತವರು ಎಲ್ಲೂ ಹೋಗುವುದಿಲ್ಲ.
ನೆನಪುಗಳಿಗೆ ಸಾವಿಲ್ಲ
ಅವು
ಬದುಕಿರುವವರನ್ನು ಸಾಯಿಸುತ್ತಲೇ ಇರುತ್ತವೆ.

ಜೋರಾಗಿ ಕೂಗಿ ಕರೆಯಬೇಕೆನ್ನಿಸುತ್ತದೆ
ಆದರೇನು,
ಸತ್ತವನ ಕಿವಿಯೂ ಚಟ್ಟವೇರಿದೆ.

ಮಳೆಗೆ ಕಣ್ಣೀರು ಮರೆಸುವ ಶಕ್ತಿಯಿಲ್ಲ,
ಗಾಳಿಗೆ ಕಣ್ಣೀರು ಒರೆಸುವ ಶಕ್ತಿಯಿಲ್ಲ,
ಉರಿವ ಬೆಂಕಿಗೆ ಸಾವಿರ ಸಲ ಧುಮುಕಿ ಎದ್ದರೂ
ಒಳಗಿನ ವೇದನೆ ರೋಧನೆಯೇ!






ಗುರುವಾರ, ಮೇ 17, 2018

ಹೇಳುವುದು ಬಹಳಷ್ಟಿದೆ! ನನಗೂ ಕೋಪ ಬಂದಿದೆ! (ಸುಮ್ಮನೆ ಒಂದು ಕವನ)

ತೆರೆದಿಡಲಾಗದ ಹಲವು ಮುಖಗಳಿವೆ ನನ್ನಲ್ಲಿ
ಇಂಬುಕೊಡದೇ ಮೊಗೆದು ಹೊರಚೆಲ್ಲಿದ್ದೇನೆ.
ಇನ್ನೊಂದು, ಮತ್ತೊಂದು, ಮಗದೊಂದು ಮುಖವಾಡಗಳ
ಪೀಠಿಕೆಯ ಪ್ರವೇಶಕ್ಕೂ ಎಣೆಯಿಲ್ಲದಷ್ಟು
ಪುರುಸೊತ್ತಿಲ್ಲದೇ
ಎಲ್ಲವನ್ನೂ ಬದಿಗೊತ್ತಿದ್ದೇನೆ.

ನಾಟಕ ಶಾಲೆಯ ಕದ ಮುಚ್ಚಿ
ಬಯಲಾಟಕ್ಕೆ ಹಪಹಪಿಸುವ ಕಾಲ
ಮತ್ತೆ ಬಾರದೇ,
ನನ್ನ ತೆರೆದ ಮುಖದ ಭಾವಗಳನ್ನು
ಬಣ್ಣ ಮೆತ್ತಿ ಕದ್ದು ಮುಚ್ಚಿ ಮುಚ್ಚಿಟ್ಟಿದ್ದೇನೆ.

ಕೋಳ ಹಾಕಿಕೊಂಡ ಕೈಗಳೂ
ಬಳೆ ತೊಟ್ಟ ಕೈಗಳೂ
ಕಣಕ್ಕಿಳಿದು ಕೀಟಲೆ ಎಬ್ಬಿಸುವಲ್ಲೆಲ್ಲ
ಕಣ್ಣ ಬಣ್ಣವೆಲ್ಲ ನೀರೊಡನೆ ಹರಿದು
ವಿರೋಧ ವ್ಯಕ್ತವಾಗಿದೆ;
ಕಾಟ ತಾಳದೇ ವಿಲ ವಿಲ ಒದ್ದಾಡಿ ಸತ್ತ
ಕೋಟಿ ಕೋಟಿ ಹುಳುಗಳಿಗಾಗಿ ಅತ್ತಿದ್ದೇನೆ.

ನನ್ನಲ್ಲೂ ಹಲವು ಮುಖಗಳಿವೆ,
ಹಲವು ಸನ್ನಿವೇಶಗಳಲ್ಲಿ
ಬಿಚ್ಚಿಡಲೂ ಆಗದೇ
ಮುಚ್ಚಿಡಲೂ ಆಗದೇ
ಒಳಗೊಳಗೇ ಸತ್ತಿದ್ದೇನೆ!

ಶುಕ್ರವಾರ, ಮೇ 11, 2018

ತೀರದ ಸಾಲ (90ರ ದಶಕದ ಕಥೆ)

ಶಾಲೆಯ ಎದುರು ಐಸ್ ಕ್ಯಾಂಡಿವಾಲಾ ಬಂದಾಗಲೆಲ್ಲ ಅದನ್ನು ತಿನ್ನುವ ಆಸೆ ರೇವತಿಗೆ ಆಗುತ್ತಿದ್ದುದು ಸಹಜವಾಗಿದ್ದೇ ಆದರೂ, ಆ ದಿನ ಯಾಕೋ ದೊಡ್ಡ ಶಾಸ್ತ್ರಿಗಳ ಮಗಳು ಶಿಲ್ಪಾಳಿಂದ 50 ಪೈಸೆ ಸಾಲ ಪಡೆದು ಒಂದು ಐಸ್ ಕ್ಯಾಂಡಿಯನ್ನು ತಿಂದೇಬಿಟ್ಟಳು. ವರ್ಷಕ್ಕೊಮ್ಮೆ ಊರ ಜಾತ್ರೆಗೆಂದು ಅಪ್ಪ ಕೊಡುತ್ತಿದ್ದ ಐದೋ-ಹತ್ತೋ ರೂಪಾಯಿಗಳಲ್ಲಿ ಗರಿಷ್ಟ ಲಾಭ ಪಡೆಯುವ ಸಲುವಾಗಿ - ಇವಳಾಗಲೀ, ಇವಳ ಅಕ್ಕನಾಗಲೀ- ತಿನ್ನುವುದನ್ನೇನೂ ಕೊಳ್ಳದೇ, ಬಳೆಯನ್ನೋ, ಸರವನ್ನೋ ಕೊಂಡುಕೊಳ್ಳುತ್ತಿದ್ದರು. ಪೇಟೆಗಂತೂ ಹೋಗುತ್ತಿದ್ದುದೇ ಇಲ್ಲ, ಊರ ಆಸುಪಾಸಿನಲ್ಲೆಲ್ಲೂ ಅಂಗಡಿಗಳೂ ಇಲ್ಲ.

