ಸೋಮವಾರ, ಆಗಸ್ಟ್ 13, 2018

ನಾನ್ಯಾರು ಗುರುದೇವ

ನಾನ್ಯಾರು ನಾನ್ಯಾರು ನಾನ್ಯಾರು ಗುರುದೇವ!

ಶಿವನಂತ ಓಂಕಾರ
ಒಳಗೊಳಗೇ ಮೊರೆಯುತಿದೆ

ಕಡಲಂತ ನದಿಯೊಂದು
ನನ್ನೊಳಗೂ ಹರಿಯುತಿದೆ

ನಾನ್ಯಾರು ನಾನ್ಯಾರು ನಾನ್ಯಾರು ಗುರುದೇವ

ವಿಷ ಕುಡಿದ ಮೇಲೆಯೂ
ತಿಳಿಯಾಗಿ ನಗುತಿರುವೆ

ಯಾರದ್ದೋ ಕಣ್ಣೀರು
ನಾನಾಗಿ ಹರಿದಿರುವೆ

ನಾನ್ಯಾರು ನಾನ್ಯಾರು ನಾನ್ಯಾರು ಗುರುದೇವ

ಹಣ್ಣೊಳಗೆ ಹೂವಾಗಿ
ಚಿಗುರಾಗಿ ಬೇರ್ಬಿಟ್ಟಿರುವೆ

ಆಕಾಶವ ತೆರೆದಿಟ್ಟು
ನೆಲದಿಂದ ಬೇರ್ಪಟ್ಟಿರುವೆ

( ಇನ್ನೂ ಕೇಳುವುದಿದೆ .........

ಮಂಗಳವಾರ, ಜುಲೈ 31, 2018

ಹೆಣದ ವಾಸನೆ ( ಕಥೆ)

ನಾವು ರಾಜಾಜಿನಗರದಲ್ಲಿದ್ದಾಗ ಪಕ್ಕದ ಮನೆಯಲ್ಲಿ ಕೋಲಾರ ಮೂಲದ ಸಂಸಾರವೊಂದು ವಾಸವಾಗಿತ್ತು. ಯಾವುದೊ ಆಸ್ತಿಯ ಸಲುವಾಗಿ ತಂದೆ ಮತ್ತು ಮಗನ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿರುವುದು ನಮಗೆ ಕಿಟಕಿಯ ಮೂಲಕ ಕೇಳಿಸುತ್ತಿರುತ್ತಿತ್ತು. ಜಾಸ್ತಿ ಜಗಳ ನಡೆದಾಗಲೆಲ್ಲ ಆ 60 ವರ್ಷ ವಯಸ್ಸಿನ ತಂದೆ ಬಸ್ ಹತ್ತಿಕೊಂಡು ಕೊಲಾರಕ್ಕೆ ಹೋಗಿಬಿಡುತ್ತಿದ್ದ. ಅದು ಹೇಗೋ ಏನೋ ಆರೋಗ್ಯವನ್ನು ಹದಗೆಡಿಸಿಕೊಂಡು ಬರುತ್ತಿದ್ದ. ತಿರುಗಿ ಬಂದ ಸ್ವಲ್ಪ ದಿನಗಳಲ್ಲೇ ಆಂಬುಲೆನ್ಸ್ ಬಂದು ಅವನನ್ನು ಹೇರಿಕೊಂಡು ಹೋಗುತ್ತಿತ್ತು. ಮತ್ತೆ 15-20 ದಿನ ಆಸ್ಪತ್ರೆಯಲ್ಲೇ ಕಳೆದು ಸ್ವಲ್ಪ ಗೆಲುವಾಗಿ ಬರುತ್ತಿದ್ದ. ಅವನು ಮನೆಗೆ ಬರುತ್ತಿದ್ದಂತೆಯೇ ಹೆಂಡತಿ ಮತ್ತು ಮಗ ಅವನಿಗೆ ಬಯ್ಯಲು ಪ್ರಾರಂಭಿಸುತ್ತಿದ್ದರು - "ಆಸ್ಪತ್ರೆಯಲ್ಲೇ ಇರಬೇಕಿತ್ತು ಆರಾಮಾಗಿ ನರ್ಸ್ ಜೊತೆಗೆ.... ವರ್ಷಕ್ಕೆ ಮೂರ್ ಸಲ ಆಸ್ಪತ್ರೆ ಸೇರ್ತಿಯ. ಪ್ರತೀ ಸಲಾನೂ ಎರಡೆರಡು ಲಕ್ಷ ನುಂಗಿ ಹಾಕ್ತಿಯ. ಅಸ್ತಿ ಪತ್ರಕ್ಕೆ ಸಹಿ ಹಾಕಾದ್ರೂ ಸಾಯಿ!" ಮತ್ತೆ ಅವರ ಮನೆಯಲ್ಲಿ ಮಾತಿನ ಚಕಮಕಿಗಳು ಬೆಂಕಿಯನ್ನು ಎಬ್ಬಿಸುತ್ತಿದ್ದವು.

ಒಂದು ಶನಿವಾರ ಬೆಳಿಗ್ಗೆ ಆ ಮನೆ ಮಂದಿಯೆಲ್ಲರೂ ಕಾರು ಹತ್ತಿಕೊಂಡು ಎಲ್ಲಿಗೋ ಹೋದರು, ಆ ಮುದುಕನೊಬ್ಬನನ್ನೇ ಮನೆಯಲ್ಲಿ ಬಿಟ್ಟು.
ಮಳೆಗಾಲದ ಥಂಡಿಗೆ ಆ  ವಾರವೆಲ್ಲ ಅವನಿಗಂತೂ ಕೆಮ್ಮು ಜಾಸ್ತಿಯೇ ಇತ್ತು. ನಮ್ಮ ಮನೆಯೊಳಗೇ ಯಾರೋ ಕೆಮ್ಮುತ್ತಿದ್ದಾರೋ ಎನ್ನುವಷ್ಟು ಜೋರಾಗಿ ಕೇಳಿಸುತ್ತಿತ್ತು ಆ ಕೆಮ್ಮು. ಆ ದಿನ ಸಂಜೆ ಅವನು ವಾಕಿಂಗ್ ಹೋಗಿದ್ದನ್ನು ನೋಡಿದೆವು. ತಿರುಗಿ ಬಂದದ್ದನ್ನೂ ನೋಡಿದೆವು. ಹೊರಗೆ ಹೋದ ಹೆಂಡತಿ, ಮಗ, ಸೊಸೆ ಯಾರೂ ರಾತ್ರಿಯಾದರೂ ಬರಲಿಲ್ಲ. ರಾತ್ರಿಯೆಲ್ಲಾ ಅವನ ಕೆಮ್ಮು ನಮ್ಮನ್ನು ಆಗಾಗ ಎಚ್ಚರಿಸುತ್ತಿತ್ತು.

ಭಾನುವಾರ ನಾವು ಪಿಕ್ನಿಕ್ ಗೆ ಹೋಗಿ ಸಂಜೆ ಬರುವಷ್ಟರಲ್ಲಿ ಆ ಮುದುಕನ ಕೆಮ್ಮು ಇರಲಿಲ್ಲ. ವಾಕಿಂಗ್ ಹೋಗಿರಬಹುದು ಎಂದುಕೊಂಡೆವು. ರಾತ್ರಿಯಾದರೂ ಆ ಮನೆಯಲ್ಲಿ ಯಾರ ಸುಳಿವೂ ಇಲ್ಲ. ಅವನಿಗೇನೋ ಆಗಿದೆ ಎಂದೆನ್ನಿಸಿತು. ಪತಿಯಲ್ಲಿ ಹೇಳಿದಾಗ, " ಅವನನ್ನು ಯಾರೂ ಪ್ರೀತಿಯಿಂದ ಕಾಣುತ್ತಿರಲಿಲ್ಲ. ಸಾಯಲೆಂದೇ ಒಂಟಿಯಾಗಿ ಬಿಟ್ಟುಹೋಗಿರಬಹುದು" ಎಂದರು. ಸೋಮವಾರ ಬೆಳಿಗ್ಗೆ ನನ್ನ ಪತಿ ಹೋಗಿ ಅವರ ಮನೆಯ ಬೆಲ್ ನ್ನು ಹಲವು ಬಾರಿ ಬಾರಿಸಿದರೂ ಯಾರೂ ಬಾಗಿಲು ತೆಗೆಯಲಿಲ್ಲ. ಈಗಿನ ಕಾಲದಲ್ಲಿ ಬಾಗಿಲು ಒಳಗಿನಿಂದ ಲೋಕ್ ಆಗಿದೆಯೋ ಅಥವಾ ಹೊರಗಿನಿಂದ ಲೋಕ್ ಆಗಿದೆಯೋ ಗೊತ್ತಾಗುವುದೇ ಇಲ್ಲ. ಕಿಟಕಿಯಿಂದಲೂ ಏನೂ ಕಾಣಿಸಲಿಲ್ಲ. ಅವರ ಮನೆಯ ಫೋನ್ ನಂಬರ್ ನಮ್ಮಲ್ಲಿ ಇರಲಿಲ್ಲ. ಏನು ಮಾಡುವುದೋ ತಿಳಿಯದೆ ಸುಮ್ಮನಾದೆವು. ಆ ಮನೆಗೆ ಮಂಗಳವಾರವೂ ಯಾರೂ ವಾಪಸಾಗಲಿಲ್ಲ. ಅವನೇನಾದರೂ ಸತ್ತಿದ್ದರೆ ಹೆಣದ ವಾಸನೆ ಬರಬೇಕಿತ್ತಲ್ಲ ಇಷ್ಟೊತ್ತಿಗೆ ಎಂಬ ಯೋಚನೆಯೊಂದೂ ಬಂತು.

ಬುಧವಾರ ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ಆ ಮನೆಯ ಮುಂದೆ ಕಾರು ಬಂದು ನಿಂತಿತು. ಆ ಮುದುಕನ ಹೆಂಡತಿ ಕಾರನ್ನು ಇಳಿಯುವುದನ್ನು ನೋಡಿದೆವು. ಹಣೆಯಲ್ಲಿ ಕುಂಕುಮ ಇರಲಿಲ್ಲ; ಕೂದಲನ್ನು ನಾಜೂಕಾಗಿ ಬಾಚಿರಲಿಲ್ಲ. ಮುದುಕ ಸತ್ತು, ಭಾನುವಾರ ನಾವು ಪಿಕ್ನಿಕ್ ಹೋದ ಸಮಯದಲ್ಲಿ ಅವನ ಹೆಣವನ್ನು ಒಯ್ದಿರಬೇಕು ಎಂದುಕೊಂಡೆವು.
ವಿಧವೆ ಹೆಂಗಸಿನ ಬಗ್ಗೆ ಕನಿಕರವೆನಿಸಿತು.

ಆ ಮನೆಯಿಂದ ಮಾತುಗಳು ಕೇಳಿಸಿದವು. ಅವನ ಹೆಂಡತಿ ಹೇಳುತ್ತಿದ್ದಳು- " ಈ ಮನ್ಶ, ಕೆಮ್ಮು ಜೋರ್ ಆಯ್ತು ಹೇಳಿ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗಿದ್ದಾನೆ. ಹಿಂಗೇ ಪದೇ ಪದೇ ಆಸ್ಪತ್ರೆಗೆ ಖರ್ಚು ಮಾಡಿ, ಅವನ ಆಸ್ತಿಗಿಂತ ಜಾಸ್ತಿನೇ ದುಡ್ಡು ನುಂಗಿ ಹಾಕ್ತಾನೆ. ಈ ಸಲನಾದ್ರೂ ಅವನು ಅಲ್ಲೇ ನೆಗದ್ ಬಿದ್ ಹೋಗಿದ್ರೆ ಸಾಕಾಗಿತ್ತು!"

ಸೋಮವಾರ, ಜೂನ್ 11, 2018

ನೂಡಲ್ಸ್ ಮಮ್ಮಿ- ಬರ್ಗರ್ ಡ್ಯಾಡಿ! (ಕಥೆ)

"ಮಮ್ಮೀ, ನಾಳೆ ಸ್ಕೂಲಲ್ಲಿ ಪಿಕ್ನಿಕ್ ಗೆ ಕರ್ಕೊಂಡು ಹೋಗ್ತಾ ಇದಾರೆ. ಎಲ್ರೂ ಲಂಚ್ ನ್ನು ಮನೆಯಿಂದಾನೇ ತೊಗೊಂಡು ಬರೋದು ಅಂತ ಡಿಸೈಡ್ ಆಗಿದೆ. ಲಂಚ್ ಬಾಕ್ಸ್ ಗೆ ಏನಾದ್ರೂ ಮಾಡಿ ಕೊಡ್ತಿಯಾ?" ಹತ್ತು ವರ್ಷದ ಹುಡುಗ  ಆಗ್ನೇಯ ತನ್ನ ಅಮ್ಮನನ್ನು ಕೇಳಿದ.
"ಬೇಬಿ, ನಿಂಗೆ ಗೊತ್ತಲ್ವಾ, ನಂದು ಅರ್ಲಿ ಮಾರ್ನಿಂಗ್ ಶಿಫ್ಟ್ ಅಂತಾ! ಡ್ಯಾಡಿಗೆ ಹೇಳು ನೂಡಲ್ಸ್ ಮಾಡಿ ಕೊಡ್ತಾರೆ." ಅಮ್ಮನ ಉತ್ತರ ಆಗ್ನೇಯನ ಮುಖವನ್ನು ಸಪ್ಪಗಾಗಿಸಿತು.

ಅಪ್ಪ ಕೆಲಸ ಮುಗಿಸಿ ಮನೆಗೆ ಬರುವುದು ರಾತ್ರಿ- ಸುಮಾರು 12 ಗಂಟೆಯ ಮೇಲೇ. ಅಪ್ಪ ಬರುವವರೆಗೆ ಕಾಯುತ್ತ ಕುಳಿತ.

12.30ಕ್ಕೆ ಬಂದ ಅಪ್ಪನನ್ನು ಕೇಳಿದಾಗ ಸಿಕ್ಕ ಉತ್ತರ ಆಗ್ನೇಯನನ್ನು ಸ್ವಲ್ಪವಾದರೂ ಖುಷಿಪಡಿಸಿತ್ತು. ಅಪ್ಪ ಹೇಳಿದ್ದಿಷ್ಟು-" ಕಿಡೂ, ನಂಗೆ ನೂಡಲ್ಸ್ ಮಾಡಕೆ ಬಾರಲ್ಲಾ. ಬರ್ಗರೋ, ಸ್ಯಾಂಡ್ವಿಚ್ಚೊ ಮಾಡಿ ಕೊಡ್ತೀನಿ. ಓಕೆ!"

ಬೆಳಗ್ಗೆ 8 ಗಂಟೆಗೆ ಎದ್ದು ಸ್ನಾನ ಮಾಡಿ ರೆಡಿಯಾಗಿ, ಕೋರ್ನ ಫ್ಲೇಕ್ಸ್ ಗೆ ಹಾಲು ಸುರಿದುಕೊಂಡು ತಿಂದು ಮುಗಿಸಿದ ಆಗ್ನೇಯ ಅಪ್ಪನನ್ನು ಎಬ್ಬಿಸಲು ಪ್ರಯತ್ನಿಸಿದ. ಹಿಂದಿನ ದಿನ ಮಾಡಿದ ಪ್ರಾಮಿಸ್ ನ್ನು ನೆನಪಿಸಿದ.
"ನನ್ನ ಪರ್ಸಿನಿಂದ ಎಷ್ಟು ಬೇಕೋ ಅಷ್ಟು ದುಡ್ಡು ತೊಗೊಂಡು ಹೋಗು. ಅಲ್ಲೇ ಏನಾದ್ರೂ ತೊಗೊಂಡು ತಿನ್ನು. ನಿದ್ದೆ ಹಾಳು ಮಾಡಬೇಡ. ಪ್ಲೀಸ್" ಎಂದ ಅಪ್ಪ.
ಆಗ್ನೇಯನಿಗೆ ಚಿಂತೆ ಶುರುವಾಯಿತು - ಗೆಳೆಯರೆಲ್ಲ ಮನೆಯಿಂದಲೇ ಲಂಚ್ ಬಾಕ್ಸ್ ತಂದಿರುತ್ತಾರೆ. ತಾನು ಮಾತ್ರ ಅಲ್ಲೇ ಏನೋ ಕೊಂಡು ತಿನ್ನುವುದು ಹೇಗೆ? ತನ್ನನ್ನು ನೋಡಿ ಗೆಳೆಯರೆಲ್ಲ ಅಪಹಾಸ್ಯ ಮಾಡಿದರೆ?!

