ಬುಧವಾರ, ಮೇ 30, 2018

ಬಡವನ ಉದ್ಧಾರವೂ ಆದೀತೇನೋ!

ಬೆಂಗಳೂರಿನ ರೆಸಿಡೆನ್ಷಿಯಲ್ ಏರಿಯಾದ ರಸ್ತೆಯ ಬದಿಯಲ್ಲೊಂದು ಟ್ಯಾಕ್ಸಿ ನಿಂತಿತ್ತು. ಪೂರ್ತಿ ಕೆಂಪು ಗುಲಾಬಿಯಿಂದಲೇ ಮಾಡಿದ ದೊಡ್ಡದೊಂದು ಮಾಲೆಯನ್ನು ಟ್ಯಾಕ್ಸಿಗೆ ಹಾಕಿದ್ದರು. ಹೆಬ್ಬಾವಿನ ಗಾತ್ರದ ಮಾಲೆ. ಅಷ್ಟೊಂದು ದೊಡ್ಡ ಮಾಲೆಯನ್ನು ನಾನು  ಯಾವತ್ತೂ ಮುಟ್ಟಿ ನೋಡಿದ್ದೂ ಇಲ್ಲ, ಹತ್ತಿರದಿಂದ ನೋಡಿದ್ದೂ ಇಲ್ಲ.
ಮಾಲೆಯನ್ನು ನೋಡಿಯಾದ ಮೇಲೆ ಟ್ಯಾಕ್ಸಿ ಡ್ರೈವರ್ ನನ್ನು ಮಾತನಾಡಿಸಿದೆವು.  ಅವನ ಅಣ್ಣನ ಗೆಳೆಯ ತಾಲೂಕ ಪಂಚಾಯತ್ ಅಧ್ಯಕ್ಷನೆಂದೂ, ಅವನ ಸನ್ಮಾನಕ್ಕೆಂದು ಯಾರೋ ತಂದ ಮಾಲೆ ಅದೆಂದೂ ತಿಳಿಯಿತು. ಮಾಲೆಯ ಬೆಲೆ 10,000 ರೂಪಾಯಿಗಳೆಂದೂ ತಿಳಿಯಿತು.

ಇವಿಷ್ಟು ನಡೆಯುತ್ತಿರುವಾಗ ಪಕ್ಕದ ಗಾರೆ ಕೆಲಸದವರ ಶೆಡ್ ನಿಂದ ಕೇಳಿಬಂದ ಮಾತು ಹೀಗಿತ್ತು-
ಹೆಂಗಸು -" ನಮಗೇ ಸರಿಯಾಗಿ ಉಣ್ಣಾಕೆ ಇಲ್ಲ, ಇನ್ನು ಈ ಮಕ್ಳು ಹಸ್ದು ಅಳದು ನೋಡಕೆ ಹಿಂಸೆ."
ಗಂಡಸು- "ಹುಟ್ಸಿದ್ ದೇವರು ಹುಲ್ಲು ಮೇಯ್ಸಕಿಲ್ವಾ?"
ಹೆಂಗಸು - " ಮೇಯಾಕೆ ಹುಲ್ಲಾದ್ರೂ ಎಲ್ಲಯ್ತಿ ಈ ಊರಲ್ಲಿ? ದಿನಾ..."
ಮುಂದೆನೋ ಹೇಳುವವಳಿದ್ದಳು, ಆದರೆ ಅಷ್ಟರಲ್ಲಿ ಮಕ್ಕಳ ಗಲಾಟೆ ಶುರುವಾಯಿತು.

ಪುಟ್ಟ ಮಗುವೊಂದು ಪುಟ್ಟ ಪಾತ್ರೆಯನ್ನು ಕೈಲಿ ಹಿಡಿದುಕೊಂಡು ರಸ್ತೆಗೆ ಓಡಿಬಂತು. ಹಿಂದೆಯೇ ಇನ್ನಿಬ್ಬರು ಪುಟ್ಟ ಪುಟ್ಟ ಮಕ್ಕಳು ಬಂದರು. ಪಕ್ಕದಲ್ಲೇ ಇದ್ದ ಜಲ್ಲಿ ರಾಶಿಯ ಮೇಲೆ ಕುಳಿತು ಪಾತ್ರೆಯಲ್ಲಿದ್ದ ಅವಲಕ್ಕಿಯನ್ನು ತಿನ್ನಲಾರಂಭಿಸಿದರು.
ನಾನೂ, ನನ್ನ ಪತಿಯೂ ಇತ್ತ ಟ್ಯಾಕ್ಸಿ ಡ್ರೈವರ್ ನೂಡನೆ ಮಾತನಾಡುತ್ತಲೇ ಇದ್ದೇವೆ, ಅತ್ತ ನಮ್ಮ 2 ವರ್ಷದ ಮಗಳು ಆ ಮಕ್ಕಳ ಬಳಿ ಹೋಗಿ ಕುಳಿತಿದ್ದಾಳೆ. ಆ ಮಕ್ಕಳು ಇವಳಿಗೆ ಒಂದು ತುತ್ತನ್ನೂ ಹಾಕಿ ಆಗಿದೆ.

ಅಂದುಕೊಂಡೆ- ಬಡವನ ಮನೆಯ ಊಟ ಚಂದ, ದೊಡ್ಡವನ ಮನೆಯ ನೋಟ ಚಂದ.


ನಿಧಾನವಾಗಿ ಯೋಚಿಸಿದಾಗ ಅನ್ನಿಸಿದ್ದು- 10 ಸಾವಿರ ರೂಪಾಯಿಯ ಮಾಲೆಯನ್ನು ಕಟ್ಟಲು ಅದೆಷ್ಟು ಜನ ಶ್ರಮ ಪಟ್ಟಿದ್ದಾರೋ- ಹೂವಿನ ಗಿಡ ಬೆಳೆಸುವುದರಿಂದ ಹಿಡಿದು, ಮಾಲೆಯನ್ನು ಕಟ್ಟಿ ಸನ್ಮಾನ ಸಮಾರಂಭಕ್ಕೆ ತಲುಪಿಸಿದವರ ವರೆಗೆ ಎಲ್ಲರಿಗೂ ಅವರವರ ಕೂಲಿ ಸಂದಾಯವಾಗಿದೆ.

ಶ್ರೀಮಂತರನ್ನು ಹೆಚ್ಚು ಹೆಚ್ಚು ಖರ್ಚು ಮಾಡಲು ಪ್ರಾತ್ಸಾಹಿಸಿದರೆ ಬಡವನ ಉದ್ಧಾರವೂ ಆದೀತೇನೋ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