ಐಸ್ ಕ್ಯಾಂಡಿಯನ್ನು ಬೇರೆಯವರು ಸವಿಯುವಾಗ ಮಾಡುವ ತಣ್ಣನೆಯ ಆಸ್ವಾದನೆ ಏನೆಂಬುದೂ 10 ವರ್ಷದ ಇವಳಿಗೆ ಗೊತ್ತಿರಲಿಲ್ಲ. ಈಗ ಐಸ್ ಕ್ಯಾಂಡಿಯನ್ನು ತಿಂದವಳು, ಈ ಸಲ ಊರ ಜಾತ್ರೆಯಲ್ಲೂ ಒಂದು ತಿನ್ನುವುದೇ ಎಂದು ನಿರ್ಧರಿಸಿದಳು. ಐಸ್ ಕ್ಯಾಂಡಿಯ ಬಣ್ಣದಿಂದಾಗಿ ನಾಲಿಗೆ, ತುಟಿಗಳೆಲ್ಲ ಕೇಸರಿ ಬಣ್ಣಕ್ಕೆ ತಿರುಗಿದ್ದವು. ನಾಲಿಗೆಯನ್ನು ಹಲ್ಲುಗಳಿಗೆ ಉಜ್ಜಿಕೊಳ್ಳುತ್ತಾ ಮನೆಯ ಕಡೆಗೆ ಹೆಜ್ಜೆ ಹಾಕಿದಳು. ಆ ದಿನವೆಲ್ಲ ಐಸ್ ಕ್ಯಾಂಡಿಯ ಗುಂಗಿನಲ್ಲೇ ಕಳೆದಳು. ರಾತ್ರಿ ಕನಸಿನಲ್ಲಿಯೂ ಐಸ್ ಕ್ಯಾಂಡಿ ಬಂತು.

ಮಾರನೇ ದಿನ ಶಾಲೆಯ ಒಳಗೆ ಕಾಲಿಡುತ್ತಿದ್ದಂತೆ ದೊಡ್ಡ ಶಾಸ್ತ್ರಿಗಳ ಮಗಳು, ಶಿಲ್ಪ, ಬಂದು 50 ಪೈಸೆ ಸಾಲವನ್ನು ನೆನಪಿಸಿ ಹೋದಳು. ಸಂಜೆ ಮನೆಗೆ ಹೋದಮೇಲೆ ಅಪ್ಪನನ್ನು ಹೇಗಾದರೂ ಮಾಡಿ ಕೇಳೋಣ ಎಂದುಕೊಂಡಳು. ಸಂಜೆ ಅಂಗಳದಲ್ಲಿ ಕಾಲು ತೊಳೆದು ಮನೆಯೊಳಗ ಕಾಲಿಡುತ್ತಿದ್ದವಳಿಗೆ ಅಪ್ಪ ಅಮ್ಮ ಮಾತನಾಡಿಕೊಳ್ಳುತ್ತಿರುವುದು ಕೇಳಿಸಿತು- " ಈ ವರ್ಷ ಕೊಳೆ ರೋಗಕ್ಕೆ ತುತ್ತಾಗಿ ಅಡಿಕೆ ಬೆಳೆಯೆಲ್ಲ ಹಾಳಾಗಿ ಹೋತು. ಖರ್ಚು ತೂಗಿಸ್ಕಂಡು ಹೋಗದು ಹ್ಯಾಂಗನ? ಸಾಲಮಾಡಿ ಮರ್ಯಾದಿ ಕಳದು ಹೋಗ ಹಾಂಗೆ ಆಗದಿದ್ರೆ ಸಾಕು!"

ಸಾಲ ಮಾಡುವುದೆಂದರೆ ಮರ್ಯಾಡೆಗೇಡು ಎಂದು ರೇವತಿಗೆ ಗೊತ್ತಾಯಿತು. ಆದರೆ, ಮನೆಯ ಸ್ಥಿತಿ ಹೀಗಿರುವಾಗ ಅಪ್ಪನನ್ನ ಕೇಳುವುದು ಹೇಗೆ? ಗಾಬರಿಯಾಯಿತು. ಅಪ್ಪ ಒಮ್ಮೊಮ್ಮೆ ಸ್ವಿಚ್ ಬೋರ್ಡ್ ಮೇಲೋ ಅಥವಾ ಮಹಡಿ ಹತ್ತುವ ಮೆಟ್ಟಿಲ ಮೇಲೋ ನಾಣ್ಯಗಳನ್ನಿಟ್ಟು ಅಮ್ಮನ ಬೈಗುಳಕ್ಕೆ ಗುರಿಯಾಗುತ್ತಿದ್ದುದು ನೆನಪಾಯಿತು.ಹಣ ಎಲ್ಲೆಂದರಲ್ಲಿ ಇಡುವ ವಸ್ತುವಲ್ಲವಲ್ಲ. ಮಹಡಿಯ ಮೆಟ್ಟಿಲಿನ ಮೇಲೆ ಒಂದು ರುಪಾಯಿಯ ನಾಣ್ಯವಿತ್ತು. ಯಾರೂ ಇಲ್ಲದ ಹೊತ್ತು ನೋಡಿ, ಅದನ್ನು ತನ್ನ ಪಾಟಿ ಚೀಲದಲ್ಲಿ(ಸ್ಕೂಲ್ ಬ್ಯಾಗ್) ಇಟ್ಟುಕೊಂಡಳು.