ಅಷ್ಟೊತ್ತಿಗೆ ಕೆಲಸದಾಕೆ ಬಂದಳು. ಏನಾದರೂ ತಿಂಡಿ ಮಾಡಿಕೊಡೆಂದು ಆಗ್ನೇಯ ಅವಳಿಗೇ ಗಂಟುಬಿದ್ದ. ಆಗಲೇ ಗಂಟೆ ಒಂಬತ್ತಾಗಿದೆ, ಇನ್ನರ್ಧ ಗಂಟೆಯಲ್ಲಿ ಪಿಕ್ನಿಕ್ ಬಸ್ ಬಂದೇ ಬಿಡುತ್ತದೆ. ಥಟ್ಟನೆ ಏನು ಮಾಡುವುದೆಂದು ಯೋಚಿಸುತ್ತಿದ್ದ ಕೆಲಸದಾಕೆಗೆ ನೂಡಲ್ಸ್ ಆದರೂ ಮಾಡಿಕೊಡು ಎಂದ. ಹತ್ತು ನಿಮಿಷದಲ್ಲಿ ನೂಡಲ್ಸ್ ತಯಾರಿಸಿ ಬಾಕ್ಸ್ ಗೆ ತುಂಬಿಸಿ ಕೊಟ್ಟು, ಅವಳು ಮನೆಕೆಲಸವನ್ನು ಪ್ರಾರಂಭಿಸಿದಳು.

ಪಿಕ್ನಿಕ್ ಗೆ ಬಂದವರು ಝುದಲ್ಲಿನ ಪ್ರಾಣಿಗಳನ್ನೊಂದಿಷ್ಟು ನೋಡಿದರು. ಮಧ್ಯಾಹ್ನ ಊಟದ ಸಮಯವಾಯಿತು.

ಒಂದು ಕಡೆ ಮರದ ನೆರಳಿನಲ್ಲಿ ಕುಳಿತು, ಎಲ್ಲರೂ ಬಾಕ್ಸ್ ತೆರೆಯಲು ಪ್ರಾರಂಭಿಸಿದರು. ಆಗ್ನೇಯನಿಗೆ ಮುಜುಗರ - ತಾನು ತಂದಿರುವುದು ನೂಡಲ್ಸ್, ಯಾರಾದರೂ ನೋಡಿದರೆ ನಗುತ್ತಾರೇನೋ ಎಂಬ ಭಯ.
ಹೀಗಾಗಿ ಗುಂಪಿನ ತುದಿಯಲ್ಲೆಲ್ಲಾದರೂ ಕುಳಿತುಕೊಳ್ಳೋಣ ಎಂದು ಜಾಗ ಹುಡುಕುತ್ತಿರುವಾಗ, ಈಗಾಗಲೇ ತಿನ್ನಲು ಪ್ರಾರಂಭಿಸಿದವರ ಬಾಕ್ಸ್ ಗಳಲ್ಲೂ ನೂಡಲ್ಸ್ ಮತ್ತು ಬರ್ಗರ್/ಸ್ಯಾಂಡ್ವಿಚ್ ಗಳೇ ಕಾಣಿಸಿದವು. ಸ್ತಬ್ಧನಾಗಿ ನಿಂತ ಆಗ್ನೇಯನಿಗೆ ಮತ್ತೊಂದಿಷ್ಟು ನೂಡಲ್ಸ್ ಮತ್ತು ಬರ್ಗರ್ ಬಾಕ್ಸ್ ಗಳು ತೆರೆದುಕೊಳ್ಳುತ್ತಿರುವುದು ಕಾಣಿಸಿತು. ಎಲ್ಲರೂ ಕೆಲಸದಾಕೆ ಮಾಡಿದ ನೂಡಲ್ಸ್/ ಬರ್ಗರ್ ನ್ನೇ ತಂದಿದ್ದಾರೆನೋ ಎಂದುಕೊಂಡಿತು ಆಗ್ನೇಯನ ಮುಗ್ಧ ಮನಸ್ಸು!

ಕಥೆಗೆ ಕಾರಣವೇನು?
ಬನ್ನೇರುಘಟ್ಟ ನ್ಯಾಷನಲ್ ಪಾರ್ಕಿನಲ್ಲಿ ನೋಡಿದ ಘಟನೆ- 18-20 ಮಕ್ಕಳು ಲಂಚ್ ಬಾಕ್ಸ್ ತೆರೆದು ಸಾಲಾಗಿ ಕಟ್ಟೆಯ ಮೇಲೆ ಕುಳಿತಿದ್ದಾರೆ. ನಾನು ಪ್ರತೀ ಬಾಕ್ಸ್ ನ್ನು ನೋಡುತ್ತಾ ಹೋದೆ. ನೂಡಲ್ಸ್ ಮತ್ತು ಸ್ಯಾಂಡ್ವಿಚ್ ಬಿಟ್ಟು ಮತ್ತೇನೂ ಕಾಣಿಸಲಿಲ್ಲ.

ಬುಧವಾರ, ಮೇ 30, 2018

ಬಡವನ ಉದ್ಧಾರವೂ ಆದೀತೇನೋ!

ಬೆಂಗಳೂರಿನ ರೆಸಿಡೆನ್ಷಿಯಲ್ ಏರಿಯಾದ ರಸ್ತೆಯ ಬದಿಯಲ್ಲೊಂದು ಟ್ಯಾಕ್ಸಿ ನಿಂತಿತ್ತು. ಪೂರ್ತಿ ಕೆಂಪು ಗುಲಾಬಿಯಿಂದಲೇ ಮಾಡಿದ ದೊಡ್ಡದೊಂದು ಮಾಲೆಯನ್ನು ಟ್ಯಾಕ್ಸಿಗೆ ಹಾಕಿದ್ದರು. ಹೆಬ್ಬಾವಿನ ಗಾತ್ರದ ಮಾಲೆ. ಅಷ್ಟೊಂದು ದೊಡ್ಡ ಮಾಲೆಯನ್ನು ನಾನು  ಯಾವತ್ತೂ ಮುಟ್ಟಿ ನೋಡಿದ್ದೂ ಇಲ್ಲ, ಹತ್ತಿರದಿಂದ ನೋಡಿದ್ದೂ ಇಲ್ಲ.
ಮಾಲೆಯನ್ನು ನೋಡಿಯಾದ ಮೇಲೆ ಟ್ಯಾಕ್ಸಿ ಡ್ರೈವರ್ ನನ್ನು ಮಾತನಾಡಿಸಿದೆವು.  ಅವನ ಅಣ್ಣನ ಗೆಳೆಯ ತಾಲೂಕ ಪಂಚಾಯತ್ ಅಧ್ಯಕ್ಷನೆಂದೂ, ಅವನ ಸನ್ಮಾನಕ್ಕೆಂದು ಯಾರೋ ತಂದ ಮಾಲೆ ಅದೆಂದೂ ತಿಳಿಯಿತು. ಮಾಲೆಯ ಬೆಲೆ 10,000 ರೂಪಾಯಿಗಳೆಂದೂ ತಿಳಿಯಿತು.

ಇವಿಷ್ಟು ನಡೆಯುತ್ತಿರುವಾಗ ಪಕ್ಕದ ಗಾರೆ ಕೆಲಸದವರ ಶೆಡ್ ನಿಂದ ಕೇಳಿಬಂದ ಮಾತು ಹೀಗಿತ್ತು-
ಹೆಂಗಸು -" ನಮಗೇ ಸರಿಯಾಗಿ ಉಣ್ಣಾಕೆ ಇಲ್ಲ, ಇನ್ನು ಈ ಮಕ್ಳು ಹಸ್ದು ಅಳದು ನೋಡಕೆ ಹಿಂಸೆ."
ಗಂಡಸು- "ಹುಟ್ಸಿದ್ ದೇವರು ಹುಲ್ಲು ಮೇಯ್ಸಕಿಲ್ವಾ?"
ಹೆಂಗಸು - " ಮೇಯಾಕೆ ಹುಲ್ಲಾದ್ರೂ ಎಲ್ಲಯ್ತಿ ಈ ಊರಲ್ಲಿ? ದಿನಾ..."
ಮುಂದೆನೋ ಹೇಳುವವಳಿದ್ದಳು, ಆದರೆ ಅಷ್ಟರಲ್ಲಿ ಮಕ್ಕಳ ಗಲಾಟೆ ಶುರುವಾಯಿತು.

ಪುಟ್ಟ ಮಗುವೊಂದು ಪುಟ್ಟ ಪಾತ್ರೆಯನ್ನು ಕೈಲಿ ಹಿಡಿದುಕೊಂಡು ರಸ್ತೆಗೆ ಓಡಿಬಂತು. ಹಿಂದೆಯೇ ಇನ್ನಿಬ್ಬರು ಪುಟ್ಟ ಪುಟ್ಟ ಮಕ್ಕಳು ಬಂದರು. ಪಕ್ಕದಲ್ಲೇ ಇದ್ದ ಜಲ್ಲಿ ರಾಶಿಯ ಮೇಲೆ ಕುಳಿತು ಪಾತ್ರೆಯಲ್ಲಿದ್ದ ಅವಲಕ್ಕಿಯನ್ನು ತಿನ್ನಲಾರಂಭಿಸಿದರು.
ನಾನೂ, ನನ್ನ ಪತಿಯೂ ಇತ್ತ ಟ್ಯಾಕ್ಸಿ ಡ್ರೈವರ್ ನೂಡನೆ ಮಾತನಾಡುತ್ತಲೇ ಇದ್ದೇವೆ, ಅತ್ತ ನಮ್ಮ 2 ವರ್ಷದ ಮಗಳು ಆ ಮಕ್ಕಳ ಬಳಿ ಹೋಗಿ ಕುಳಿತಿದ್ದಾಳೆ. ಆ ಮಕ್ಕಳು ಇವಳಿಗೆ ಒಂದು ತುತ್ತನ್ನೂ ಹಾಕಿ ಆಗಿದೆ.

ಅಂದುಕೊಂಡೆ- ಬಡವನ ಮನೆಯ ಊಟ ಚಂದ, ದೊಡ್ಡವನ ಮನೆಯ ನೋಟ ಚಂದ.


ನಿಧಾನವಾಗಿ ಯೋಚಿಸಿದಾಗ ಅನ್ನಿಸಿದ್ದು- 10 ಸಾವಿರ ರೂಪಾಯಿಯ ಮಾಲೆಯನ್ನು ಕಟ್ಟಲು ಅದೆಷ್ಟು ಜನ ಶ್ರಮ ಪಟ್ಟಿದ್ದಾರೋ- ಹೂವಿನ ಗಿಡ ಬೆಳೆಸುವುದರಿಂದ ಹಿಡಿದು, ಮಾಲೆಯನ್ನು ಕಟ್ಟಿ ಸನ್ಮಾನ ಸಮಾರಂಭಕ್ಕೆ ತಲುಪಿಸಿದವರ ವರೆಗೆ ಎಲ್ಲರಿಗೂ ಅವರವರ ಕೂಲಿ ಸಂದಾಯವಾಗಿದೆ.

ಶ್ರೀಮಂತರನ್ನು ಹೆಚ್ಚು ಹೆಚ್ಚು ಖರ್ಚು ಮಾಡಲು ಪ್ರಾತ್ಸಾಹಿಸಿದರೆ ಬಡವನ ಉದ್ಧಾರವೂ ಆದೀತೇನೋ!

ಮಂಗಳವಾರ, ಮೇ 29, 2018

ನೀನು ಒಮ್ಮೆ ಸತ್ತವನು; ನಾನು ದಿನವೂ ಸಾಯುವವನು (ಕವಿತೆ)


ಕ್ರೂರ ನೋವನ್ನು ಹೊರಗಟ್ಟಿದಷ್ಟೇ ವೇಗದಲ್ಲಿ
ಮತ್ತೆ ಒಳಬಂದು ಚುಚ್ಚಿಕೊಳ್ಳುತ್ತದೆ.

 ನೀನು ಒಮ್ಮೆ ಸತ್ತವನು;
ನಾನು ದಿನವೂ ಸಾಯುವವನು.

ಸತ್ತವರು ಸಾಯುವುದೇ ಇಲ್ಲ
ಸತ್ತವರು ಎಲ್ಲೂ ಹೋಗುವುದಿಲ್ಲ.
ನೆನಪುಗಳಿಗೆ ಸಾವಿಲ್ಲ
ಅವು
ಬದುಕಿರುವವರನ್ನು ಸಾಯಿಸುತ್ತಲೇ ಇರುತ್ತವೆ.

ಜೋರಾಗಿ ಕೂಗಿ ಕರೆಯಬೇಕೆನ್ನಿಸುತ್ತದೆ
ಆದರೇನು,
ಸತ್ತವನ ಕಿವಿಯೂ ಚಟ್ಟವೇರಿದೆ.

ಮಳೆಗೆ ಕಣ್ಣೀರು ಮರೆಸುವ ಶಕ್ತಿಯಿಲ್ಲ,
ಗಾಳಿಗೆ ಕಣ್ಣೀರು ಒರೆಸುವ ಶಕ್ತಿಯಿಲ್ಲ,
ಉರಿವ ಬೆಂಕಿಗೆ ಸಾವಿರ ಸಲ ಧುಮುಕಿ ಎದ್ದರೂ
ಒಳಗಿನ ವೇದನೆ ರೋಧನೆಯೇ!






ಗುರುವಾರ, ಮೇ 17, 2018

ಹೇಳುವುದು ಬಹಳಷ್ಟಿದೆ! ನನಗೂ ಕೋಪ ಬಂದಿದೆ! (ಸುಮ್ಮನೆ ಒಂದು ಕವನ)

ತೆರೆದಿಡಲಾಗದ ಹಲವು ಮುಖಗಳಿವೆ ನನ್ನಲ್ಲಿ
ಇಂಬುಕೊಡದೇ ಮೊಗೆದು ಹೊರಚೆಲ್ಲಿದ್ದೇನೆ.
ಇನ್ನೊಂದು, ಮತ್ತೊಂದು, ಮಗದೊಂದು ಮುಖವಾಡಗಳ
ಪೀಠಿಕೆಯ ಪ್ರವೇಶಕ್ಕೂ ಎಣೆಯಿಲ್ಲದಷ್ಟು
ಪುರುಸೊತ್ತಿಲ್ಲದೇ
ಎಲ್ಲವನ್ನೂ ಬದಿಗೊತ್ತಿದ್ದೇನೆ.

ನಾಟಕ ಶಾಲೆಯ ಕದ ಮುಚ್ಚಿ
ಬಯಲಾಟಕ್ಕೆ ಹಪಹಪಿಸುವ ಕಾಲ
ಮತ್ತೆ ಬಾರದೇ,
ನನ್ನ ತೆರೆದ ಮುಖದ ಭಾವಗಳನ್ನು
ಬಣ್ಣ ಮೆತ್ತಿ ಕದ್ದು ಮುಚ್ಚಿ ಮುಚ್ಚಿಟ್ಟಿದ್ದೇನೆ.

ಕೋಳ ಹಾಕಿಕೊಂಡ ಕೈಗಳೂ
ಬಳೆ ತೊಟ್ಟ ಕೈಗಳೂ
ಕಣಕ್ಕಿಳಿದು ಕೀಟಲೆ ಎಬ್ಬಿಸುವಲ್ಲೆಲ್ಲ
ಕಣ್ಣ ಬಣ್ಣವೆಲ್ಲ ನೀರೊಡನೆ ಹರಿದು
ವಿರೋಧ ವ್ಯಕ್ತವಾಗಿದೆ;
ಕಾಟ ತಾಳದೇ ವಿಲ ವಿಲ ಒದ್ದಾಡಿ ಸತ್ತ
ಕೋಟಿ ಕೋಟಿ ಹುಳುಗಳಿಗಾಗಿ ಅತ್ತಿದ್ದೇನೆ.

ನನ್ನಲ್ಲೂ ಹಲವು ಮುಖಗಳಿವೆ,
ಹಲವು ಸನ್ನಿವೇಶಗಳಲ್ಲಿ
ಬಿಚ್ಚಿಡಲೂ ಆಗದೇ
ಮುಚ್ಚಿಡಲೂ ಆಗದೇ
ಒಳಗೊಳಗೇ ಸತ್ತಿದ್ದೇನೆ!

ಶುಕ್ರವಾರ, ಮೇ 11, 2018

ತೀರದ ಸಾಲ (90ರ ದಶಕದ ಕಥೆ)

ಶಾಲೆಯ ಎದುರು ಐಸ್ ಕ್ಯಾಂಡಿವಾಲಾ ಬಂದಾಗಲೆಲ್ಲ ಅದನ್ನು ತಿನ್ನುವ ಆಸೆ ರೇವತಿಗೆ ಆಗುತ್ತಿದ್ದುದು ಸಹಜವಾಗಿದ್ದೇ ಆದರೂ, ಆ ದಿನ ಯಾಕೋ ದೊಡ್ಡ ಶಾಸ್ತ್ರಿಗಳ ಮಗಳು ಶಿಲ್ಪಾಳಿಂದ 50 ಪೈಸೆ ಸಾಲ ಪಡೆದು ಒಂದು ಐಸ್ ಕ್ಯಾಂಡಿಯನ್ನು ತಿಂದೇಬಿಟ್ಟಳು. ವರ್ಷಕ್ಕೊಮ್ಮೆ ಊರ ಜಾತ್ರೆಗೆಂದು ಅಪ್ಪ ಕೊಡುತ್ತಿದ್ದ ಐದೋ-ಹತ್ತೋ ರೂಪಾಯಿಗಳಲ್ಲಿ ಗರಿಷ್ಟ ಲಾಭ ಪಡೆಯುವ ಸಲುವಾಗಿ - ಇವಳಾಗಲೀ, ಇವಳ ಅಕ್ಕನಾಗಲೀ- ತಿನ್ನುವುದನ್ನೇನೂ ಕೊಳ್ಳದೇ, ಬಳೆಯನ್ನೋ, ಸರವನ್ನೋ ಕೊಂಡುಕೊಳ್ಳುತ್ತಿದ್ದರು. ಪೇಟೆಗಂತೂ ಹೋಗುತ್ತಿದ್ದುದೇ ಇಲ್ಲ, ಊರ ಆಸುಪಾಸಿನಲ್ಲೆಲ್ಲೂ ಅಂಗಡಿಗಳೂ ಇಲ್ಲ.

ಐಸ್ ಕ್ಯಾಂಡಿಯನ್ನು ಬೇರೆಯವರು ಸವಿಯುವಾಗ ಮಾಡುವ ತಣ್ಣನೆಯ ಆಸ್ವಾದನೆ ಏನೆಂಬುದೂ 10 ವರ್ಷದ ಇವಳಿಗೆ ಗೊತ್ತಿರಲಿಲ್ಲ. ಈಗ ಐಸ್ ಕ್ಯಾಂಡಿಯನ್ನು ತಿಂದವಳು, ಈ ಸಲ ಊರ ಜಾತ್ರೆಯಲ್ಲೂ ಒಂದು ತಿನ್ನುವುದೇ ಎಂದು ನಿರ್ಧರಿಸಿದಳು. ಐಸ್ ಕ್ಯಾಂಡಿಯ ಬಣ್ಣದಿಂದಾಗಿ ನಾಲಿಗೆ, ತುಟಿಗಳೆಲ್ಲ ಕೇಸರಿ ಬಣ್ಣಕ್ಕೆ ತಿರುಗಿದ್ದವು. ನಾಲಿಗೆಯನ್ನು ಹಲ್ಲುಗಳಿಗೆ ಉಜ್ಜಿಕೊಳ್ಳುತ್ತಾ ಮನೆಯ ಕಡೆಗೆ ಹೆಜ್ಜೆ ಹಾಕಿದಳು. ಆ ದಿನವೆಲ್ಲ ಐಸ್ ಕ್ಯಾಂಡಿಯ ಗುಂಗಿನಲ್ಲೇ ಕಳೆದಳು. ರಾತ್ರಿ ಕನಸಿನಲ್ಲಿಯೂ ಐಸ್ ಕ್ಯಾಂಡಿ ಬಂತು.

ಮಾರನೇ ದಿನ ಶಾಲೆಯ ಒಳಗೆ ಕಾಲಿಡುತ್ತಿದ್ದಂತೆ ದೊಡ್ಡ ಶಾಸ್ತ್ರಿಗಳ ಮಗಳು, ಶಿಲ್ಪ, ಬಂದು 50 ಪೈಸೆ ಸಾಲವನ್ನು ನೆನಪಿಸಿ ಹೋದಳು. ಸಂಜೆ ಮನೆಗೆ ಹೋದಮೇಲೆ ಅಪ್ಪನನ್ನು ಹೇಗಾದರೂ ಮಾಡಿ ಕೇಳೋಣ ಎಂದುಕೊಂಡಳು. ಸಂಜೆ ಅಂಗಳದಲ್ಲಿ ಕಾಲು ತೊಳೆದು ಮನೆಯೊಳಗ ಕಾಲಿಡುತ್ತಿದ್ದವಳಿಗೆ ಅಪ್ಪ ಅಮ್ಮ ಮಾತನಾಡಿಕೊಳ್ಳುತ್ತಿರುವುದು ಕೇಳಿಸಿತು- " ಈ ವರ್ಷ ಕೊಳೆ ರೋಗಕ್ಕೆ ತುತ್ತಾಗಿ ಅಡಿಕೆ ಬೆಳೆಯೆಲ್ಲ ಹಾಳಾಗಿ ಹೋತು. ಖರ್ಚು ತೂಗಿಸ್ಕಂಡು ಹೋಗದು ಹ್ಯಾಂಗನ? ಸಾಲಮಾಡಿ ಮರ್ಯಾದಿ ಕಳದು ಹೋಗ ಹಾಂಗೆ ಆಗದಿದ್ರೆ ಸಾಕು!"

ಸಾಲ ಮಾಡುವುದೆಂದರೆ ಮರ್ಯಾಡೆಗೇಡು ಎಂದು ರೇವತಿಗೆ ಗೊತ್ತಾಯಿತು. ಆದರೆ, ಮನೆಯ ಸ್ಥಿತಿ ಹೀಗಿರುವಾಗ ಅಪ್ಪನನ್ನ ಕೇಳುವುದು ಹೇಗೆ? ಗಾಬರಿಯಾಯಿತು. ಅಪ್ಪ ಒಮ್ಮೊಮ್ಮೆ ಸ್ವಿಚ್ ಬೋರ್ಡ್ ಮೇಲೋ ಅಥವಾ ಮಹಡಿ ಹತ್ತುವ ಮೆಟ್ಟಿಲ ಮೇಲೋ ನಾಣ್ಯಗಳನ್ನಿಟ್ಟು ಅಮ್ಮನ ಬೈಗುಳಕ್ಕೆ ಗುರಿಯಾಗುತ್ತಿದ್ದುದು ನೆನಪಾಯಿತು.ಹಣ ಎಲ್ಲೆಂದರಲ್ಲಿ ಇಡುವ ವಸ್ತುವಲ್ಲವಲ್ಲ. ಮಹಡಿಯ ಮೆಟ್ಟಿಲಿನ ಮೇಲೆ ಒಂದು ರುಪಾಯಿಯ ನಾಣ್ಯವಿತ್ತು. ಯಾರೂ ಇಲ್ಲದ ಹೊತ್ತು ನೋಡಿ, ಅದನ್ನು ತನ್ನ ಪಾಟಿ ಚೀಲದಲ್ಲಿ(ಸ್ಕೂಲ್ ಬ್ಯಾಗ್) ಇಟ್ಟುಕೊಂಡಳು.

ರೇವತಿ ಬೆಳಿಗ್ಗೆಯಿನ್ನೂ ಹಾಸಿಗೆಯಲ್ಲಿರುವಾಗಲೇ, ಅಮ್ಮನ ಮೇಲೆ ಕೋಪದಿಂದ ಹರಿಹಾಯುತ್ತಿರುವ ಅಪ್ಪನ ದ್ವನಿ ಕೇಳಿಸಿತು.
"ಒಂದು ವಸ್ತುನೂ ಇಟ್ಟ ಜಾಗದಲ್ಲಿ ಇರದಿಲ್ಲೆ. ನಿನ್ನೆ ಸಂಜೆ ಅಷ್ಟೇ ಏಣಿ ಮೆಟ್ಟಿಲ ಮೇಲೆ ಇಟ್ಟಿದ್ದಿ, ಬೆಳಿಗ್ಗೆ ನೋಡಿದ್ರೆ ಮಾಯಾ! ನೀನು ಗುಡಿಸಿ ಕಸದ ಜೊತೆ ಬಿಸಾಕಿದ್ಯನ?!"
ಅಮ್ಮ ಸಮಾಧಾನವಾಗಿ ಉತ್ತರಿಸಿದಳು- "ನೀವೇ ಬೇರೆಲ್ಲಾದ್ರೂ ಇಟ್ಟು ಮರೆಯದು ಹೊಸದಲ್ಲ. ಬೇರೆದು ಕೊಡ್ತಿ ತಗಳಿ".
ಅಮ್ಮ ಕೊಟ್ಟ ಸಾರಿ ಪಿನ್ ತೆಗೆದುಕೊಂಡು, ಅಪ್ಪ ಹಲ್ಲು ಪೆರಟುತ್ತ ಹೋಗಿದ್ದು ಹಾಸಿಗೆ ಸುತ್ತಿಡುತ್ತಿದ ರೇವತಿಗೆಲ್ಲಿಂದ ಗೊತ್ತಾಗಬೇಕು?!
ಅಪ್ಪ ಕೆಂಡಕಾರಿದ್ದು ತಾನು ಕದ್ದ ರೂಪಾಯಿಯ ಸಲುವಾಗಿಯೇ ಇರಬೇಕೆಂದುಕೊಂಡು, ಓಡಿಹೋಗಿ ಪಾಟಿ ಚೀಲದಲ್ಲಿ ಇಟ್ಟುಕೊಂಡಿದ್ದ ರೂಪಾಯಿಯ ನಾಣ್ಯವನ್ನು ಮರಳಿ ಮಹಡಿಯ ಮೆಟ್ಟಿಲ ಮೇಲೆ ಇಟ್ಟು, ಯಾರೂ ನೋಡಲಿಲ್ಲವೆಂಬುದನ್ನು ಪಕ್ಕಾ ಮಾಡಿಕೊಂಡಳು. ಮತ್ತೆ ಸಾಲ ತೀರಿಸುವ ಚಿಂತೆ ಶುರುವಾಯಿತು. ಇದಾದ ಮಾರನೆಯ ದಿನ, ಭಾನುವಾರ, ಮಾಗಿ ಚಳಿಗೆ ನಿಗುಟಿ, ನೆರೆಮನೆಯ ಕೇಶವ ಭಟ್ಟರು ನೆಗೆದುಬಿದ್ದರು. ಅವರ ಮೂಮ್ಮೊಗಳ ಜೊತೆ ಇವಳೂ ಚಟ್ಟದ ಹಿಂದೆ ಹಿಂದೆ ಹೊರಟಳು. ಹೋಗುವ ಹಾದಿಯಲ್ಲಿ ಯಾರೋ ಬೀಳಿಸಿಕೊಂಡ ಒಂದು ಪೈಸೆಯ ನಾಣ್ಯವನ್ನು ಕಂಡು ಎತ್ತಿಕೊಳ್ಳಲು ಹೋದವಳನ್ನು ಕೇಶವ ಭಟ್ಟರ ಮೊಮ್ಮಗಳು ತಡೆದು, "ಎತ್ಕಬೇಡ ರೇವತಿ, ಅದನ್ನು ಅಪ್ಪನೇ ಬೀಳ್ಸಿದ್ದು. ಇದೊಂದು ಪದ್ಧತಿ. ಸತ್ತವರು ಲೋಕದ ಮೋಹ ಕಳಚಿಕೊಳ್ಳಲಿ ಹೇಳಿ ಹಾಗೆ ಮಾಡ್ತ"
ಇನ್ನೂ ಐದಾರು ಒಂದು ಪೈಸೆಯ ನಾಣ್ಯಗಳನ್ನು ಹೋಗುವ ಹಾದಿಯಲ್ಲಿ ಬಿಳಿಸುತ್ತ ಹೋದರು.
"ಯಾರು ಸತ್ರು ಒಂದು ಪೈಸೆ ನಾಣ್ಯನೇ ಬೀಳಸ್ತ್ವ?" ಕೇಳಿದಳು ರೇವತಿ.
"ನಾವು ಅಷ್ಟೆಲ್ಲ ಅನುಕೂಲಸ್ತರು ಅಲ್ದಲೆ ಅದಕ್ಕೆ ಕಡಿಮೆ. ಶ್ರೀಮಂತರ ಮನೆಯವರೆಲ್ಲಾ ಐದು ಪೈಸೆ, ಹತ್ತು ಪೈಸೆ ಎಲ್ಲಾ ಹಾಕ್ತ ಹೇಳಿ ಅಣ್ಣ ಒಂದ್ಸಲ ಹೇಳಿದ್ದ" ಎಂದಳು.

ರೇವತಿಯ ತಲೆಯಲ್ಲಿ ಯೋಚನೆಯೊಂದು ಸುಳಿದು ಹೋಯಿತು- ಊರ ದೊಡ್ಡ ಶಾಸ್ತ್ರಿಗಳ ತಾಯಿಯಾದರೂ ಸತ್ತಿದ್ರೆ!

ಶವ ಸುಡಲು ಹೋದವರೆಲ್ಲ ಅಷ್ಟೇ ಸ್ನಾನ ಮಾಡಿ, ಊಟ ಮಾಡಿ, ಕೈ ತೊಳೆಯುತ್ತಿದ್ದಿರಬೇಕು ಮತ್ತೊಮ್ಮೆ ಸ್ಮಶಾನಕ್ಕೆ ಹೋಗಲು ಅಣಿಯಾಗುವಂತಾಯಿತು.

ಈ ಸಲ ದೊಡ್ಡ ಶಾಸ್ತ್ರಿಗಳ ತಾಯಿ ಗಂಗಮ್ಮ!
ಸುದ್ದಿ ತಿಳಿಸಲು ಬಂದ ಶಾಸ್ತ್ರಿಗಳ ನೆರೆಮನೆಯ ಸೋಮೇಶಣ್ಣನ ಬಳಿ ಅಪ್ಪ ಮಾತಾಡುತ್ತಿದ್ದರು; "ಇನ್ನಾದ್ರೂ ಶಾಸ್ತ್ರಿಗಳ ಮನೆಯಲ್ಲಿ ಮಂಗಳ ಕಾರ್ಯಕ್ಕೆ, ತಿಥಿಗೆ ದೊಡ್ಡ ಲಾಡು, ದೊಡ್ಡ ಹಪ್ಪಳ ಮಾಡಿ ಬಡಸ್ಗು(ಬಡಿಸಬಹುದು)! ಜುಗ್ಗ(ಜಿಪುಣ) ಮುದುಕಿಯ ಕಾಲ ಅಂತೂ ಮುಗಿತು"

ರೇವತಿ ಈ ಸಲ ಹೆಣ ಸುಡಲು ಹೋಗಲಿಲ್ಲ. ಎಲ್ಲರೂ ಹೆಣ ಸುಟ್ಟು ಮನೆಗೆ ಹೋಗಿ ಸ್ನಾನ ಮಾಡುತ್ತಿರಬಹುದಾದ ಸಮಯ ನೋಡಿ, ಹೆಣ ಹೋದ ಹಾದಿಯಲ್ಲಿ ಹೋಗಿ ನಾಣ್ಯಗಳನ್ನೆಲ್ಲ ಆಯ್ಡುಕೊಂಡಳು. ಒಂದು ಪೈಸೆಯ ಐದು ನಾಣ್ಯಗಳೂ, ಐದು ಪೈಸೆಯ ಹನ್ನೊಂದು ನಾಣ್ಯಗಳೂ ಸಿಕ್ಕವು. ಒಟ್ಟೂ, ಅರವತ್ತು ಪೈಸೆಗಳಾದವು. ಊರ ಎದುರಿನ ಅರಳಿ ಮರದಲ್ಲಿರುವ ಬೀರಪ್ಪ ದೇವರ ಕಲ್ಲಿನ ಬುಡಕ್ಕೆ ಐದು ಪೈಸೆಯನ್ನಿಟ್ಟು ಕೈ ಮುಗಿದು, " ಬೀರಪ್ಪ, ಈ ಐವತ್ತು ಪೈಸೆಗಳನ್ನ ಸಾಲ ತೀರಿಸಲು ಉಳಿಸಿಕೊಂಡಿರದು.
ನಿಂಗೆ ಐದು ಪೈಸೆ ಕೊಟ್ಟೆ. ನಾನು ಐದು ಪೈಸೆ ಇಟ್ಟಕಂಡ್ರೆ ಅಡ್ಡಿಲ್ಲೆ ಅಲ್ದ!"