ರೇವತಿ ಬೆಳಿಗ್ಗೆಯಿನ್ನೂ ಹಾಸಿಗೆಯಲ್ಲಿರುವಾಗಲೇ, ಅಮ್ಮನ ಮೇಲೆ ಕೋಪದಿಂದ ಹರಿಹಾಯುತ್ತಿರುವ ಅಪ್ಪನ ದ್ವನಿ ಕೇಳಿಸಿತು.
"ಒಂದು ವಸ್ತುನೂ ಇಟ್ಟ ಜಾಗದಲ್ಲಿ ಇರದಿಲ್ಲೆ. ನಿನ್ನೆ ಸಂಜೆ ಅಷ್ಟೇ ಏಣಿ ಮೆಟ್ಟಿಲ ಮೇಲೆ ಇಟ್ಟಿದ್ದಿ, ಬೆಳಿಗ್ಗೆ ನೋಡಿದ್ರೆ ಮಾಯಾ! ನೀನು ಗುಡಿಸಿ ಕಸದ ಜೊತೆ ಬಿಸಾಕಿದ್ಯನ?!"
ಅಮ್ಮ ಸಮಾಧಾನವಾಗಿ ಉತ್ತರಿಸಿದಳು- "ನೀವೇ ಬೇರೆಲ್ಲಾದ್ರೂ ಇಟ್ಟು ಮರೆಯದು ಹೊಸದಲ್ಲ. ಬೇರೆದು ಕೊಡ್ತಿ ತಗಳಿ".
ಅಮ್ಮ ಕೊಟ್ಟ ಸಾರಿ ಪಿನ್ ತೆಗೆದುಕೊಂಡು, ಅಪ್ಪ ಹಲ್ಲು ಪೆರಟುತ್ತ ಹೋಗಿದ್ದು ಹಾಸಿಗೆ ಸುತ್ತಿಡುತ್ತಿದ ರೇವತಿಗೆಲ್ಲಿಂದ ಗೊತ್ತಾಗಬೇಕು?!
ಅಪ್ಪ ಕೆಂಡಕಾರಿದ್ದು ತಾನು ಕದ್ದ ರೂಪಾಯಿಯ ಸಲುವಾಗಿಯೇ ಇರಬೇಕೆಂದುಕೊಂಡು, ಓಡಿಹೋಗಿ ಪಾಟಿ ಚೀಲದಲ್ಲಿ ಇಟ್ಟುಕೊಂಡಿದ್ದ ರೂಪಾಯಿಯ ನಾಣ್ಯವನ್ನು ಮರಳಿ ಮಹಡಿಯ ಮೆಟ್ಟಿಲ ಮೇಲೆ ಇಟ್ಟು, ಯಾರೂ ನೋಡಲಿಲ್ಲವೆಂಬುದನ್ನು ಪಕ್ಕಾ ಮಾಡಿಕೊಂಡಳು. ಮತ್ತೆ ಸಾಲ ತೀರಿಸುವ ಚಿಂತೆ ಶುರುವಾಯಿತು. ಇದಾದ ಮಾರನೆಯ ದಿನ, ಭಾನುವಾರ, ಮಾಗಿ ಚಳಿಗೆ ನಿಗುಟಿ, ನೆರೆಮನೆಯ ಕೇಶವ ಭಟ್ಟರು ನೆಗೆದುಬಿದ್ದರು. ಅವರ ಮೂಮ್ಮೊಗಳ ಜೊತೆ ಇವಳೂ ಚಟ್ಟದ ಹಿಂದೆ ಹಿಂದೆ ಹೊರಟಳು. ಹೋಗುವ ಹಾದಿಯಲ್ಲಿ ಯಾರೋ ಬೀಳಿಸಿಕೊಂಡ ಒಂದು ಪೈಸೆಯ ನಾಣ್ಯವನ್ನು ಕಂಡು ಎತ್ತಿಕೊಳ್ಳಲು ಹೋದವಳನ್ನು ಕೇಶವ ಭಟ್ಟರ ಮೊಮ್ಮಗಳು ತಡೆದು, "ಎತ್ಕಬೇಡ ರೇವತಿ, ಅದನ್ನು ಅಪ್ಪನೇ ಬೀಳ್ಸಿದ್ದು. ಇದೊಂದು ಪದ್ಧತಿ. ಸತ್ತವರು ಲೋಕದ ಮೋಹ ಕಳಚಿಕೊಳ್ಳಲಿ ಹೇಳಿ ಹಾಗೆ ಮಾಡ್ತ"
ಇನ್ನೂ ಐದಾರು ಒಂದು ಪೈಸೆಯ ನಾಣ್ಯಗಳನ್ನು ಹೋಗುವ ಹಾದಿಯಲ್ಲಿ ಬಿಳಿಸುತ್ತ ಹೋದರು.
"ಯಾರು ಸತ್ರು ಒಂದು ಪೈಸೆ ನಾಣ್ಯನೇ ಬೀಳಸ್ತ್ವ?" ಕೇಳಿದಳು ರೇವತಿ.
"ನಾವು ಅಷ್ಟೆಲ್ಲ ಅನುಕೂಲಸ್ತರು ಅಲ್ದಲೆ ಅದಕ್ಕೆ ಕಡಿಮೆ. ಶ್ರೀಮಂತರ ಮನೆಯವರೆಲ್ಲಾ ಐದು ಪೈಸೆ, ಹತ್ತು ಪೈಸೆ ಎಲ್ಲಾ ಹಾಕ್ತ ಹೇಳಿ ಅಣ್ಣ ಒಂದ್ಸಲ ಹೇಳಿದ್ದ" ಎಂದಳು.

ರೇವತಿಯ ತಲೆಯಲ್ಲಿ ಯೋಚನೆಯೊಂದು ಸುಳಿದು ಹೋಯಿತು- ಊರ ದೊಡ್ಡ ಶಾಸ್ತ್ರಿಗಳ ತಾಯಿಯಾದರೂ ಸತ್ತಿದ್ರೆ!

ಶವ ಸುಡಲು ಹೋದವರೆಲ್ಲ ಅಷ್ಟೇ ಸ್ನಾನ ಮಾಡಿ, ಊಟ ಮಾಡಿ, ಕೈ ತೊಳೆಯುತ್ತಿದ್ದಿರಬೇಕು ಮತ್ತೊಮ್ಮೆ ಸ್ಮಶಾನಕ್ಕೆ ಹೋಗಲು ಅಣಿಯಾಗುವಂತಾಯಿತು.

ಈ ಸಲ ದೊಡ್ಡ ಶಾಸ್ತ್ರಿಗಳ ತಾಯಿ ಗಂಗಮ್ಮ!
ಸುದ್ದಿ ತಿಳಿಸಲು ಬಂದ ಶಾಸ್ತ್ರಿಗಳ ನೆರೆಮನೆಯ ಸೋಮೇಶಣ್ಣನ ಬಳಿ ಅಪ್ಪ ಮಾತಾಡುತ್ತಿದ್ದರು; "ಇನ್ನಾದ್ರೂ ಶಾಸ್ತ್ರಿಗಳ ಮನೆಯಲ್ಲಿ ಮಂಗಳ ಕಾರ್ಯಕ್ಕೆ, ತಿಥಿಗೆ ದೊಡ್ಡ ಲಾಡು, ದೊಡ್ಡ ಹಪ್ಪಳ ಮಾಡಿ ಬಡಸ್ಗು(ಬಡಿಸಬಹುದು)! ಜುಗ್ಗ(ಜಿಪುಣ) ಮುದುಕಿಯ ಕಾಲ ಅಂತೂ ಮುಗಿತು"

ರೇವತಿ ಈ ಸಲ ಹೆಣ ಸುಡಲು ಹೋಗಲಿಲ್ಲ. ಎಲ್ಲರೂ ಹೆಣ ಸುಟ್ಟು ಮನೆಗೆ ಹೋಗಿ ಸ್ನಾನ ಮಾಡುತ್ತಿರಬಹುದಾದ ಸಮಯ ನೋಡಿ, ಹೆಣ ಹೋದ ಹಾದಿಯಲ್ಲಿ ಹೋಗಿ ನಾಣ್ಯಗಳನ್ನೆಲ್ಲ ಆಯ್ಡುಕೊಂಡಳು. ಒಂದು ಪೈಸೆಯ ಐದು ನಾಣ್ಯಗಳೂ, ಐದು ಪೈಸೆಯ ಹನ್ನೊಂದು ನಾಣ್ಯಗಳೂ ಸಿಕ್ಕವು. ಒಟ್ಟೂ, ಅರವತ್ತು ಪೈಸೆಗಳಾದವು. ಊರ ಎದುರಿನ ಅರಳಿ ಮರದಲ್ಲಿರುವ ಬೀರಪ್ಪ ದೇವರ ಕಲ್ಲಿನ ಬುಡಕ್ಕೆ ಐದು ಪೈಸೆಯನ್ನಿಟ್ಟು ಕೈ ಮುಗಿದು, " ಬೀರಪ್ಪ, ಈ ಐವತ್ತು ಪೈಸೆಗಳನ್ನ ಸಾಲ ತೀರಿಸಲು ಉಳಿಸಿಕೊಂಡಿರದು.
ನಿಂಗೆ ಐದು ಪೈಸೆ ಕೊಟ್ಟೆ. ನಾನು ಐದು ಪೈಸೆ ಇಟ್ಟಕಂಡ್ರೆ ಅಡ್ಡಿಲ್ಲೆ ಅಲ್ದ!"

ರೇವತಿ ಸಾಲ ತೀರಿಸಿಯಾಯಿತು. ಜಿಪುಣ ಮುದುಕಿಯ ಮನೆಯ ದುಡ್ಡು ಮತ್ತೆ ಮನೆ ಸೇರಿತು!