ರೇವತಿ ಸಾಲ ತೀರಿಸಿಯಾಯಿತು. ಜಿಪುಣ ಮುದುಕಿಯ ಮನೆಯ ದುಡ್ಡು ಮತ್ತೆ ಮನೆ ಸೇರಿತು!

ಬುಧವಾರ, ಮೇ 9, 2018

ಸಾವು ಯಾರನ್ನೂ ಹೆದರಿಸದೆ ಬಿಟ್ಟಿಲ್ಲ, ಬದುಕೂ ಅಷ್ಟೇ! (ಕಥೆ)

ಮಣಿಕರ್ಣಿಕಳನ್ನು ಉದ್ದೇಶಿಸಿ ಲೈಬ್ರರಿಯ ಒಂದು ಮೂಲೆಯಲ್ಲಿ ಯಾರೋ  ಬರೆದು ಅಡಗಿಸಿಡುತ್ತಿದ್ದ ಪತ್ರವನ್ನು ಓದಿ ಮುಜುಗರಕ್ಕೊಳಗಾದೆನೆಂದು ಅಂದುಕೊಂಡವಳಿಗೆ, ಮುಂದೊಂದು ದಿನ ಮಣಿಕರ್ಣಿಕಾ ಯಾರೆಂದು ಹುಡುಕುತ್ತ ಅಲೆಯುವ ಅನಿವಾರ್ಯತೆ ಬಂದಿದ್ದಾದರೂ ಏಕೆ?
ಅದೊಂದು ಪುಟ್ಟ ಕಥೆ.

ಎಂದಿನಂತೆಯೇ ಅಂದೂ ಕೂಡ  ಸಂಶೋಧನ ವಿದ್ಯಾರ್ಥಿಗಳಿಗೆಂದೇ ಮೀಸಲಿಟ್ಟ ಲೈಬ್ರರಿಯ ರೀಡಿಂಗ್ ರೂಮಿನ ಮೂಲೆಯ ಡೆಸ್ಕಿಗೆ ಬೆಳಿಗ್ಗೆ 9 ಘಂಟೆಗೇ ಹೋಗಿ ಕುಳಿತಿದ್ದೆ. ಡೆಸ್ಕಿನ ಡ್ರಾ ದಲ್ಲಿ ಹಿಂದಿನ ದಿನ ಅರ್ಧ ಓದಿ ಬಿಟ್ಟಿದ್ದ ಪುಸ್ತಕವಿತ್ತು. ಡ್ರಾ ಎಳೆದು ಪುಸ್ತಕ ಹೊರತೆಗೆದ ಮೇಲೆ ಅಲ್ಲೊಂದು ಮಡಿಚಿದ ಬಿಳಿಯ ಹಾಳೆ ಕಾಣಿಸಿತು. ತೆರೆದು ಓದಿದೆ. ಆ ಪತ್ರ ಹೀಗಿತ್ತು-

ನಲ್ಮೆಯ ಮಣಿಕರ್ಣಿಕಾ,
ನನ್ನ ಈ ಪತ್ರದ ಕೆಲವೇ ಸಾಲುಗಳನ್ನು ಓದಿ ಎಸೆದುಬಿಡಬೇಡ. ಇದು ನಿನಗೆ ಪ್ರೇಮಪತ್ರದಂತೆ ಕಾಣಿಸಬಹುದು, ಆದರೆ ನನಗಿದು ನನ್ನನ್ನು ತೆರೆದಿಡುವ ಒಂದು ಮಾಧ್ಯಮ.
ಪ್ರೀತಿಸುವ ಕಾಲದಲ್ಲಿ ಪ್ರೀತಿಸುವವರನ್ನು ಪ್ರೀತಿಸಿಬಿಡಬೇಕು.  ಪ್ರೀತಿಯ ಹಂಬಲದಲ್ಲೇ ಬದುಕು ಕಳೆಯುವುದಕ್ಕಿಂತ, ಪ್ರೀತಿಸಿ ಹಗುರಾಗುವುದೇ ಲೇಸು.
ಸ್ವಾಮಿ ವಿವೇಕಾನಂದರು ದೇವರನ್ನು ಕಂಡವರು. ಕಾಳಿ ಇರುವಳೆಂಬ ನಂಬಿಕೆಯೇ ಅವರಿಗಾದ ದರ್ಶನ. ಕಾಳಿ ಹೇಗೆ ಇರಬಹುದೆಂಬ ಕಲ್ಪನೆಯನ್ನು ಅವರು ಮನದಟ್ಟು ಮಾಡಿಕೊಂಡಿದ್ದರೋ ಹಾಗೇ ಕಾಣಿಸಿಕೊಂದಳು ದೇವಿ?
ಈಗ ನೀನೂ ನಾನು ಯಾರಾಗಿರಬಹುದೆಂಬ ಊಹೆ ಮಾಡುತ್ತಿರಬಹುದು! ನನ್ನ ಭೌತಿಕ ಶರೀರದ ಕಲ್ಪನೆ!  ನನ್ನ ಹಾವ -ಭಾವ, ಇಷ್ಟ-ಕಷ್ಟ, ಊಟ-ತಿಂಡಿ, ನನ್ನ ಕೆಲಸ, ನನ್ನ ಮನೆತನ , ಜಾತಿ-ಧರ್ಮ ಇವೆಲ್ಲವುಗಳು ನಿನ್ನ ಯೋಚನೆಗೆ ಬರವುದಕ್ಕೂ ಮುಂಚೆ, ನನ್ನದೊಂದು ಚಿತ್ರ- ಅಂದರೆ - ದೇಹದ ಆಕಾರ ನಿನ್ನ ಮನಸ್ಸಿನಲ್ಲಿ ರಚನೆಗೊಂಡಿರಬಹುದು. ದೇಹವಿಲ್ಲದವನಿಗೆ ಅಸ್ಥಿತ್ವವೆಲ್ಲಿ? ಆ ಯೋಚನೆಯನ್ನು ಬಿಡು. ನನಗೂ ನಿನ್ನಷ್ಟೇ ವಯಸ್ಸು, ನಿನಗಿಂತಲೂ ಸುಂದರನೇ. ನನ್ನ ಮನಸ್ಸು ಹೇಗಿರಬಹುದೆಂಬ ಕಲ್ಪನೆಯನ್ನು ನಿನ್ನಿಂದ ಮಾಡಲು ಸಾಧ್ಯವೇ??......

ನನ್ನ ಭಾವನೆಗಳು-ಯೋಚನೆಗಳು ನಿನಗಒಪ್ಪಿಗೆಯಾಗುವವರೆಗೆ ಹೀಗೇ ಪ್ರೇಮ ಪತ್ರಗಳನ್ನು ಓದುತ್ತ ಕುಳಿತಿರಲು ನಿನ್ನಿಂದ ಸಾಧ್ಯವೇ?
ನಿನ್ನವನೆಂದು ನನಗೆ ನಾನೇ ಅಂದುಕೊಂಡಿರುವವ - ಶಶಿ

ಯಾರು ಯಾರಿಗೆಂದು ಬರೆದ ಪತ್ರವೋ! ಆದರೆ ಅದು ವಿಶಿಷ್ಟವಾಗಿತ್ತು. ಓದಿ ಎಲ್ಲಿತ್ತೊ ಅಲ್ಲೇ, ಹೇಗಿತ್ತೋ ಹಾಗೇ ಇಟ್ಟುಬಿಟ್ಟೆ.
ಆ ಪತ್ರವನ್ನು ಓದಿದ ನನಗೆ - ನನಗೂ ಯಾರಾದರೂ ಪ್ರೇಮಪತ್ರ ಬರೆಯಬಾರದೆ ಎಂದೊಮ್ಮೆ ಅನ್ನಿಸದೇ ಇರಲಿಲ್ಲ. ಏನೇನೋ ಭಾವನೆಗಳು ಮನಸ್ಸಿನೊಳಗೆಲ್ಲ ಹರಿದಾಡಿ, ನನ್ನ ಓದನ್ನು ಗಾಳಿಗೆ ತೂರಿದವು. ಮ್ಯಾಗಜಿನ್ ಸೆಕ್ಷನ್ ಗೆ ಹೋಗಿ, ಮ್ಯಾಗಜಿನ್ ಗಳ ಮೇಲೆ ಕಣ್ಣಾಡಿಸುತ್ತ ಕುಳಿತೆ. 12.30 ಕ್ಕೆ ಹೋಗಿ ತರಗತಿಯಲ್ಲಿ ಕುಳಿತರೂ ಆ ಪತ್ರದ್ದೆ ಯೋಚನೆ! ಯಾರು ಈ ಮಣಿಕರ್ಣಿಕಾ ಮತ್ತವಳನ್ನು ಪ್ರೀತಿಸುವ ಶಶಿ? ಎಷ್ಟೊಂದು ವಿಶೇಷವಾದ, ಸಿನಿಮಾಗಳಲ್ಲಿ ಮಾತ್ರ ಕಾಣಬಹುದಾದ ಪ್ರೀತಿಸುವ ಬಗೆ. ಈ ಪ್ರೇಮಿಗಳು ಯಾರೆಂದು ಪತ್ತೆ ಹಚ್ಚಬೇಕು ಎಂದುಕೊಂಡೆ.

ಮಾರನೆಯ ದಿನ ಡ್ರಾ ದಲ್ಲಿ ಯಾವ ಪತ್ರವೂ ಇರಲಿಲ್ಲ. ಆದರೆ, ಲ್ಲೈಬ್ರರಿ ಯಿಂದ  ಮದ್ಯಾಹ್ನ12.15ಕ್ಕೆ ಹೊರ ಬರುವಾಗ ಎಂಟರಿ ರಜಿಸ್ಟರ್ ಬುಕ್ ನಲ್ಲಿರುವ ಹೆಸರುಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿದೆ. ಹಿಂದಿನ ದಿನದ ಲಿಸ್ಟ್ ನಲ್ಲಿ ಮಣಿ ಎಂಬ ಹೆಸರು ಕಾಣಿಸಿದರೂ, ಶಶಿಯ ಹೆಸರು ಕಾಣಿಸಲಿಲ್ಲ. ಮುಂದಿನ ನಾಲ್ಕು ದಿನಗಳು ಯಾವ ಪತ್ರಗಳೂ ಇಲ್ಲದೇ ಕಳೆದವು! ಆದರೆ ನಾನು ರಜಿಸ್ಟರ್ ಬುಕ್ ನ್ನು ಪರಿಶೀಲಿಸದೇ ಇರುತ್ತಿರಲಿಲ್ಲ. ದಿನವೂ ಮಣಿ ಎನ್ನುವ ವ್ಯಕಿಯ ಹೆಸರು ಮಾತ್ರ ಸಿಗುತ್ತಿತ್ತೇ ಹೊರತು, ಶಶಿಯ ಹೆಸರಿನ ಸುಳಿವೇ ಇರಲಿಲ್ಲ!  ಐದನೇ ದಿನ ಇನ್ನೊಂದು ಪತ್ರ ಅದೇ ಡ್ರಾ ದಲ್ಲಿ ಸಿಕ್ಕಿದ ದಿನವೂ, ಮತ್ತದರ ಹಿಂದಿನ ದಿನವೂ ಎಂಟ್ರಿ ರಜಿಸ್ಟರ್ ನಲ್ಲಿ ಶಶಿಯ ಹೆಸರೇ ಇರಲಿಲ್ಲ. ಯಾರೋ ಶಶಿ ಎನ್ನುವ ಹೆಸರಿಟ್ಟುಕೊಂಡು ಪತ್ರ ಬರೆಯುತ್ತಿರಬಹುದೆಂದುಕೊಂಡೆ.

ಐದನೇ ದಿನ ಸಿಕ್ಕಿದ ಪತ್ರದ ಸಾರಾಂಶ ಇಷ್ಟು-
ನಲ್ಮೆಯ ಮಣಿಕರ್ಣಿಕಾ,
ನೀನು ನನ್ನ ಹಿಂದಿನ ಪತ್ರವನ್ನು ಓದಿ, ನನ್ನ ಬಗೆಗೆ ಕೊಂಚವಾದರೂ ಭಾನೆಗಳನ್ನು ತಾಳಿದ್ದರೆ ನಾನು ಮುಂದೆ ಬಾಳಿಯೇನು!
ಆಕರ್ಷಣೆಯನ್ನು ಮೀರಿದ ಪ್ರೀತಿ ನಮ್ಮದಾಗಬೇಕೆನ್ನುವುದು ನನ್ನ ಆಸೆ. ಮನುಷ್ಯ ಮನುಷ್ಯನ ನಡುವೆ, ಜೀವಿ ಜೀವಿಗಳ ನಡುವೆ ಇರುವುದು ಪ್ರೀತಿಯಷ್ಟೆ. ಆಕರ್ಷಣೆ ನಿರ್ಜೀವ ವಸ್ತುಗಳಿಗೆ ಸಂಬಂಧಿಸಿದ್ದು. ಅದೇನಿದ್ದರೂ ವಿಜ್ಞಾನಿಗಳ ವಿಷಯ ವಸ್ತು...........
......ಪ್ರೀತಿ ಜಗದ ನಿಯಮ.

ಪ್ರೀತಿಸುವ ಮುನ್ನ ಪರಾಮರ್ಶಿಸುವುದೂ ಸಹಜ.
ಇಂತಿ ನಿನ್ನವನಾಗುತ್ತಿರುವ- ಶಶಿ.

ಯಾರದ್ದೋ ಪತ್ರವನ್ನು ಕದ್ದು ಓದುವುದಕ್ಕೆ ನನಗೆ ಮುಜುಗರವಾಗುತ್ತಿತ್ತು. ಆದರೆ, ಆ ಪತ್ರದ ಸೆಳೆತ ನನ್ನ ಮುಜುಗರವನ್ನೂ ಮೀರಿದ್ದಾಗಿತ್ತು.

ಮುಂದೆ ವಾರಕ್ಕೆರಡು ಪತ್ರಗಳು ಡ್ರಾ ದಲ್ಲಿ ಬಂದು ಕೂರತೊಡಗಿದವು. ಜೋನ್ ಆಫ ಅರ್ಕ, ಮ್ಯಾಝಿನಿ, ಲೋಹಿಯಾ, ಪಾಯಿಥಾಗೋರಸ್, ಬಾಬ್ ಮ್ಯಾರ್ಲಿ, ರಾಜ್ ಕಪೂರ್, ಲತಾ ಮಂಗೇಶ್ಕರ್ ಇನ್ನೂ ಯರ್ಯಾರಾದ್ದೋ ವಿಚಾರಗಳನ್ನು ಪ್ರೀತಿಗೆ ತಳಕು ಹಾಕಿ ಬರೆಯುತ್ತಿದ್ದ ಪ್ರೇಮ ಪತ್ರಗಳು ನನ್ನನ್ನೇ ಮರುಳುಮಾಡಿದ್ದವು. ಇನ್ನು ಆ ಮಣಿಕರ್ಣಿಕಾಳ ಹೃದಯ ಹೇಗೆ ಹೂಡೆದುಕೊಳ್ಳುತ್ತಿತ್ತೋ?!  ಪ್ರೀತಿಯನ್ನು ಹೇಗೆ ತಡೆದುಕೊಳ್ಳುತ್ತಿತ್ತೋ!

ಹೀಗೇ ಮೂರೂ ತಿಂಗಳುಗಳು ಕಳೆದಿರಬಹುದು. ಗುರುವಾರ ಪತ್ರ ಡ್ರಾ ದಲ್ಲಿ ಇರಬಹುದಾದ ದಿನ; ಆದರೆ ಇರಲಿಲ್ಲ. ನಾನ್ಯಾಕೆ ಬೇಜಾರಾದೆ ಎಂದು ನನಗೇ ಗೊತ್ತಾಗಲಿಲ್ಲ. ಮಳೆ ಬರುವ ವಾತಾವರಣವಿತ್ತು. ಲೈಬ್ರರಿಯ ಎದುರಿನ ಗಾರ್ಡನ್ ತುದಿಯ ಕಟ್ಟೆಯ ಮೇಲೆ, ಮೇಲೆ ನೋಡುತ್ತಾ ಕುಳಿತೆ. ಕೈಗಳು ತಾವಾಗೇ ಪಕ್ಕದಲ್ಲಿರುವ ಗಿಡದಿಂದ ಹೂ ಕೀಳಲು ತೊಡಗಿಕೊಂಡಿದ್ದವು. ನಾನು ಕುಳಿತಲ್ಲಿಂದ ರಸ್ತೆಯ ಇಳುಕಲು ಕಾಣಿಸುತ್ತಿತ್ತು. ಯಾವುದೊ ಜೀವನದ ವ್ಯಾಪಾರ ಮುಗಿಸಿ ಹೊರಟ ದೇಹವನ್ನು ಗಾಡಿಯಲ್ಲಿ ಕುಕ್ಕರುಗಾಲಿನಲ್ಲಿ ಕೂರಿಸಿಕೊಂಡು ಲೈಬ್ರರಿ ಯ ಎದುರಿನ ಸ್ಮಶಾನದಲ್ಲಿ ಮಣ್ಣು ಮಾಡಲು ತರುತ್ತಿದ್ದರು. ಹೆಣದ ಮೆರವಣಿಗೆಯನ್ನ ಲೈಬ್ರರಿಯ ಎದುರು ಒಮ್ಮೆ ನಿಲ್ಲಿಸಿದರು. ಲೈಬ್ರರಿಯ ಒಳಗಿದ್ದವರೊಂದಿಷ್ಟು ಜನ ಓಡೋಡಿ ಬಂದು ನೋಡಿ ಹೋದರು. ನಾನೂ ನೋಡಲು ಎದ್ದು ಹೊರಟೆ. ಯಾರೋ ಹೇಳಿದರು-" ಇಲ್ಲ ಲೈಬ್ರರಿ ಸೈನ್ಸ್ ಓದುತ್ತಿದ್ದ ಹುಡುಗ. ಏಕ್ಸಿಡೆಂಟ್ ನಾಗ ಹೊಂಟ್ ಹೋದ ನೋಡ್ರಿ. ನಸೀಬ್ ಕೆಟ್ಟಿದ್ದ ಇರಬೇಕ!"

ನನಗೆ ಶವದ ಮುಖದ ಗುರುತು ಹತ್ತಲಿಲ್ಲ. ಒಂದು ರೀತಿ ಅಸಹ್ಯಕರವಾಗಿ ಕಳೆಗುಂದಿದ ಮುಖ, ಮುಚ್ಚಿದ ಕಣ್ಣು, ಹತ್ತಿ ತುರುಕಿದ ಮೂಗು, ಭಸ್ಮ ಗಂಧ ಮೆತ್ತಿದ ಹಣೆ- ನಾನು ನೋಡಿದ್ದ ಹುಡುಗನೇ ಆದರೂ ಈಗ ಗುರುತಿಸುವುದು ಹೇಗೆ? ಸುಮ್ಮನೇ ನಾನು ಕಿತ್ತಿದ್ದ ಹೂಗಳನ್ನು ಶವಕ್ಕೆರಚಿ ಬಂದೆ. ಶವ ಮಸಣದ ಕಡೆಗೆ ಯಾತ್ರೆ ಹೊರಟಿತು. ನಾನು ಲೈಬ್ರರಿಯ ಒಳಗೆ ಹೋಗಿ ಪುಸ್ತಕವನ್ನು ಹಿಡಿದು ಕೂತೆ.
ಏನೇನು ಓದುವುದೆಂದು ಯೋಚಿಸುತ್ತಿರಬೇಕಾದರೆ, ಮಳೆಯ ದೊಡ್ಡ ದೊಡ್ಡ ಹನಿಗಳು ಬೀಳುವ ಸದ್ದು ಕೇಳಿಸಿತು. ಅದು ಬೇಸಿಗೆಯ ಮೊದಲ ಮಳೆ. ಹೊರಗಿನ ಚೆಲುವನ್ನು ನೋಡಲೆಂದು ಲೈಬ್ರರಿಯ ನಾಲ್ಕನೇ ಮಹಡಿಯ ಮೂಲೆಗೆ ಹೋಗಿ ನಿಂತುಕೊಂಡೆ. ಮಳೆ ಜೋರಾಯಿತು.

ಸ್ಮಶಾನದಲ್ಲಿ ಹೆಣವನ್ನು ಮಣ್ಣು ಮಾಡಲು ಹೋದವರ ಕಣ್ಣೀರು ಮಳೆಯ ಹನಿಯೊಂದಿಗೆ ಹರಿದು ಹಳ್ಳ ಸೇರುತ್ತಿರುವುದು ನಾನು ನಿಂತ ಜಾಗದಿಂದ ಕಾಣಿಸುತ್ತಿತ್ತು. ನನ್ನ ಕಣ್ಣೂ ನಿರಾಡಿತು. ಸಾವು ಯಾರನ್ನೂ ಹೆದರಿಸದೆ ಬಿಟ್ಟಿಲ್ಲ, ಬದುಕೂ ಅಷ್ಟೇ! ಕಷ್ಟದ ಬದುಕಿಗಿಂತ ಸಾವೇ ಸುಲಭದ್ದು. ಆದರೇನು ಮಾಡುವುದು ಎಲ್ಲರಿಗೂ ತಮ್ಮವರೆನ್ನುವವರೊಬ್ಬರು ಇದ್ದೇ ಇರುತ್ತಾರೆ; ಎಂದರೆ ಬದುಕುವುದು ಪರರಿಗಾಗಿಯೇ? ?.... ಹೀಗೇ ಯಾವುದೊ ಯೋಚನೆಗಳ ಸುಳಿಯಲ್ಲಿ ಸಿಕ್ಕು ಮಳೆಯನ್ನು ಸವಿಯಲಿಲ್ಲ. ನನ್ನ ಒಳಗು ಯಾವುದೋ ರೋದನೆಯ ಚಕ್ರಕ್ಕೆ ಸಿಕ್ಕಿಹಾಕಿಕೊಂಡು ಪಡೆದ ವೇಗಕ್ಕೆ, ನನ್ನ ಕಣ್ಣುಗಳಿಂದಲೂ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು.

ಮಾರನೆಯ ದಿನ ಡ್ರಾ ದಲ್ಲಿ ಪತ್ರ ಬಂದು ಕುಳಿತಿತ್ತು. ತೆಗೆದು ಓದಲು ಪ್ರಾರಂಭಿಸಿದ್ದೆನಷ್ಟೆ, ಯಾರೋ ನನ್ನ ಪಕ್ಕ ಬಂದು ನಿಂತರು. ನಾನು ತಲೆಯೆತ್ತಿ ನೋಡುವುದರೊಳಗಾಗಿ ಮಾತು ಪ್ರಾರಂಭಿಸಿದ್ದರು. "ಮಣಿಕರ್ಣಿಕಾ ಮೇಡಮ್, ನಿಮ್ಮ ಜೊತೆ ಸ್ವಲ್ಪ ಮಾತಾಡ್ ಬೇಕಿತ್ತು"
"ಮಾತಾಡ್ ಬಹುದು. ಆದ್ರೆ, ನಾನು ಮಣಿಕರ್ಣಿಕಾ ಅಲ್ವಲ್ಲ!"
"ಮತ್ತೆ ಈ ಪತ್ರ ಯಾಕೆ ಓದ್ತಿದಿರೀ?"
ನನ್ನಲ್ಲಿ ಉತ್ತರವಿರಲಿಲ್ಲ. ಅವಮಾನವಾಯಿತು. ಅಪಚಾರವಾಯಿತು. ತಪ್ಪಾಯಿತು. ಇಷ್ಟು ದಿನ ನನ್ನ ತಪ್ಪು ನನಗೆ ಯಾಕೆ ಕಾಣಿಸಲಿಲ್ಲ ಎಂದು ಒಳಗೊಳಗೇ ಕೊರಗಿದೆ.
ಆದದ್ದಾಗಲಿ ಎಂದು ಅವರಲ್ಲಿ ನಡೆದದ್ದೆಲ್ಲವನ್ನೂ ಹೇಳಿಕೊಂಡುಬಿಟ್ಟೆ.
"ನಾನು ಶಾಮ್, ಮೊನ್ನೆ ತೀರಿಹೋದನಲ್ಲಾ ಲೈಬ್ರರಿ ಸೈನ್ಸ್ ಹುಡುಗ-ಚಂದ್ರ ಅಂತ -ಅವನ ಫ್ರೆಂಡ್. ಅವನೇ ಈ ಪತ್ರಗಳನ್ನ ಬರೀತಿದ್ದಿದ್ದು. ಮೊನ್ನೆ ಊರಿಗೆ ಹೊರಟವನು ಈ ಪತ್ರವನ್ನ ನನ್ನ ಕೈಗೆ ಕೊಟ್ಟು ಶುಕ್ರವಾರ ಈ ಜಾಗದಲ್ಲಿ ಇಡಲಿಕ್ಕೆ ಹೇಳಿದ್ದ. ಅವನ ಕೊನೆಯ ಪತ್ರವನ್ನು ಮಣಿಕರ್ಣಿಕಾಳಿಗೆ ತಲುಪಿಸಿ, ಅವನ ದುರ್ಮರಣದ ಸುದ್ದಿಯನ್ನೂ ಹೇಗಾದರೂ ಮಾಡಿ ತಿಳಿಸಿಬಿಡೋಣ ಎಂದು ಯೋಚಿಸಿದ್ದೆ."
"ಅವನು ಬರೆದ ಎಲ್ಲಾ ಪಾತ್ರಗಳನ್ನೂ ಓದಿದ್ದೇನೆ.ಅವನ ಪ್ರೀತಿ ಅದ್ಭುತವಾದದ್ದಾಗಿತ್ತು. ಮಣಿಕರ್ಣಿಕಾ ಅವನ ಸಾವನ್ನು ಸಹಿಸುವುದಿಲ್ಲ"
"ವಿಷಯ ತಿಳಿಸದಿದ್ದರೆ ಯಾರೋ ಇಷ್ಟು ದಿನ ತಮಾಷೆಗೆ ಮಾಡಿದ್ದಾರೆಂದು ಭಾವಿಸುವುದಿಲ್ಲವೇ?!"
ಪಾತ್ರವನ್ನು ಅದೇ ಡ್ರಾದಲ್ಲಿ ಇಟ್ಟೆವು. ಒಂದು ವಾರವಾದರೂ ಆ ಪತ್ರ ಅಲ್ಲೇ ಉಳಿಯಿತು.

ಮುಂದಿನ ದಿನಗಳಲ್ಲಿ ಮಣಿಕರ್ಣಿಕಾಳಿಗಾಗಿ ಹುಡುಕಾಟ ಪ್ರಾರಂಭವಾಯಿತು. ಲೈಬ್ರರಿಯ ರಜಿಸ್ಟರ್ ನಲ್ಲಿರುವ ಮಣಿ ಯಾವುದೋ ಮಣಿಕಾಂತನೆಂದು ತಿಳಿಯಿತು.
ಚಂದ್ರನ ಸ್ನೇಹಿತರು- ಆಗಾಗ ಮಣಿಕರ್ಣಿಕಾಳ ಹೆಸುರನ್ನು ಅವನ ಬಾಯಿಯಲ್ಲಿ ಕೇಳಿದ್ದೆವೇ ಹೊರತು ಅವಳನ್ನು ಕಂಡಿಲ್ಲ ಎಂದರು. ಅವನ ಅಣ್ಣನಲ್ಲಿ ವಿಚಾರಿಸಿದೆವು. ಚಂದ್ರನ ರೂಮಿನಲ್ಲಿ ಸುಳುಹಿಗಾಗಿ ಹುಡುಕಿ ನೋಡೋಣ ಎಂಬ ಸಲಹೆಯನ್ನು ಕೊಟ್ಟನು. ಯೂನಿವರ್ಸಿಟಿಯ ಪಕ್ಕದಲ್ಲೇ ಇದ್ದ ಅವನ ಮನೆಗೆ ಹೋಗಿ ಸಾಕಷ್ಟು ಪರಿಶೀಲನೆ ನಡೆಸಿದೆವು. ಯಾವುದೇ ಸುಳಹೂ ಸಿಗದಾಯಿತು. ಅಲ್ಲೇ ಕುಳಿತು ಬೆವರೊರೆಸಿಕೊಳ್ಳುತ್ತಿರುವಾಗ, ಮೇಲೆ ಎತ್ತರದ ಶೆಲ್ಫ್ ಮೇಲೆ ಹಾಳೆಗಳು ಅತ್ತಿತ್ತಲಾದ ದೊಡ್ಡ ನೋಟ್ ಪ್ಯಾಡ್ ಕಾಣಿಸಿತು. ಅವನು ಬರೆದ ಪತ್ರಗಳೆಲ್ಲವೂ ಅಲ್ಲಿ ಸಿಕ್ಕವು. ಪತ್ರಗಳೆಲ್ಲ ಇಲ್ಲೇ ಇವೆ ಎಂದರೆ, ಮಣಿಕರ್ಣಿಕಾ ಅವನ ಪತ್ರಗಳನ್ನೂ- ಪ್ರೀತಿಯನ್ನೂ ಅಲಕ್ಷಿಸಿದ್ದಳೆಂದೆ!?

ಪ್ರತೀ  ಪತ್ರಗಳ ಹಿಂಭಾಗದಲ್ಲೂ ಪುಟ್ಟ ಪುಟ್ಟ ಟಿಪ್ಪಣಿಗಳಿದ್ದವು.
ಮೊದಲ ಪತ್ರ- ಓದಿ, ಮರಳಿ ಡ್ರಾದಲ್ಲಿ ಯಾಕೆ ಇಟ್ಟು ಹೋದಳು?
ಎರಡನೇ ಪತ್ರ- ತಲೆಯೆತ್ತದೇ ಓದಿ ಮುಗಿಸಿದಳು.
ಮೂರನೇ- ಯಾವುದೋ ಸಾಲನ್ನು ನೋಟ್ ಮಾಡಿಕೊಂಡಳು.
ನಾಲ್ಕನೇ- ನಿನ್ನೆ ಮೊನ್ನೆಯೆಲ್ಲಾ ಪಾತ್ರಕ್ಕಾಗಿ ಪಕ್ಕದ ಡ್ರಾಗಳಲ್ಲೂ ತಡಕಾಡಿದ್ದಳು.
ಐದನೇ- ಬಾಬ್ ಮ್ಯಾರ್ಲಿಗಾಗಿ ಮ್ಯೂಸಿಕ್ ಸೆಕ್ಕ್ಷನ್ ಗೆ ಹೋದಳು.
ಆರನೇ- ಲತಾಜೀಯ ಹಾಡನ್ನು ಗುನುಗುತ್ತ ಓದುತ್ತಿದ್ದಳು.
.....ಹೀಗೇ ಟಿಪ್ಪಣಿಗಳನ್ನು ಓದುತ್ತ ಹೋದಂತೆ, ನನಗೆ ಮಣಿಕರ್ಣಿಕಾ ಯಾರೆಂದು ತಿಳಿದು ಹೋಯಿತು.
ನನ್ನ ಕಣ್ಣೀರ ಕಟ್ಟೆ ಒಡೆಯಿತು. ಶಾಮನಿಗೂ, ಚಂದ್ರನ ಅಣ್ಣನಿಗೂ ಮಣಿಕರ್ಣಿಕಾ ಕಾಣಿಸಿದಳು. ಯಾರ ಸಮಾಧಾನದ ಮಾತುಗಳಿಗೂ ನಾನು ಕುಸಿದು ಹೋಗುವುದನ್ನು ತಡೆಯುವ ಶಕ್ತಿ ಇರಲಿಲ್ಲ.