ಬುಧವಾರ, ಮೇ 9, 2018

ಸಾವು ಯಾರನ್ನೂ ಹೆದರಿಸದೆ ಬಿಟ್ಟಿಲ್ಲ, ಬದುಕೂ ಅಷ್ಟೇ! (ಕಥೆ)

ಮಣಿಕರ್ಣಿಕಳನ್ನು ಉದ್ದೇಶಿಸಿ ಲೈಬ್ರರಿಯ ಒಂದು ಮೂಲೆಯಲ್ಲಿ ಯಾರೋ  ಬರೆದು ಅಡಗಿಸಿಡುತ್ತಿದ್ದ ಪತ್ರವನ್ನು ಓದಿ ಮುಜುಗರಕ್ಕೊಳಗಾದೆನೆಂದು ಅಂದುಕೊಂಡವಳಿಗೆ, ಮುಂದೊಂದು ದಿನ ಮಣಿಕರ್ಣಿಕಾ ಯಾರೆಂದು ಹುಡುಕುತ್ತ ಅಲೆಯುವ ಅನಿವಾರ್ಯತೆ ಬಂದಿದ್ದಾದರೂ ಏಕೆ?
ಅದೊಂದು ಪುಟ್ಟ ಕಥೆ.

ಎಂದಿನಂತೆಯೇ ಅಂದೂ ಕೂಡ  ಸಂಶೋಧನ ವಿದ್ಯಾರ್ಥಿಗಳಿಗೆಂದೇ ಮೀಸಲಿಟ್ಟ ಲೈಬ್ರರಿಯ ರೀಡಿಂಗ್ ರೂಮಿನ ಮೂಲೆಯ ಡೆಸ್ಕಿಗೆ ಬೆಳಿಗ್ಗೆ 9 ಘಂಟೆಗೇ ಹೋಗಿ ಕುಳಿತಿದ್ದೆ. ಡೆಸ್ಕಿನ ಡ್ರಾ ದಲ್ಲಿ ಹಿಂದಿನ ದಿನ ಅರ್ಧ ಓದಿ ಬಿಟ್ಟಿದ್ದ ಪುಸ್ತಕವಿತ್ತು. ಡ್ರಾ ಎಳೆದು ಪುಸ್ತಕ ಹೊರತೆಗೆದ ಮೇಲೆ ಅಲ್ಲೊಂದು ಮಡಿಚಿದ ಬಿಳಿಯ ಹಾಳೆ ಕಾಣಿಸಿತು. ತೆರೆದು ಓದಿದೆ. ಆ ಪತ್ರ ಹೀಗಿತ್ತು-

ನಲ್ಮೆಯ ಮಣಿಕರ್ಣಿಕಾ,
ನನ್ನ ಈ ಪತ್ರದ ಕೆಲವೇ ಸಾಲುಗಳನ್ನು ಓದಿ ಎಸೆದುಬಿಡಬೇಡ. ಇದು ನಿನಗೆ ಪ್ರೇಮಪತ್ರದಂತೆ ಕಾಣಿಸಬಹುದು, ಆದರೆ ನನಗಿದು ನನ್ನನ್ನು ತೆರೆದಿಡುವ ಒಂದು ಮಾಧ್ಯಮ.
ಪ್ರೀತಿಸುವ ಕಾಲದಲ್ಲಿ ಪ್ರೀತಿಸುವವರನ್ನು ಪ್ರೀತಿಸಿಬಿಡಬೇಕು.  ಪ್ರೀತಿಯ ಹಂಬಲದಲ್ಲೇ ಬದುಕು ಕಳೆಯುವುದಕ್ಕಿಂತ, ಪ್ರೀತಿಸಿ ಹಗುರಾಗುವುದೇ ಲೇಸು.
ಸ್ವಾಮಿ ವಿವೇಕಾನಂದರು ದೇವರನ್ನು ಕಂಡವರು. ಕಾಳಿ ಇರುವಳೆಂಬ ನಂಬಿಕೆಯೇ ಅವರಿಗಾದ ದರ್ಶನ. ಕಾಳಿ ಹೇಗೆ ಇರಬಹುದೆಂಬ ಕಲ್ಪನೆಯನ್ನು ಅವರು ಮನದಟ್ಟು ಮಾಡಿಕೊಂಡಿದ್ದರೋ ಹಾಗೇ ಕಾಣಿಸಿಕೊಂದಳು ದೇವಿ?
ಈಗ ನೀನೂ ನಾನು ಯಾರಾಗಿರಬಹುದೆಂಬ ಊಹೆ ಮಾಡುತ್ತಿರಬಹುದು! ನನ್ನ ಭೌತಿಕ ಶರೀರದ ಕಲ್ಪನೆ!  ನನ್ನ ಹಾವ -ಭಾವ, ಇಷ್ಟ-ಕಷ್ಟ, ಊಟ-ತಿಂಡಿ, ನನ್ನ ಕೆಲಸ, ನನ್ನ ಮನೆತನ , ಜಾತಿ-ಧರ್ಮ ಇವೆಲ್ಲವುಗಳು ನಿನ್ನ ಯೋಚನೆಗೆ ಬರವುದಕ್ಕೂ ಮುಂಚೆ, ನನ್ನದೊಂದು ಚಿತ್ರ- ಅಂದರೆ - ದೇಹದ ಆಕಾರ ನಿನ್ನ ಮನಸ್ಸಿನಲ್ಲಿ ರಚನೆಗೊಂಡಿರಬಹುದು. ದೇಹವಿಲ್ಲದವನಿಗೆ ಅಸ್ಥಿತ್ವವೆಲ್ಲಿ? ಆ ಯೋಚನೆಯನ್ನು ಬಿಡು. ನನಗೂ ನಿನ್ನಷ್ಟೇ ವಯಸ್ಸು, ನಿನಗಿಂತಲೂ ಸುಂದರನೇ. ನನ್ನ ಮನಸ್ಸು ಹೇಗಿರಬಹುದೆಂಬ ಕಲ್ಪನೆಯನ್ನು ನಿನ್ನಿಂದ ಮಾಡಲು ಸಾಧ್ಯವೇ??......

ನನ್ನ ಭಾವನೆಗಳು-ಯೋಚನೆಗಳು ನಿನಗಒಪ್ಪಿಗೆಯಾಗುವವರೆಗೆ ಹೀಗೇ ಪ್ರೇಮ ಪತ್ರಗಳನ್ನು ಓದುತ್ತ ಕುಳಿತಿರಲು ನಿನ್ನಿಂದ ಸಾಧ್ಯವೇ?
ನಿನ್ನವನೆಂದು ನನಗೆ ನಾನೇ ಅಂದುಕೊಂಡಿರುವವ - ಶಶಿ

ಯಾರು ಯಾರಿಗೆಂದು ಬರೆದ ಪತ್ರವೋ! ಆದರೆ ಅದು ವಿಶಿಷ್ಟವಾಗಿತ್ತು. ಓದಿ ಎಲ್ಲಿತ್ತೊ ಅಲ್ಲೇ, ಹೇಗಿತ್ತೋ ಹಾಗೇ ಇಟ್ಟುಬಿಟ್ಟೆ.
ಆ ಪತ್ರವನ್ನು ಓದಿದ ನನಗೆ - ನನಗೂ ಯಾರಾದರೂ ಪ್ರೇಮಪತ್ರ ಬರೆಯಬಾರದೆ ಎಂದೊಮ್ಮೆ ಅನ್ನಿಸದೇ ಇರಲಿಲ್ಲ. ಏನೇನೋ ಭಾವನೆಗಳು ಮನಸ್ಸಿನೊಳಗೆಲ್ಲ ಹರಿದಾಡಿ, ನನ್ನ ಓದನ್ನು ಗಾಳಿಗೆ ತೂರಿದವು. ಮ್ಯಾಗಜಿನ್ ಸೆಕ್ಷನ್ ಗೆ ಹೋಗಿ, ಮ್ಯಾಗಜಿನ್ ಗಳ ಮೇಲೆ ಕಣ್ಣಾಡಿಸುತ್ತ ಕುಳಿತೆ. 12.30 ಕ್ಕೆ ಹೋಗಿ ತರಗತಿಯಲ್ಲಿ ಕುಳಿತರೂ ಆ ಪತ್ರದ್ದೆ ಯೋಚನೆ! ಯಾರು ಈ ಮಣಿಕರ್ಣಿಕಾ ಮತ್ತವಳನ್ನು ಪ್ರೀತಿಸುವ ಶಶಿ? ಎಷ್ಟೊಂದು ವಿಶೇಷವಾದ, ಸಿನಿಮಾಗಳಲ್ಲಿ ಮಾತ್ರ ಕಾಣಬಹುದಾದ ಪ್ರೀತಿಸುವ ಬಗೆ. ಈ ಪ್ರೇಮಿಗಳು ಯಾರೆಂದು ಪತ್ತೆ ಹಚ್ಚಬೇಕು ಎಂದುಕೊಂಡೆ.

ಮಾರನೆಯ ದಿನ ಡ್ರಾ ದಲ್ಲಿ ಯಾವ ಪತ್ರವೂ ಇರಲಿಲ್ಲ. ಆದರೆ, ಲ್ಲೈಬ್ರರಿ ಯಿಂದ  ಮದ್ಯಾಹ್ನ12.15ಕ್ಕೆ ಹೊರ ಬರುವಾಗ ಎಂಟರಿ ರಜಿಸ್ಟರ್ ಬುಕ್ ನಲ್ಲಿರುವ ಹೆಸರುಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿದೆ. ಹಿಂದಿನ ದಿನದ ಲಿಸ್ಟ್ ನಲ್ಲಿ ಮಣಿ ಎಂಬ ಹೆಸರು ಕಾಣಿಸಿದರೂ, ಶಶಿಯ ಹೆಸರು ಕಾಣಿಸಲಿಲ್ಲ. ಮುಂದಿನ ನಾಲ್ಕು ದಿನಗಳು ಯಾವ ಪತ್ರಗಳೂ ಇಲ್ಲದೇ ಕಳೆದವು! ಆದರೆ ನಾನು ರಜಿಸ್ಟರ್ ಬುಕ್ ನ್ನು ಪರಿಶೀಲಿಸದೇ ಇರುತ್ತಿರಲಿಲ್ಲ. ದಿನವೂ ಮಣಿ ಎನ್ನುವ ವ್ಯಕಿಯ ಹೆಸರು ಮಾತ್ರ ಸಿಗುತ್ತಿತ್ತೇ ಹೊರತು, ಶಶಿಯ ಹೆಸರಿನ ಸುಳಿವೇ ಇರಲಿಲ್ಲ!  ಐದನೇ ದಿನ ಇನ್ನೊಂದು ಪತ್ರ ಅದೇ ಡ್ರಾ ದಲ್ಲಿ ಸಿಕ್ಕಿದ ದಿನವೂ, ಮತ್ತದರ ಹಿಂದಿನ ದಿನವೂ ಎಂಟ್ರಿ ರಜಿಸ್ಟರ್ ನಲ್ಲಿ ಶಶಿಯ ಹೆಸರೇ ಇರಲಿಲ್ಲ. ಯಾರೋ ಶಶಿ ಎನ್ನುವ ಹೆಸರಿಟ್ಟುಕೊಂಡು ಪತ್ರ ಬರೆಯುತ್ತಿರಬಹುದೆಂದುಕೊಂಡೆ.

ಐದನೇ ದಿನ ಸಿಕ್ಕಿದ ಪತ್ರದ ಸಾರಾಂಶ ಇಷ್ಟು-
ನಲ್ಮೆಯ ಮಣಿಕರ್ಣಿಕಾ,
ನೀನು ನನ್ನ ಹಿಂದಿನ ಪತ್ರವನ್ನು ಓದಿ, ನನ್ನ ಬಗೆಗೆ ಕೊಂಚವಾದರೂ ಭಾನೆಗಳನ್ನು ತಾಳಿದ್ದರೆ ನಾನು ಮುಂದೆ ಬಾಳಿಯೇನು!
ಆಕರ್ಷಣೆಯನ್ನು ಮೀರಿದ ಪ್ರೀತಿ ನಮ್ಮದಾಗಬೇಕೆನ್ನುವುದು ನನ್ನ ಆಸೆ. ಮನುಷ್ಯ ಮನುಷ್ಯನ ನಡುವೆ, ಜೀವಿ ಜೀವಿಗಳ ನಡುವೆ ಇರುವುದು ಪ್ರೀತಿಯಷ್ಟೆ. ಆಕರ್ಷಣೆ ನಿರ್ಜೀವ ವಸ್ತುಗಳಿಗೆ ಸಂಬಂಧಿಸಿದ್ದು. ಅದೇನಿದ್ದರೂ ವಿಜ್ಞಾನಿಗಳ ವಿಷಯ ವಸ್ತು...........
......ಪ್ರೀತಿ ಜಗದ ನಿಯಮ.

ಪ್ರೀತಿಸುವ ಮುನ್ನ ಪರಾಮರ್ಶಿಸುವುದೂ ಸಹಜ.
ಇಂತಿ ನಿನ್ನವನಾಗುತ್ತಿರುವ- ಶಶಿ.

ಯಾರದ್ದೋ ಪತ್ರವನ್ನು ಕದ್ದು ಓದುವುದಕ್ಕೆ ನನಗೆ ಮುಜುಗರವಾಗುತ್ತಿತ್ತು. ಆದರೆ, ಆ ಪತ್ರದ ಸೆಳೆತ ನನ್ನ ಮುಜುಗರವನ್ನೂ ಮೀರಿದ್ದಾಗಿತ್ತು.

ಮುಂದೆ ವಾರಕ್ಕೆರಡು ಪತ್ರಗಳು ಡ್ರಾ ದಲ್ಲಿ ಬಂದು ಕೂರತೊಡಗಿದವು. ಜೋನ್ ಆಫ ಅರ್ಕ, ಮ್ಯಾಝಿನಿ, ಲೋಹಿಯಾ, ಪಾಯಿಥಾಗೋರಸ್, ಬಾಬ್ ಮ್ಯಾರ್ಲಿ, ರಾಜ್ ಕಪೂರ್, ಲತಾ ಮಂಗೇಶ್ಕರ್ ಇನ್ನೂ ಯರ್ಯಾರಾದ್ದೋ ವಿಚಾರಗಳನ್ನು ಪ್ರೀತಿಗೆ ತಳಕು ಹಾಕಿ ಬರೆಯುತ್ತಿದ್ದ ಪ್ರೇಮ ಪತ್ರಗಳು ನನ್ನನ್ನೇ ಮರುಳುಮಾಡಿದ್ದವು. ಇನ್ನು ಆ ಮಣಿಕರ್ಣಿಕಾಳ ಹೃದಯ ಹೇಗೆ ಹೂಡೆದುಕೊಳ್ಳುತ್ತಿತ್ತೋ?!  ಪ್ರೀತಿಯನ್ನು ಹೇಗೆ ತಡೆದುಕೊಳ್ಳುತ್ತಿತ್ತೋ!