ಅವನ ಕೊನೆಯ ಪತ್ರದಲ್ಲೊಂದು ಕವನವಿತ್ತು. 
ಪ್ರೀತಿಸೋಣ ಗೆಳತಿ
ಮತ್ತೆ ಮತ್ತೆ ಪ್ರೀತಿಸೋಣ ಗೆಳತಿ
ಸತ್ತಮೇಲೂ ಮತ್ತೆ ಹುಟ್ಟಿ ಬಂದು ಪ್ರೇಮಿಸೋಣ
ಹುಟ್ಟು ಸಾವು ಮೀರಿ ನಿಂತು ಪ್ರೇಮಿಸೋಣ
ನಾನು ನೀನು ಜೋಡಿಯಾಗಿ ಜೀವಿಸೋಣ........
........
........
ಮಧುರ ಪ್ರೇಮವೇ ಅಮರವಂತೆ.

ಬುಧವಾರ, ಮೇ 2, 2018

ಗಾಂಧಾರಿ ಬರೀ ಹೆಣ್ಣಲ್ಲ, ಹೆಣ್ಣಿನ ಪ್ರತೀಕ.

ಹೆಣ್ಣು ಹುಟ್ಟಿತೆಂದು
ಅಳದೇ ಇರುವುದು ಹೇಗೆ?!
ಪ್ರತೀ ಹೆಣ್ಣಿಗೂ ಗೊತ್ತು
ಗಾಂಧಾರಿಯ ಕಣ್ಣು ಪಟ್ಟಿಯ ಗುಟ್ಟು.

ಮೈಮೇಲೆಲ್ಲ ಕಣ್ಣಾಡಿಸುವ
ಕಪ್ಪು ಕನ್ನಡಕದೊಳಗಿನ ಕಣ್ಣುಗಳನ್ನು
ಪ್ರಶ್ನಿಸಲಾಗದವಳಿಗೆ,
ಕತ್ತಲಾಗುವುದರೊಳಗಾಗಿ
ಮನೆ ಸೇರುವುದೇಕೆಂಬುದಕ್ಕೆ
ಉತ್ತರ ಗೊತ್ತು.

ಮನೆಗೆ ಬಂದ ನೆಂಟ
ಗಂಟು ಬೀಳುವ ಸಂಕಟ,
ಒಂಟಿ ಹಾದಿಯಲ್ಲಿ
ಅಪರಿಚಿತನ ಕಾಟ,
ಕೆಲವೊಮ್ಮೆ-
ಶಾಲೆಯ ಶಿಕ್ಷಕನ ನೋಟಕ್ಕೆ
ತಲೆ ತಗ್ಗಿಸುವವಳು.

ಪ್ರೀತಿಸಿ ಕೈ ಹಿಡಿದು ನಂಬಿಸಿ
ಚುಂಬಿಸಿ ಕೈ ಕೊಡುವವರು,
ಒಮ್ಮೊಮ್ಮೆ-
ಕೈ ಹಿಡಿದು ತಾಳಿ ಕಟ್ಟಿದವರೂ
ಕಿರುಕುಳ ಕೊಡುವರು.

ಕಚೇರಿಯಲ್ಲಂತೂ ಚೀರುವಂತಿಲ್ಲ,
ಕೆಲಸ ಬಿಟ್ಟು ಮನೆಯಲ್ಲೂ ಕೂರುವಂತಿಲ್ಲ!(ಹೊಟ್ಟೆಪಾಡು)

ಬಸ್ಸಿನಲ್ಲೋ, ಜಾತ್ರೆಯಲ್ಲೋ,
ದೇವಸ್ಥಾನದ ನೂಕು ನುಗ್ಗಲಿನಲ್ಲೋ,
ಎಲ್ಲೆಲ್ಲೂ ಕುಗ್ಗುವವಳು ಹೆಣ್ಣು
ಮುಚ್ಚಿಕೊಂಡು ಕಣ್ಣು!!

ಪ್ರತೀ ಹೆಣ್ಣಿಗೂ ಗೊತ್ತು
ಗಾಂಧಾರಿಯ ಕುರುಡಿನ ಗುಟ್ಟು.

ಗಾಂಧಾರಿ ಬರೀ ಹೆಣ್ಣಲ್ಲ,
ಹೆಣ್ಣಿನ ಪ್ರತೀಕ.

ಗುರುವಾರ, ಏಪ್ರಿಲ್ 26, 2018

ಅಪ್ಪನಿಗಾಗಿ

ಅಪ್ಪನಿಗಾಗಿ

ದಿನವೂ ಕಾಯುತ್ತಾಳೆ ಮಗಳು
ಬಾಗಿಲು ಪಟ್ಟಿಯ ಮೇಲೆ
ತುದಿಗಾಲಲ್ಲಿ ನಿಂತು.

ಅಸ್ತವ್ಯಸ್ತ ವ್ಯವಸ್ಥೆಯ ಮಹಾನಗರಗಳು
ಜನದಟ್ಟಣೆಯ ಮಹಾನರಕಗಳು
ಗಾಳಿ-ಮಳೆಗೂ ಕೊಚ್ಚಿ ಹೋಗುವ ಗಲ್ಲಿಗಳು.

ಕಾಯುವ ಮಗಳಿಗೇನು ಗೊತ್ತು-
ಅಪ್ಪನ ಕಚೇರಿ ಯಾವ ಮೂಲೆಯಲ್ಲಿದೆಯೋ?

ಬೆಳಗಾಗುವುದನ್ನೇ ಕಾಯುವಂತಿರುವ ಅಪ್ಪ
ಮನೆಮಂದಿಯ ಮುಖ ನೋಡಲೂ ಪುರುಸೊತ್ತಿಲ್ಲದಂತೆ ಹೊರಟವನು
ಸ್ಮಶಾನಕ್ಕೆ ಹೋಗುವ
ರಸ್ತೆಯ ಗುಂಡಿಗಳನ್ನು ದಾಟಿ
ಕಚೇರಿಗೆ ಹೋಗಿ ದುಡಿದು
ದುಡ್ಡು ಬಾಚಿಕೊಂಡು ಬರುತ್ತಾನೆ!

ಮಗಳಿಗೇನು ಗೊತ್ತು-
ಈ ಊರಲ್ಲಿ ದುಡ್ಡಿಗಿಂತ ಮಣ್ಣೇ ದುಬಾರಿಯೆಂದು!

ಖರ್ಚಿನ ದಾರಿಯಲ್ಲಿ
ಮಾರಿ ತ್ರಿಶೂಲ ಹಿಡಿದು ನಿಂತಿರುತ್ತಾಳೆ-
ಶಾಪಿಂಗ್ ಶೂರ ತಾಯಿಗೆ ದುಡಿದದ್ದಷ್ಟೂ ಬೇಕು.
ಅದೆಷ್ಟು ಹೊತ್ತು ಕಚೇರಿಯ ಚೇರಿನಮೇಲೊ?
ಒಂದೊಂದು ಸೆಕೆಂಡಿಗೂ ಸಂಬಳವಂತೆ!

ಮಗಳಿಗೇನು ಗೊತ್ತು-
ಅಪ್ಪ ಮನೆ ತಲುಪುವ ಹೊತ್ತು?
(ಮಲಗಿ ನಿದ್ರಿಸಿರುತ್ತಾಳೆ ಅವಳು)

ಸೋಮವಾರ, ಏಪ್ರಿಲ್ 23, 2018

ಸ್ನಾನಕ್ಕೂ ಒಂದೇ ಬಕೀಟ್ ನೀರು ಸಾಕು!( ಹೀಗೊಂದು ಪ್ರಬಂಧ)

ಮನೆಯೊಳಗೆ ಮಗಳೊಡನೆ ಬ್ರಿಕ್ಸ್ ಜೋಡಿಸುತ್ತ ಕುಳಿತಿದ್ದವಳಿಗೆ ಕೇಳಿಸಿದ ಪಕ್ಷಿಯ ಕೂಗನ್ನು ಗಮನಿಸದೇ ಇರಲಾಗಲಿಲ್ಲ. ಬಾಲ್ಯದ ಬಹುತೇಕ ಸಮಯವನ್ನು ಹೊಳೆಯಲ್ಲೋ ಅಥವಾ ಹೊಳೆಯ ಅಂಚಿನಲ್ಲೋ ಕಳೆದವರಿಗೆ ಮಿಂಚುಳ್ಳಿ ಪರಮ ಆಪ್ತ. ಅದು ಮಿಂಚುಳ್ಳಿಯದೇ ಕೂಗೆಂದು ಹೊಳೆಯಲು ಎರಡು ಸೆಕೆಂಡ್ ಕೂಡ ಹಿಡಿಯಲಿಲ್ಲ.

ರೂಮಿಗೆ ಓಡಿದೆ. ಜೋರಾಗಿ ಓಡಿಹೋದ ನನ್ನನ್ನು ನೋಡಿ ಮಗಳಿಗೆ ಗಾಬರಿಯಾಗಿರಲಿಕ್ಕೆ ಸಾಕು. 'ದೇವರೇ! ಕ್ಯಾಮರಾದ ಬ್ಯಾಟರಿ ಕೈಕೊಡದಿದ್ದರೆ ಸಾಕಪ್ಪಾ' ಎಂದು ಬೇಡಿಕೊಳ್ಳಲೂ ಸಮಯವಿರದಂತೆ, ಕ್ಯಾಮರಾ ಆನ್ ಮಾಡಿ, ಮನೆಯ ಕಿಟಕಿಯನ್ನು ನಿಧಾನವಾಗಿ ತೆರೆದು,     ಮರದಮೇಲೆ ಕುಳಿತ ಮಿಂಚುಳ್ಳಿಯ ಚಿತ್ರವನ್ನು ಸೆರೆಹಿಡಿದಾಗ ಆದ ಖುಷಿ ಎಷ್ಟೆಂದು ನನಗಷ್ಟೇ ಗೊತ್ತು.


ಹತ್ತಿರ ಬಂದ  ಮಗಳಿಗೆ ಗಲಾಟೆ ಮಾಡದಿರುವಂತೆ ಸೂಚಿಸಿ, ಅವಳನ್ನೆತ್ತಿ ಮಿಂಚುಳ್ಳಿಯನ್ನು ತೋರಿಸಿ, ಅದು ಮೀನು ಹಿಡಿಯುವ ವಿಧಾನವನ್ನು ವಿವರಿಸಿದೆ ಮತ್ತು "ನೀನು ನೀರಾಟ ಆಡಿ ನೀರನ್ನು ಪೋಲುಮಾಡಿದರೆ, ಕೆರೆ-ಹೊಳೆಗಳ ನೀರೆಲ್ಲ ಖಾಲಿಯಾಗಿ ,ಮೀನುಗಳೆಲ್ಲ ಸತ್ತುಹೋಗಿ, ಮಿಂಚುಳ್ಳಿಗೆ ಆಹಾರವೇ ಇಲ್ಲದಂತಾಗುತ್ತದೆ" ಎಂದೆ. ಮಗಳು ನನ್ನ ಕೈಯಿಂದ ತಪ್ಪಿಸಿಕೊಂಡು ಓಡಿಹೋಗಿ, ನಮ್ಮನೆಯ ಪುಟ್ಟ ಆಕ್ವೆರಿಯಂ ಹಿಡಿದು ಬಾಲ್ಕನಿಗೆ ಹೋಗಿ ಮಿಂಚುಳ್ಳಿಯನ್ನು ಬಾ ಎಂದು ಕರೆದಳು. ಮಿಂಚುಳ್ಳಿ ಅವಳ ಕೂಗಿಗೆ ಹೆದರಿ ದೂರದ ಮರೆಕ್ಕೆ ಹೋಗಿ ಕುಳಿತುಕೊಂಡಿತು.

ನಮ್ಮ ಮನೆಯ ಐದು ಕಿಲೋಮೀಟರ್ ವ್ಯಾಪ್ತಿಯಲ್ಲೆಲ್ಲೂ ಕೆರೆಯಾಗಲಿ ಹೊಳೆಯಾಗಲಿ ಇಲ್ಲ. ಈ ಮಿಂಚುಳ್ಳಿಯೆಲ್ಲಿಂದ ಬಂತು ಎಂಬ ಯೋಚನೆ. ಎಲ್ಲೋ ನೀರಿನ ಮೂಲವನ್ನರಸಿಕೊಂಡು ಹೊರಟಿರಬೇಕು. ಗುಳೆ ಹೋಗುವ ಹಾದಿಯಲ್ಲಿ ನಮ್ಮ ಮನೆಯ ಪಕ್ಕದ ಮರದ ಮೇಲೊಮ್ಮೆ ದಣಿವಾರಿಸಿಕೊಳ್ಳಲು ಕುಳಿತಿರಬೇಕು.ಯಾರ್ಯಾರ ಕಷ್ಟಗಳು ಏನೇನೋ ಯಾರಿಗೆ ಗೊತ್ತು.
ಇಷ್ಟಾದಮೇಲೆ, ಅಂಗಳಕ್ಕೆ ನೀರು ಹಾಕಿ ಸಾರಿಸುವುದನ್ನು ಬಿಟ್ಟಿದ್ದೇನೆ; ಸ್ನಾನಕ್ಕೂ ಒಂದೇ ಬಕೀಟ್ ನೀರು ಸಾಕು!

ಬುಧವಾರ, ಏಪ್ರಿಲ್ 18, 2018

ಅಕ್ಷಯ ತೃತೀಯ

ವರುಷಗಳ ಹೊಸಕಿಹಾಕಿ ಉರುಳಿಹೋದ
ಹಲವು ವರುಷಗಳಲ್ಲಿ
ನೀನಿದ್ದೆ ಜೊತೆಗಾರ
ನನ್ನ ಬಂಗಾರ.

ಅಸ್ಪಷ್ಟ ನೆನಪುಗಳೊಡನೆ
ನಿನ್ನವೂ ಅಷ್ಟಿಷ್ಟು ಇವೆ
ಅವುಗಳನ್ನಷ್ಟೇ ನೆನೆಯುತ್ತೇನೆ
ನಾನು ನಿನ್ನೊಡನೆ.

ಬಿಡಿಸಿಕೊಂಡು ಬಂದ
ಅಮ್ಮನ ಕರುಳಿನ ಬಂಧದೊಡನೆ ಹೋಲಿಸಲಾಗದಿದ್ದರೂ
ಕಡಿಮೆಯೇನಲ್ಲ ನಿನ್ನ ಪ್ರೀತಿ
ನನ್ನೊಲವಿಗಿಂತಲೂ ಅತಿ.

ನಾಳೆಯ ನೆನೆಯದೇ
ನಿನ್ನೆಯ ಹಳಿಯದೇ
ಸವಿಯೋಣ ಈ ದಿನವ, ಬಾ ಜೊತೆಗಾರ
ನನ್ನ ಬಂಗಾರ.

ಶನಿವಾರ, ಏಪ್ರಿಲ್ 14, 2018

ಕನ್ನಡ ಪುಸ್ತಕವನ್ನೂ ಇಂಗ್ಲಿಷ್ ಮಾತನಾಡಿಯೇ ಖರೀದಿಸಬೇಕು!