ಹೀಗೇ ಮೂರೂ ತಿಂಗಳುಗಳು ಕಳೆದಿರಬಹುದು. ಗುರುವಾರ ಪತ್ರ ಡ್ರಾ ದಲ್ಲಿ ಇರಬಹುದಾದ ದಿನ; ಆದರೆ ಇರಲಿಲ್ಲ. ನಾನ್ಯಾಕೆ ಬೇಜಾರಾದೆ ಎಂದು ನನಗೇ ಗೊತ್ತಾಗಲಿಲ್ಲ. ಮಳೆ ಬರುವ ವಾತಾವರಣವಿತ್ತು. ಲೈಬ್ರರಿಯ ಎದುರಿನ ಗಾರ್ಡನ್ ತುದಿಯ ಕಟ್ಟೆಯ ಮೇಲೆ, ಮೇಲೆ ನೋಡುತ್ತಾ ಕುಳಿತೆ. ಕೈಗಳು ತಾವಾಗೇ ಪಕ್ಕದಲ್ಲಿರುವ ಗಿಡದಿಂದ ಹೂ ಕೀಳಲು ತೊಡಗಿಕೊಂಡಿದ್ದವು. ನಾನು ಕುಳಿತಲ್ಲಿಂದ ರಸ್ತೆಯ ಇಳುಕಲು ಕಾಣಿಸುತ್ತಿತ್ತು. ಯಾವುದೊ ಜೀವನದ ವ್ಯಾಪಾರ ಮುಗಿಸಿ ಹೊರಟ ದೇಹವನ್ನು ಗಾಡಿಯಲ್ಲಿ ಕುಕ್ಕರುಗಾಲಿನಲ್ಲಿ ಕೂರಿಸಿಕೊಂಡು ಲೈಬ್ರರಿ ಯ ಎದುರಿನ ಸ್ಮಶಾನದಲ್ಲಿ ಮಣ್ಣು ಮಾಡಲು ತರುತ್ತಿದ್ದರು. ಹೆಣದ ಮೆರವಣಿಗೆಯನ್ನ ಲೈಬ್ರರಿಯ ಎದುರು ಒಮ್ಮೆ ನಿಲ್ಲಿಸಿದರು. ಲೈಬ್ರರಿಯ ಒಳಗಿದ್ದವರೊಂದಿಷ್ಟು ಜನ ಓಡೋಡಿ ಬಂದು ನೋಡಿ ಹೋದರು. ನಾನೂ ನೋಡಲು ಎದ್ದು ಹೊರಟೆ. ಯಾರೋ ಹೇಳಿದರು-" ಇಲ್ಲ ಲೈಬ್ರರಿ ಸೈನ್ಸ್ ಓದುತ್ತಿದ್ದ ಹುಡುಗ. ಏಕ್ಸಿಡೆಂಟ್ ನಾಗ ಹೊಂಟ್ ಹೋದ ನೋಡ್ರಿ. ನಸೀಬ್ ಕೆಟ್ಟಿದ್ದ ಇರಬೇಕ!"

ನನಗೆ ಶವದ ಮುಖದ ಗುರುತು ಹತ್ತಲಿಲ್ಲ. ಒಂದು ರೀತಿ ಅಸಹ್ಯಕರವಾಗಿ ಕಳೆಗುಂದಿದ ಮುಖ, ಮುಚ್ಚಿದ ಕಣ್ಣು, ಹತ್ತಿ ತುರುಕಿದ ಮೂಗು, ಭಸ್ಮ ಗಂಧ ಮೆತ್ತಿದ ಹಣೆ- ನಾನು ನೋಡಿದ್ದ ಹುಡುಗನೇ ಆದರೂ ಈಗ ಗುರುತಿಸುವುದು ಹೇಗೆ? ಸುಮ್ಮನೇ ನಾನು ಕಿತ್ತಿದ್ದ ಹೂಗಳನ್ನು ಶವಕ್ಕೆರಚಿ ಬಂದೆ. ಶವ ಮಸಣದ ಕಡೆಗೆ ಯಾತ್ರೆ ಹೊರಟಿತು. ನಾನು ಲೈಬ್ರರಿಯ ಒಳಗೆ ಹೋಗಿ ಪುಸ್ತಕವನ್ನು ಹಿಡಿದು ಕೂತೆ.
ಏನೇನು ಓದುವುದೆಂದು ಯೋಚಿಸುತ್ತಿರಬೇಕಾದರೆ, ಮಳೆಯ ದೊಡ್ಡ ದೊಡ್ಡ ಹನಿಗಳು ಬೀಳುವ ಸದ್ದು ಕೇಳಿಸಿತು. ಅದು ಬೇಸಿಗೆಯ ಮೊದಲ ಮಳೆ. ಹೊರಗಿನ ಚೆಲುವನ್ನು ನೋಡಲೆಂದು ಲೈಬ್ರರಿಯ ನಾಲ್ಕನೇ ಮಹಡಿಯ ಮೂಲೆಗೆ ಹೋಗಿ ನಿಂತುಕೊಂಡೆ. ಮಳೆ ಜೋರಾಯಿತು.

ಸ್ಮಶಾನದಲ್ಲಿ ಹೆಣವನ್ನು ಮಣ್ಣು ಮಾಡಲು ಹೋದವರ ಕಣ್ಣೀರು ಮಳೆಯ ಹನಿಯೊಂದಿಗೆ ಹರಿದು ಹಳ್ಳ ಸೇರುತ್ತಿರುವುದು ನಾನು ನಿಂತ ಜಾಗದಿಂದ ಕಾಣಿಸುತ್ತಿತ್ತು. ನನ್ನ ಕಣ್ಣೂ ನಿರಾಡಿತು. ಸಾವು ಯಾರನ್ನೂ ಹೆದರಿಸದೆ ಬಿಟ್ಟಿಲ್ಲ, ಬದುಕೂ ಅಷ್ಟೇ! ಕಷ್ಟದ ಬದುಕಿಗಿಂತ ಸಾವೇ ಸುಲಭದ್ದು. ಆದರೇನು ಮಾಡುವುದು ಎಲ್ಲರಿಗೂ ತಮ್ಮವರೆನ್ನುವವರೊಬ್ಬರು ಇದ್ದೇ ಇರುತ್ತಾರೆ; ಎಂದರೆ ಬದುಕುವುದು ಪರರಿಗಾಗಿಯೇ? ?.... ಹೀಗೇ ಯಾವುದೊ ಯೋಚನೆಗಳ ಸುಳಿಯಲ್ಲಿ ಸಿಕ್ಕು ಮಳೆಯನ್ನು ಸವಿಯಲಿಲ್ಲ. ನನ್ನ ಒಳಗು ಯಾವುದೋ ರೋದನೆಯ ಚಕ್ರಕ್ಕೆ ಸಿಕ್ಕಿಹಾಕಿಕೊಂಡು ಪಡೆದ ವೇಗಕ್ಕೆ, ನನ್ನ ಕಣ್ಣುಗಳಿಂದಲೂ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು.