ಹೇಳಿ ಹೇಳಿ ಸಾಕಾಗಿ ಹೋಗಿದೆ ನಾನೂ ಕನ್ನಡದವನೇ ಎಂದು.
ಈ ಊರಿನವರು  ಪದೇ ಪದೇ ಮರೆಯುತ್ತಾರೆ ನನ್ನನ್ನು
ಮತ್ತು
ಮರೆಯುತ್ತಾರೆ ತಾವೂ  ಕನ್ನಡದವರೇ ಎನ್ನುವುದನ್ನು!

"ಕನ್ನಡ ಮಾತಾಡಿದ್ದಕ್ಕೆ ಥ್ಯಾಂಕ್ಸ್" ಎನ್ನುವ ಟ್ಯಾಕ್ಸಿ ಚಾಲಕನೇ ಆಪ್ತನೆನ್ನಿಸುತ್ತಾನೆ,
ಪಂಜಾಬಿ ಢಾಬಾದವನನು "ಬನ್ನಿ ಬನ್ನಿ" ಎಂದು ಕರೆದುದಕ್ಕಾದರೂ ಊಟ ಮಾಡಿಬರುತ್ತೆನೆ,
ಪುಸ್ತಕ ಪರಿಷೆಗೆ ಹೋಗಿ ಕನ್ನಡದವರನ್ನು ಹುಡುಕುತ್ತೇನೆ.

ಶಾಪಿಂಗ್ ಮಾಲಿಗೆ ಹೋಗಲು ಮನಸ್ಸಾಗುವುದಿಲ್ಲ
ಎಂ ಜಿ ರೋಡ್ ಬೆಸರವೆನ್ನಿಸುತ್ತದೆ
ಮೆಜೆಸ್ಟಿಕ್ ನ ಗಡಿಬಿಡಿಯಲ್ಲಿ ಕನ್ನಡ ಮಾತಾಡುವವರಿಗೆ ಸಮಯವೆಲ್ಲಿ?

ಕನ್ನಡ ಪುಸ್ತಕವನ್ನೂ ಇಂಗ್ಲಿಷ್ ಮಾತನಾಡಿಯೇ ಖರೀದಿಸಬೇಕು!

ಒಮ್ಮೊಮ್ಮೆ ಈ ಊರಲ್ಲಿ ಕಳೆದೂ ಹೋಗುತ್ತೇನೆ
ಅಲ್ಲಲ್ಲಿ ಕಾಣುವ ಮಾಸಲಾದ ಕನ್ನಡದ ಬೋರ್ಡ್ ದಾರಿತೋರಿಸುತ್ತದೆ
ಇದು ನನ್ನ ಊರೇ ಇರಬೇಕೆಂದು ನನಗೇ ನಾನು ಹೇಳಿಕೊಳ್ಳುತ್ತೇನೆ.

ಇನ್ನು ನನ್ನ ಗೆಳತಿಯರೋ,
ಜೀನ್ಸ್ ತೊಟ್ಟು ರೋಡಿಗಿಳಿದರೆ ಕನ್ನಡ ಮರೆಯುತ್ತಾರೆ,
ಗಂಡನೊಡನೆ ಮಾತು ಬಿಟ್ಟು,
ಮಕ್ಕಳೊಡನೆ ಇಂಗ್ಲಿಷ್ ಮೆರೆಯುತ್ತಾರೆ!!

ಶುಕ್ರವಾರ, ಏಪ್ರಿಲ್ 13, 2018

ಕಾಲ


ಹರಿದು ಹೋದ ಪುಸ್ತಕದಿಂದ
ಕಥೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ರಾಜಕುಮಾರನ ನಗು ವಿಜ್ಞಾನಿಯ
ಆಮ್ಲದ ಜಾಡಿಯಲ್ಲಿ ಹೊಗೆಯೆಬ್ಬಿಸಿದೆ.

ಆನೆಯೇ ಅಂಬಾರಿಯ ಮೇಲೆ ಕುಳಿತು
ಮೈಸೂರಿಗೆ ಹೊರಟಿದೆ.

ತೆನಾಲಿ ರಾಮ ದುಬೈ ಶೇಖರ ಆಸ್ಥಾನದಲ್ಲಿ.

ಮುದುಕನ ಮೂವರು ಮಕ್ಕಳೂ
ಮುದುಕರಾಗಿದ್ದಾರೆ.

ಕಮ್ಮಾರ ಚಿನ್ನದಂಗಡಿ ಇಟ್ಟಿದ್ದಾನೆ.
ಗುರುಗಳು ಭರತನಾಟ್ಯವಾಡುತ್ತಿದ್ದಾರೆ.
ಶಿಷ್ಯರೋ ಯುದ್ಧಭೂಮಿಯಲ್ಲಿ!!!

ಹರಿದುಹೋದ ಪುಸ್ತಕವನ್ನು ಜೋಡಿಸಹೋದಾಗ-
ಕಲಿಗಾಲವನ್ನು ಕಂಡಂತಾಯ್ತು!!!!

ಸೋಮವಾರ, ಏಪ್ರಿಲ್ 9, 2018

ಗೆಜ್ಜೆ


ಕಳೆದುಹೋದ ಬೆಳ್ಳಿ ಕಾಲ್ಗೆಜ್ಜೆಯ ಹುಡುಕಹೋಗಲಿಲ್ಲ.
ಕುಣಿಯುವಾಗ  ಬಿದ್ದು ಕಳೆದುದಲ್ಲ,
ಕಾಡುದಾರಿಯಲ್ಲೂ ಕಳೆದುದಲ್ಲ,
ಅಲ್ಲಿ ಇಲ್ಲಿ ಇಟ್ಟು ಮರೆತುದಲ್ಲ.

ಯಾರದೋ ಕಷ್ಟಕಾಲಕ್ಕೆ
ಕೊಟ್ಟದ್ದಕ್ಕೆ ಲೆಕ್ಕ ಇಡಬೇಕೆ?
ಕೊಟ್ಟು ಕೈ ತೊಳೆದುಕೊಂಡದ್ದಕ್ಕೆ
ಕಣ್ಣೀರಿಡಬೇಕೇ?!!

ಚಲನಚಿತ್ರದಂತೆ ಸರಿದುಹೋದ
ಜೇವನದ ಚಿತ್ರಗಳ ಮೇಲೆಲ್ಲ
ಕಾಲ್ಗೆಜ್ಜೆಯ ಹೆಜ್ಜೆ ಗುರುತು ಮೂಡಿದೆ.
ಕೆಲವೊಮ್ಮೆ ಕಾಲ್ಗೆಜ್ಜೆಯ ನೆನಪು
ನನ್ನನ್ನೇ ನಾನು ಕಳೆದುಕೊಂಡಂತೆ ಮಾಡಿದೆ.

ಕೊಟ್ಟದ್ದನ್ನು ತಿರುಗಿ ಕೇಳಲಾಗದೇ,
ಪಡೆದವರನ್ನು ಮರಳಿ ಕಾಣಲಾಗದೇ
ನನ್ನಲ್ಲೇ ಅಡಗಿಸಿಟ್ಟುಕೊಂಡ ತಲ್ಲಣ -
ಕನಿಕರವೋ, ಮುನಿಸೋ, ದುಃಖವೋ,
ಇಲ್ಲಾ ಪ್ರೀತಿಯೋ?!!

ಗುರುವಾರ, ಏಪ್ರಿಲ್ 5, 2018

ವ್ಯೋಮ

ಗುಂಡಗಿನ ಗೋಳದ ಪರಿಧಿಯಾಚೆಯಲಿ
ಕಾಲವೆಂಬುದು
ಕಾಲ ಕಸವಾಗಿದೆ.

ಬೆಳಕಿಲ್ಲದ ಬೇಲಿಯಾಚೆಯ
ಆಕಾಶ ಕಾಯಗಳು
ನಿಶೆಯ ಗೂಡಾಗಿವೆ.

ಕಾಯಗಳ ತಿರುಗುವಿಕೆಗೆ
ಕಾಲವಿರದ ಕರಗುವಿಕೆಗೆ
ಜಂಗಮದ ಹೆಸರಿಟ್ಟ ವಿಶ್ವದಂಗಳದಲ್ಲಿ-
ಚರ ಯಾವುದು? ಜಡ ಯಾವುದು?!!
ನೀ ನನ್ನ ಎದುರಿರಲು
ಹೃದಯದೊಳು ಮಳೆಗಾಲ,
ನಿನ್ನ ವಿರಹದೊಳೆಲ್ಲ
ಭಾವಕ್ಕೇ ಬರಗಾಲ.

ತತ್ವ

ಹೊತ್ತಿ ಉರಿದರೆ ಕ್ರಾಂತಿ
ಆರಿಹೋದರೆ ಶಾಂತಿ
ಹುಟ್ಟು ಸಾವಿನ ನಡುವೆ
ಇಲ್ಲ ವಿಶ್ರಾಂತಿ.

ಸಾವಿಲ್ಲದ ಮನೆಯಿಲ್ಲ
ನೋವಿಲ್ಲದ ಮನವಿಲ್ಲ,
ಜೀವಿಸುವ ಸಲುವಾಗಿ
ಎಲ್ಲ ಮರೆಯಬೇಕಲ್ಲ!!

ನಾಳೆ ನಿಶ್ಚಿತವಿಲ್ಲ
ನಿನ್ನೆ ಬದಲಾಗಿಲ್ಲ
ಇಂದು-
ನಾಳಿನ ಚಿಂತೆ
ನಿನ್ನೆಯ ನೋವು!

ಶುಕ್ರವಾರ, ಮಾರ್ಚ್ 30, 2018

ಊಟ - ವಸ್ತ್ರ (ಬಿಸಿಯೂಟ - ಸಮವಸ್ತ್ರ)


ಪುಟ್ಟ ಹಟ್ಟಿಯೊಳಗಿಂದ
ಇಣುಕುತ್ತಿದ್ದಾನೆ ಪುಟ್ಟ
ಲೋಕದ ಬೆಳಕಿಗೆ
ಮೈ ಒಡ್ಡಲಾಗದೇ.

ಹೊಟ್ಟೆಗೂ ಇಲ್ಲದ ಅನ್ನದ ವಾಸನೆಯನ್ನು
ಸವಿದು ಬರುತ್ತಾನೆ ಆಗಾಗ
ಹಟ್ಟಿಯಾಚೆಯ ಹೋಟೆಲಿನಲ್ಲಿ.

ತನ್ನಲ್ಲಿಲ್ಲದ ಅಂಗಿಯನ್ನು
ಕಂಡು ಬೆರೆಗಾಗುತ್ತಾನೆ ಆಗಾಗ
ಹಟ್ಟಿಯಾಚೆಯ ಹೊಲದ ಬೆಚ್ಚಿನಲ್ಲಿ(ಬೆದರುಗೊಂಬೆ).

ತಾನು ಗುನುಗುವ ಹಾಡುಗಳನ್ನು
ಬರೆಯಲೂಬಹುದೆಂಬ ಕಲ್ಪನೆಯಿಲ್ಲ,
ಬೆಪ್ಪಾಗಿ ನೋಡುತ್ತಾನೆ ಶಾಲೆಯ ಕಡೆಗೆ.
ಶಾಲೆಯೆದುರಿನ ಬೋರ್ಡಿನಲ್ಲಿರುವ
ಅನ್ನದ ಚಿತ್ರ, ಅಂಗಿಯ ಚಿತ್ರಗಳು
ಪುಟ್ಟನಲ್ಲೂ ಆಸೆ ಹುಟ್ಟಿಸುತ್ತವೆ!!

ಹೊಟ್ಟೆ ಹಸಿದು ಶಾಲೆಗೆ ಹೋದವನು
ಮತ್ತೂ ಹಸಿದು ಬರುತ್ತಾನೆ ಜ್ಞಾನಕ್ಕಾಗಿ.

ಗುರುವಾರ, ಮಾರ್ಚ್ 22, 2018

ಸೀರೆ

ಸೀರೆ ಸುತ್ತಿಕೊಂಡೇ
ಬಾಳು ಸವೆದವಳು ಅಮ್ಮ.

ಬಿಗಿಯಾದ ರವಿಕೆಯನು
ಎದೆಗೆ ಬಿಗಿದು,
ಬೇಸಿಗೆಯ ಬೆಂಕಿಗೆ
ಬೆವರಲಿ ತೊಯ್ದವಳು ನಿಡುಸುಯ್ಯಲಿಲ್ಲ.
ಅವಳಿಗೆ ಬೇರೆ ಉಡುಗೆಯೇ ಗೊತ್ತಿಲ್ಲ.

ಲೋಕದ ನಗೆಪಾಟಲಿಗೆ ಹೆದರಿ
ಅಮ್ಮನಿಗನ್ನಿಸಿದ್ದು " ಸೀರೆಯೇ ಸರಿ!"

ಯಾವ ಶಿಸ್ತಿಗೊಳಗಾಗಿ ನಮ್ಮ ಶಿಕ್ಷಕಿ
ಸೀರೆಯ ಶಿಕ್ಷೆಗೊಳಗಾದಳು?!
ಅರೆತೆರೆದ ಬೆನ್ನು, ಹೊರಗಿಣುಕುವ ಸೊಂಟ;
ಗಂಡಿನದೋ, ಗಂಡಸಿನದೋ ಕಣ್ಣು!
ಸಹಿಸಲಾಗದ ಮುಜುಗರದ ಸಂಕಟ!!

ಬದುಕಿನುದ್ದೇಶವ ನೋಡಿ-
ಶಿಕ್ಷಕಿಗನ್ನಿಸಿದ್ದು "ಸೀರೆಯಾದರೂ ನಡೆದೀತು ಬಿಡಿ"

ಇನ್ನು ಪುಟ್ಟ ಗೌರಿಗೆ (any actress)
ಏನಿತ್ತೋ ಜರೂರತ್ತು
ಸೀರೆಯುಟ್ಟು ವೇಷ ಕಟ್ಟುವುದು;
ಜೀವನೋಪಾಯಕ್ಕೇನೆಂದು ಸೀರೆಯುಟ್ಟವಳು ಅವಳು.

ಪುಟ್ಟ ಗೌರಿ ಹೇಳಿದ್ದು "ಸೀರೆ ನೋಡಿ ಮರುಳಾಗಬೇಡಿ; ಬೇರೆ ಬಟ್ಟೆಯುಟ್ಟು ಜೀವನವ ಉಸಿರಾಡಿ!"

ಶುಕ್ರವಾರ, ಮಾರ್ಚ್ 16, 2018

ಸೀತೆ

ಆದರೂ ಪ್ರೀತಿ ಬದಲಾಗಲಿಲ್ಲ!

ಹೊತ್ತೊಯ್ದ ರಾವಣ
ಭಾವನೆಗಳ ಮೇಲೆ ಹತ್ತಿ ಕುಣಿದರೂ,
ಸೀತೆ ಬದಲಾಗಲಿಲ್ಲ!

ಕತ್ತಲ ಕೂಪಕ್ಕೆ ನೂಕಿದರೂ,
ಬೆತ್ತಲಾಗಿಸಿ ಬಿಸಿಲಿಗೆ ನೂಕಿದರೂ,
ದೇಹವೂ, ಆತ್ಮವೂ ಕೊಳೆಯಾಗಲಿಲ್ಲ.

ಮುಗಿಯದ ಸಮಯವನ್ನು ಮುಗಿಸಲಾಗಿ
ಕಡಿಲಿನೆಡೆಗೆ ಸಾಯಲು ಹೆಜ್ಜೆಹಾಕುವಾಗ
ಕೇಳಿಸಿದೆ ದಡದ ದನಿ- " ನಾನೂ ತೆರೆಗಳಿಗಾಗಿ ಕಾಯುತ್ತಿಲ್ಲವೇ?!"

ಅಶೋಕ ವನದಲ್ಲಿ ಹೂವೇ ಅರುಳುತ್ತಿಲ್ಲವೆಂದರು
ಸೇವಕೀಯರು;
ರಾಮನ ಪ್ರೇಮ ರಾವಣನ ಬಂಧಿಯಾಗಿರುವಲ್ಲಿ
ಹೂವುಗಳಿಗೇನು ಕೆಲಸ?