ಮಾರನೆಯ ದಿನ ಡ್ರಾ ದಲ್ಲಿ ಪತ್ರ ಬಂದು ಕುಳಿತಿತ್ತು. ತೆಗೆದು ಓದಲು ಪ್ರಾರಂಭಿಸಿದ್ದೆನಷ್ಟೆ, ಯಾರೋ ನನ್ನ ಪಕ್ಕ ಬಂದು ನಿಂತರು. ನಾನು ತಲೆಯೆತ್ತಿ ನೋಡುವುದರೊಳಗಾಗಿ ಮಾತು ಪ್ರಾರಂಭಿಸಿದ್ದರು. "ಮಣಿಕರ್ಣಿಕಾ ಮೇಡಮ್, ನಿಮ್ಮ ಜೊತೆ ಸ್ವಲ್ಪ ಮಾತಾಡ್ ಬೇಕಿತ್ತು"
"ಮಾತಾಡ್ ಬಹುದು. ಆದ್ರೆ, ನಾನು ಮಣಿಕರ್ಣಿಕಾ ಅಲ್ವಲ್ಲ!"
"ಮತ್ತೆ ಈ ಪತ್ರ ಯಾಕೆ ಓದ್ತಿದಿರೀ?"
ನನ್ನಲ್ಲಿ ಉತ್ತರವಿರಲಿಲ್ಲ. ಅವಮಾನವಾಯಿತು. ಅಪಚಾರವಾಯಿತು. ತಪ್ಪಾಯಿತು. ಇಷ್ಟು ದಿನ ನನ್ನ ತಪ್ಪು ನನಗೆ ಯಾಕೆ ಕಾಣಿಸಲಿಲ್ಲ ಎಂದು ಒಳಗೊಳಗೇ ಕೊರಗಿದೆ.
ಆದದ್ದಾಗಲಿ ಎಂದು ಅವರಲ್ಲಿ ನಡೆದದ್ದೆಲ್ಲವನ್ನೂ ಹೇಳಿಕೊಂಡುಬಿಟ್ಟೆ.
"ನಾನು ಶಾಮ್, ಮೊನ್ನೆ ತೀರಿಹೋದನಲ್ಲಾ ಲೈಬ್ರರಿ ಸೈನ್ಸ್ ಹುಡುಗ-ಚಂದ್ರ ಅಂತ -ಅವನ ಫ್ರೆಂಡ್. ಅವನೇ ಈ ಪತ್ರಗಳನ್ನ ಬರೀತಿದ್ದಿದ್ದು. ಮೊನ್ನೆ ಊರಿಗೆ ಹೊರಟವನು ಈ ಪತ್ರವನ್ನ ನನ್ನ ಕೈಗೆ ಕೊಟ್ಟು ಶುಕ್ರವಾರ ಈ ಜಾಗದಲ್ಲಿ ಇಡಲಿಕ್ಕೆ ಹೇಳಿದ್ದ. ಅವನ ಕೊನೆಯ ಪತ್ರವನ್ನು ಮಣಿಕರ್ಣಿಕಾಳಿಗೆ ತಲುಪಿಸಿ, ಅವನ ದುರ್ಮರಣದ ಸುದ್ದಿಯನ್ನೂ ಹೇಗಾದರೂ ಮಾಡಿ ತಿಳಿಸಿಬಿಡೋಣ ಎಂದು ಯೋಚಿಸಿದ್ದೆ."
"ಅವನು ಬರೆದ ಎಲ್ಲಾ ಪಾತ್ರಗಳನ್ನೂ ಓದಿದ್ದೇನೆ.ಅವನ ಪ್ರೀತಿ ಅದ್ಭುತವಾದದ್ದಾಗಿತ್ತು. ಮಣಿಕರ್ಣಿಕಾ ಅವನ ಸಾವನ್ನು ಸಹಿಸುವುದಿಲ್ಲ"
"ವಿಷಯ ತಿಳಿಸದಿದ್ದರೆ ಯಾರೋ ಇಷ್ಟು ದಿನ ತಮಾಷೆಗೆ ಮಾಡಿದ್ದಾರೆಂದು ಭಾವಿಸುವುದಿಲ್ಲವೇ?!"
ಪಾತ್ರವನ್ನು ಅದೇ ಡ್ರಾದಲ್ಲಿ ಇಟ್ಟೆವು. ಒಂದು ವಾರವಾದರೂ ಆ ಪತ್ರ ಅಲ್ಲೇ ಉಳಿಯಿತು.

ಮುಂದಿನ ದಿನಗಳಲ್ಲಿ ಮಣಿಕರ್ಣಿಕಾಳಿಗಾಗಿ ಹುಡುಕಾಟ ಪ್ರಾರಂಭವಾಯಿತು. ಲೈಬ್ರರಿಯ ರಜಿಸ್ಟರ್ ನಲ್ಲಿರುವ ಮಣಿ ಯಾವುದೋ ಮಣಿಕಾಂತನೆಂದು ತಿಳಿಯಿತು.
ಚಂದ್ರನ ಸ್ನೇಹಿತರು- ಆಗಾಗ ಮಣಿಕರ್ಣಿಕಾಳ ಹೆಸುರನ್ನು ಅವನ ಬಾಯಿಯಲ್ಲಿ ಕೇಳಿದ್ದೆವೇ ಹೊರತು ಅವಳನ್ನು ಕಂಡಿಲ್ಲ ಎಂದರು. ಅವನ ಅಣ್ಣನಲ್ಲಿ ವಿಚಾರಿಸಿದೆವು. ಚಂದ್ರನ ರೂಮಿನಲ್ಲಿ ಸುಳುಹಿಗಾಗಿ ಹುಡುಕಿ ನೋಡೋಣ ಎಂಬ ಸಲಹೆಯನ್ನು ಕೊಟ್ಟನು. ಯೂನಿವರ್ಸಿಟಿಯ ಪಕ್ಕದಲ್ಲೇ ಇದ್ದ ಅವನ ಮನೆಗೆ ಹೋಗಿ ಸಾಕಷ್ಟು ಪರಿಶೀಲನೆ ನಡೆಸಿದೆವು. ಯಾವುದೇ ಸುಳಹೂ ಸಿಗದಾಯಿತು. ಅಲ್ಲೇ ಕುಳಿತು ಬೆವರೊರೆಸಿಕೊಳ್ಳುತ್ತಿರುವಾಗ, ಮೇಲೆ ಎತ್ತರದ ಶೆಲ್ಫ್ ಮೇಲೆ ಹಾಳೆಗಳು ಅತ್ತಿತ್ತಲಾದ ದೊಡ್ಡ ನೋಟ್ ಪ್ಯಾಡ್ ಕಾಣಿಸಿತು. ಅವನು ಬರೆದ ಪತ್ರಗಳೆಲ್ಲವೂ ಅಲ್ಲಿ ಸಿಕ್ಕವು. ಪತ್ರಗಳೆಲ್ಲ ಇಲ್ಲೇ ಇವೆ ಎಂದರೆ, ಮಣಿಕರ್ಣಿಕಾ ಅವನ ಪತ್ರಗಳನ್ನೂ- ಪ್ರೀತಿಯನ್ನೂ ಅಲಕ್ಷಿಸಿದ್ದಳೆಂದೆ!?