ಊಟ ಬಿಟ್ಟರೆ ಅನ್ನಕ್ಕೆ ಅಪಮಾನ,
ಹಠ ಬಿಟ್ಟರೆ ತನ್ನತನಕ್ಕೆ ಅಪಮಾನ,
ಉಂಡು ತೇಗಿದ್ದು
ರಾವಣನಿಗೆ ಕೇಳಿಸಿತೆಂಬ ಭಯ.

ಇಷ್ಟವಿಲ್ಲದ ದೇಶದಲ್ಲಿ
ಇನ್ನೆಷ್ಟು ದಿನ ಈ ಕಷ್ಟ?
ಪ್ರೀತಿಗೆ ಗುರುತ್ವ ಶಕ್ತಿ ಇಲ್ಲವೇ?!!!

ರಾಮನ ಪ್ರೇಮದ ನಿಮಿತ್ತ
ರವಣನೊಡನೆ ನಿತ್ಯ ಸಮರ ಸಾರಿ ಗೆದ್ದವಳು ಸೀತೆ;
ರಾಮ ನಿಮಿತ್ತ ಮಾತ್ರ!!

ಮಾಲು! ಅಮಲು! (ಕಥೆ)

ಕಾಲೇಜಿನಲ್ಲಿ ಪಿಯೂಸಿ ಓದುತ್ತಿರುವಾಗ ನಡೆದ ಘಟನೆಯೊಂದು ಸುಮಾರು ವರುಷ ನನ್ನನ್ನು ಕಾಡಿದೆ. ಘಟನೆಗೊಂದು ಪೀಠಿಕೆ ಹಾಕಿ ವಿವರಿಸುತ್ತೇನೆ.

ಕವನ ಬರೆಯುವ ಲಹರಿ ಬಂತೆಂದರೆ ಕಾಲೇಜಿನ ಹಿಂದಿನ ತೋಟದಲ್ಲಿರುವ ಬಾವಿ ಕಟ್ಟೆಯ ಹಿಂದೆ ಹೋಗಿ, ಚಿಕ್ಕೂ ಮರದ ನೆರಳಿನಲ್ಲಿ ಕುಳಿತು ಬರೆದೇ ತಿರುತ್ತಿದ್ದೆ. ಏಕನಮಿಕ್ಸ್ ಕ್ಲಾಸ್ ಇರಲಿ, ಜಿಯಾಗ್ರಾಫಿ ಇರಲಿ, ಅಕಂಟೆನ್ಸಿಯೇ ಇರಲಿ, ಲಹರಿ ಬಂದಾಗ ಬರೆಯದೇ ಬೇರೆ ವಿಧಿಯಿಲ್ಲ ಎಂಬಂತೆ ಆಗುತ್ತಿದ್ದೆ.

ಆ ದಿನ ಹತ್ತು ಗಂಟೆಗೆ ಪ್ರಾರ್ಥನೆ ಮುಗಿಸಿ ಬುಕ್ ಹಿಡಿದು ಬಾವಿಯ ಕಡೆಗೆ ಹೊರಟೆ. ಆದರೆ, ಆಗಲೇ ಯಾರೋ ಅಲ್ಲಿ ಬಂದು ಕುಳಿತಿರುವುದಕ್ಕೆ ಸಾಕ್ಷಿಯಂತೆ ಒಂದು ಬ್ಯಾಗ್ ಕಾಣಿಸಿತು. ಬ್ಯಾಗಿನ ಮೇಲೆ ಒಂದು ತುಂಬಾ ಪುಟ್ಟಗಿನ ಸ್ಟೀಲ್ ಡಬ್ಬ. ಮುಂದೆ ಹೋದಂತೆ ಇಬ್ಬರು ಹುಡುಗರ ತಲೆಯೂ ಕಾಣಿಸಿತು- ಅದೇ ಓಪಶನಲ್ ಕ್ಲಾಸ್ ನ ಪ್ರಶ್ನೆಯ ಭಂಡಾರಗಳು! ತಿಂಡಿ ತಿನ್ನಲು ಬಂದು ಕುಳಿತಿರಬಹುದೆಂದು; ಪುಟ್ಟ ಡಬ್ಬಿಯಲ್ಲಿ ಚಟ್ನಿಯೋ, ಚಟ್ನಿ ಪುಡಿಯೋ ಇರಬಹುದೆಂದು ಊಹಿಸಿದೆ. ತಿಂದಾದ ಮೇಲೆ ಎದ್ದು ಹೂಗಬಹುದೆಂದು ತಿಳಿದು, ಪಕ್ಕದಲ್ಲಿದ್ದ ಮಾವಿನ ಮರದ ಬೋಡ್ಡೆಯ ಬುಡಕ್ಕೆ ಹೋಗಿ ಕುಳಿತು ಕವಿತೆ ಬರೆಯಲು ಪ್ರಾರಂಭಿಸಿದೆ.

ನಾನು ಕುಳಿತ ಮಾವಿನ ಮರ ಬಾವಿಗಿಂತಲೂ ಸ್ವಲ್ಪ ಹಿಂದೆ ಇದ್ದುದ್ದರಿಂದ ನಾನು ಬಂದು ಕುಳಿತದ್ದು ಅವರಿಗೆ ಗೊತ್ತಾಗಲಿಲ್ಲ. ನನಗವರ ಮಾತು ಸ್ಪಷ್ಟವಾಗಿ ಕೇಳಿಸುತ್ತಿತ್ತು. ಅವರ ಹೆಸರುಗಳನ್ನಿಲ್ಲಿ ಪ್ರಸ್ತಾಪಿಸುವುದು ಬೇಡ; ಒಬ್ಬನಿಗೆ ಹೆಗಡೆ ಎಂದೂ, ಇನ್ನೊಬ್ಬನಿಗೆ ಭಟ್ಟ ಎಂದೂ ಕರೆಯೊಣ. ಬರೆಯುವುದನ್ನು ಒಂದು ಹಂತಕ್ಕೆ ನಿಲ್ಲಿಸಿ, ಅವರ ಸಂಭಾಷಣೆಯ ಕಡೆಗೂ ಸ್ವಲ್ಪ ಕಿವಿಗೂಟ್ಟೆ. ಹೀಗೆ ಕದ್ದಾಲಿಸಿದ್ದೆ ತಪ್ಪಾಯಿತು!!! ನಡೆಯಬಾರದ್ದು ನಡೆಯುತ್ತಿರುವುದು ಅರಿವಿಗೆ ಬಂತು. ನನ್ನೂರಲ್ಲಿ, ಅದೂ ಹಳ್ಳಿಯ ಕಾಲೇಜಿನಲ್ಲಿ ಯಾರೂ ಉಹಿಸದೇ ಇರುವ೦ಥದ್ದು ನನಗೆ ಗೊಚರಿಸಿ, ಮನಸ್ಸೆಲ್ಲ ಹಾಳಾಯಿತು.

ಅವರ ಸಂಭಾಷಣೆ ಹೀಗಿತ್ತು-
ಹೆಗಡೆ-"ಏನೋ ದೋಸ್ತ, ಇದು ಕಿಕ್ಕೇ ಇಲ್ಲ?"
ಭಟ್ಟ-"ಬಾಯಲ್ಲಿಟ್ಟ ಕೂಡಲೇ ಉರಿ ಹತ್ತಲಿಕ್ಕೆ ಇದೇನು ಮೆಣಸಿನ ಕಾಯಿಯ?! ತಾಳ್ಮೆ ಇರಲಿ"
ಹೆಗಡೆ-" ಮಾಲು ಎಲ್ಲಿಯದು?"
ಭಟ್ಟ-"ಅದೇ, ಗೋವಾ ಪೂಜಾರಿ"
ಹೆಗಡೆ-"strong ಪುಡಿಯನ್ನು ಸೆರಿಸಿದ್ದಾನಾ ಕೇಳಿ ತಂದ್ಯಾ?"
ಭಟ್ಟ-"ಮೂರೂ ವರುಷದಿಂದ ಕೊಡ್ತಾ ಇರೋವ್ನಿಗೆ ಮತ್ತೆಂತ ಕೇಳಿ ತರದು?"
ಹೆಗಡೆ-" ಗೋವಾ ಪೂಜಾರಿಯಿಂದ ತಗಳವಾಗ್ಲೆ ಒಂದ್ಸಲ ಮೂಸಿ ನೋಡೇ ತರಬೆಕಿತ್ತು. ಈ ಸಲದ್ದು ಮಾಲು ಏನೇನೂ ಸರಿಯಿಲ್ಲ. special ಪುಡಿ ಹಾಕಿದ್ದೇ ಸುಳ್ಳು"
ಭಟ್ಟ-"ಏಯ್! ಸುಮ್ನಿರೊ. ಸಿಕ್ತಾ ಇರೋದೇ ಹೆಚ್ಚು, ಇವನ ತಲೆಹರಟೆ ಬೇರೆ! ಗೋವಾ ಪೂಜಾರಿ ಆಗಿದ್ದಕೆ ಎಲ್ಲಿಂದಾದ್ರು ತಂದು ಕೊಡ್ತಾ ಇರದು, ಅದೂ special ಪುಡಿ ಹಾಕಿ. ಮನುಷ್ಯನಿಗೆ ನಂಬಿಕೆ ಮುಖ್ಯ. ನೀನು ಮತ್ತೆ ಬಾಯಿ ತೆಗದ್ರೆ, ನಾನು ನಿನನ್ನ ಈ ಬಾವಿಗೆ ನೂಕದು ಗ್ಯಾರಂಟಿ!"

ಅಲ್ಲಿಗೆ ಹೆಗಡೆ ಸುಮ್ಮನಾದ. ಭಟ್ಟನೂ "ನಶಾ ಹೆ ಪ್ಯಾರ್ ಕ ನಶಾ ಹೆ" ಎಂದು ಹಾಡು ಗುನುಗುತ್ತ ಕುಳಿತ. ಸ್ವಲ್ಪ ಹೊತ್ತಿಗೆ ಪುಟಾಣಿ ಸ್ಟೀಲ್ ಡಬ್ಬಿಯ ಮುಚ್ಚಳ ಹಾಕಿದ ಸದ್ದೂ ಕೇಳಿಸಿತು. ಅವ್ರು ಎದ್ದು ಹೊರಟರೆ, ನಾನು ಮಾವಿನ ಮರದಡಿ ಕುಳಿತಿರುವುದು ಕಾಣಿಸಿದರೆ- ಎಂದು ಭಯವಾಗಿ, ಸದ್ದು ಮಾಡದೇ ವೇಗವಾಗಿ ನಡೆದು ಕಾಲೇಜ್ ಕಡೆಗೆ ಹೋಗಿ, ಲೈಬ್ರರಿ ಯಲ್ಲಿ ಕುಳಿತೆ. ನನ್ನ ಬಳಿ ಯಾವುದೇ ಸಾಕ್ಷಿ ಇಲ್ಲವೆಂದು ಯಾರಿಗೂ ದೂರು ಕೊಡಲು ಹೋಗಲಿಲ್ಲ. ಇಂಥ ವ್ಯಸನಿಗಳು ನನಗೆಲ್ಲಾದರು ತೊಂದರೆ ಮಾಡಿದರೆ ಎಂಬ ಭಯದಿಂದಲೂ ಸುಮ್ಮನಾದೆ.

ಸುಮಾರು ವರ್ಷಗಳ ನಂತರ, ಬೆಂಗಳೂರಿನಲ್ಲಿ ನಾನು ಕೆಲಸ ಮಾಡುತ್ತಿದ್ದ ಒಂದು ಟೆಕ್ ಪಾರ್ಕ್ ಬದಿಯಲ್ಲಿರುವ ಟೀ ಅಂಗಡಿಯಲ್ಲೊಂದು ದಿನ ಭಟ್ಟ ಸಿಕ್ಕಿದ. ಹಳೆಯದೆಲ್ಲ ನೆನಪದರೂ, ನನ್ನ ಉರಿನವ ಎಂದೂ, ನನ್ನ ಕ್ಲಾಸ್ ಮೇಟ್ ಎಂದೂ ಖುಷಿಯಿಂದ ಚೆನ್ನಾಗಿಯೇ ಮಾತನಾಡಿದೆ. ನಂತರ ದಿನಗಳಲ್ಲಿ ಟೀ ಅಂಗಡಿಗೆ ಬಂದಾಗ ಆಗಾಗ ಸಿಗುತ್ತಿದ್ದ. ಚೆನ್ನಾಗಿ ಗೆಳೆತನ ಆದಮೇಲೆ ಒಂದು ದಿನ ಕೇಳಿದೆ- "ಸಿಗರೇಟು ಸೆದಲ್ವಾ?"
ಅವನ ಉತ್ತರ-"ಇಲ್ಲ"
"ಕುಡಿತ?"
"ನೋ!"
"ಸುಳ್ಳು ಹೇಳುತಿಯಾ?"
"ಸಿಗರೇಟು ಸೇದದಿರುವುದಕ್ಕೆ ಟೀ ಅಂಗಡಿಯವನೆ ಸಾಕ್ಷಿ!"
"ಹಾಗಾದರೆ, ಗಾಂಜಾ, ಹೆರಾಯಿನ್ ಮಾತ್ರ?"
"ಯಾರು?!!!!"ಎಂದನು ಜೋರಾಗಿ ನಗಹತ್ತಿದ. "ಏನಂದುಕೊಂಡಿದ್ದಿಯ ನನ್ನ?" ಎಂದು ಗಂಭೀರನಾದ. ನಾನು ಅಂದು ನಡೆದ ಘಟನೆಯನ್ನು ನಾನು ಕಂಡಂತೆ,ಕೇಳಿಸಿಕೊಂದಂತೆ ವಿಸ್ತಾರವಾಗಿ ವಿವರಿಸಿದೆ.

ಅವನು " ಕಾಲೇಜಿನ ಪ್ರಿನ್ಸಿಪಾಲರಿಗೊ, ಪೊಲೀಸ್ ಗೋ ದೂರು ದಾಖಲಿಸದುದಕ್ಕೆ ತುಂಬಾ ಧನ್ಯವಾದಗಳು ಮಾರಾಯ್ತಿ!"

"ಅವತ್ತು ನೀನು ನಮ್ಮನ್ನು ಅಲ್ಲಿಯೇ ಮತನಾಡಿಸಿದ್ದರೆ ವಿಶೇಷ ರುಚಿಯ ಕಬ್ಬಿನ ಹಾಲು ಸಿಗುತ್ತಿತ್ತಲ್ಲ!! ಗೋವಾ ಪೂಜಾರಿ ಒಬ್ಬ ಕಾಳು ಮೆಣಸಿನ  ವ್ಯಾಪಾರಿ. ಆಸುಪಾಸಿನಲ್ಲಿ ಎಲ್ಲೇ ಆಲೆಮನೆ ಆದರೂ, ನಮಗೆ ಕಬ್ಬಿನ ಹಾಲನ್ನು ತರಿಸಿ ಕೊಡುತ್ತಿದ್ದ. ಅದಕ್ಕೆ ಶು೦ಠಿ ಮತ್ತು ಜಾಯಿ ಕಾಯಿ ಪುಡಿಯನ್ನು ಹದವಾಗಿ ಬೆರೆಸಿ ಕೊಡುತ್ತಿದ್ದ. ಜಾಯಿ ಕಾಯಿ ನಿದ್ದೆ ಬರಿಸಲೂ, ಶು೦ಠಿ ನಿದ್ದೆಯನ್ನು ತಡೆಯಲು ಸಹಕಾರಿ. ಅದನ್ನೇ ಒಂದು ರೀತಿಯ ಅಮಲೆಂಬ ಭ್ರಮೆಯಲ್ಲಿ ನಾವಿದ್ದೆವು. ಹೆಗಡೆ ಅವತ್ತು ಕಿಕ್ ಎಂದಿದ್ದು ಅದಕ್ಕೇ. ಮತ್ತು, ಅವನು ಹಾಲು ಎಂದಿದ್ದು ನಿನಗೆ ಮಾಲು ಎಂದು ಕೇಳಿಸಿರಬೆಕು."

" ಮತ್ತೆ ಆ ಪುಟಾಣಿ ಡಬ್ಬಿಯಲ್ಲಿ ಏನಿತ್ತು?"
"ಉಪ್ಪಿನಕಾಯಿ!!!!!"