ಪ್ರತೀ  ಪತ್ರಗಳ ಹಿಂಭಾಗದಲ್ಲೂ ಪುಟ್ಟ ಪುಟ್ಟ ಟಿಪ್ಪಣಿಗಳಿದ್ದವು.
ಮೊದಲ ಪತ್ರ- ಓದಿ, ಮರಳಿ ಡ್ರಾದಲ್ಲಿ ಯಾಕೆ ಇಟ್ಟು ಹೋದಳು?
ಎರಡನೇ ಪತ್ರ- ತಲೆಯೆತ್ತದೇ ಓದಿ ಮುಗಿಸಿದಳು.
ಮೂರನೇ- ಯಾವುದೋ ಸಾಲನ್ನು ನೋಟ್ ಮಾಡಿಕೊಂಡಳು.
ನಾಲ್ಕನೇ- ನಿನ್ನೆ ಮೊನ್ನೆಯೆಲ್ಲಾ ಪಾತ್ರಕ್ಕಾಗಿ ಪಕ್ಕದ ಡ್ರಾಗಳಲ್ಲೂ ತಡಕಾಡಿದ್ದಳು.
ಐದನೇ- ಬಾಬ್ ಮ್ಯಾರ್ಲಿಗಾಗಿ ಮ್ಯೂಸಿಕ್ ಸೆಕ್ಕ್ಷನ್ ಗೆ ಹೋದಳು.
ಆರನೇ- ಲತಾಜೀಯ ಹಾಡನ್ನು ಗುನುಗುತ್ತ ಓದುತ್ತಿದ್ದಳು.
.....ಹೀಗೇ ಟಿಪ್ಪಣಿಗಳನ್ನು ಓದುತ್ತ ಹೋದಂತೆ, ನನಗೆ ಮಣಿಕರ್ಣಿಕಾ ಯಾರೆಂದು ತಿಳಿದು ಹೋಯಿತು.
ನನ್ನ ಕಣ್ಣೀರ ಕಟ್ಟೆ ಒಡೆಯಿತು. ಶಾಮನಿಗೂ, ಚಂದ್ರನ ಅಣ್ಣನಿಗೂ ಮಣಿಕರ್ಣಿಕಾ ಕಾಣಿಸಿದಳು. ಯಾರ ಸಮಾಧಾನದ ಮಾತುಗಳಿಗೂ ನಾನು ಕುಸಿದು ಹೋಗುವುದನ್ನು ತಡೆಯುವ ಶಕ್ತಿ ಇರಲಿಲ್ಲ.

ಅವನ ಕೊನೆಯ ಪತ್ರದಲ್ಲೊಂದು ಕವನವಿತ್ತು. 
ಪ್ರೀತಿಸೋಣ ಗೆಳತಿ
ಮತ್ತೆ ಮತ್ತೆ ಪ್ರೀತಿಸೋಣ ಗೆಳತಿ
ಸತ್ತಮೇಲೂ ಮತ್ತೆ ಹುಟ್ಟಿ ಬಂದು ಪ್ರೇಮಿಸೋಣ
ಹುಟ್ಟು ಸಾವು ಮೀರಿ ನಿಂತು ಪ್ರೇಮಿಸೋಣ
ನಾನು ನೀನು ಜೋಡಿಯಾಗಿ ಜೀವಿಸೋಣ........
........
........
ಮಧುರ ಪ್ರೇಮವೇ ಅಮರವಂತೆ.

ಬುಧವಾರ, ಮೇ 2, 2018

ಗಾಂಧಾರಿ ಬರೀ ಹೆಣ್ಣಲ್ಲ, ಹೆಣ್ಣಿನ ಪ್ರತೀಕ.

ಹೆಣ್ಣು ಹುಟ್ಟಿತೆಂದು
ಅಳದೇ ಇರುವುದು ಹೇಗೆ?!
ಪ್ರತೀ ಹೆಣ್ಣಿಗೂ ಗೊತ್ತು
ಗಾಂಧಾರಿಯ ಕಣ್ಣು ಪಟ್ಟಿಯ ಗುಟ್ಟು.

ಮೈಮೇಲೆಲ್ಲ ಕಣ್ಣಾಡಿಸುವ
ಕಪ್ಪು ಕನ್ನಡಕದೊಳಗಿನ ಕಣ್ಣುಗಳನ್ನು
ಪ್ರಶ್ನಿಸಲಾಗದವಳಿಗೆ,
ಕತ್ತಲಾಗುವುದರೊಳಗಾಗಿ
ಮನೆ ಸೇರುವುದೇಕೆಂಬುದಕ್ಕೆ
ಉತ್ತರ ಗೊತ್ತು.

ಮನೆಗೆ ಬಂದ ನೆಂಟ
ಗಂಟು ಬೀಳುವ ಸಂಕಟ,
ಒಂಟಿ ಹಾದಿಯಲ್ಲಿ
ಅಪರಿಚಿತನ ಕಾಟ,
ಕೆಲವೊಮ್ಮೆ-
ಶಾಲೆಯ ಶಿಕ್ಷಕನ ನೋಟಕ್ಕೆ
ತಲೆ ತಗ್ಗಿಸುವವಳು.

ಪ್ರೀತಿಸಿ ಕೈ ಹಿಡಿದು ನಂಬಿಸಿ
ಚುಂಬಿಸಿ ಕೈ ಕೊಡುವವರು,
ಒಮ್ಮೊಮ್ಮೆ-
ಕೈ ಹಿಡಿದು ತಾಳಿ ಕಟ್ಟಿದವರೂ
ಕಿರುಕುಳ ಕೊಡುವರು.

ಕಚೇರಿಯಲ್ಲಂತೂ ಚೀರುವಂತಿಲ್ಲ,
ಕೆಲಸ ಬಿಟ್ಟು ಮನೆಯಲ್ಲೂ ಕೂರುವಂತಿಲ್ಲ!(ಹೊಟ್ಟೆಪಾಡು)

ಬಸ್ಸಿನಲ್ಲೋ, ಜಾತ್ರೆಯಲ್ಲೋ,
ದೇವಸ್ಥಾನದ ನೂಕು ನುಗ್ಗಲಿನಲ್ಲೋ,
ಎಲ್ಲೆಲ್ಲೂ ಕುಗ್ಗುವವಳು ಹೆಣ್ಣು
ಮುಚ್ಚಿಕೊಂಡು ಕಣ್ಣು!!

ಪ್ರತೀ ಹೆಣ್ಣಿಗೂ ಗೊತ್ತು
ಗಾಂಧಾರಿಯ ಕುರುಡಿನ ಗುಟ್ಟು.

ಗಾಂಧಾರಿ ಬರೀ ಹೆಣ್ಣಲ್ಲ,
ಹೆಣ್ಣಿನ ಪ್ರತೀಕ.