ಶುಕ್ರವಾರ, ಮಾರ್ಚ್ 16, 2018

ಮಾಲು! ಅಮಲು! (ಕಥೆ)

ಕಾಲೇಜಿನಲ್ಲಿ ಪಿಯೂಸಿ ಓದುತ್ತಿರುವಾಗ ನಡೆದ ಘಟನೆಯೊಂದು ಸುಮಾರು ವರುಷ ನನ್ನನ್ನು ಕಾಡಿದೆ. ಘಟನೆಗೊಂದು ಪೀಠಿಕೆ ಹಾಕಿ ವಿವರಿಸುತ್ತೇನೆ.

ಕವನ ಬರೆಯುವ ಲಹರಿ ಬಂತೆಂದರೆ ಕಾಲೇಜಿನ ಹಿಂದಿನ ತೋಟದಲ್ಲಿರುವ ಬಾವಿ ಕಟ್ಟೆಯ ಹಿಂದೆ ಹೋಗಿ, ಚಿಕ್ಕೂ ಮರದ ನೆರಳಿನಲ್ಲಿ ಕುಳಿತು ಬರೆದೇ ತಿರುತ್ತಿದ್ದೆ. ಏಕನಮಿಕ್ಸ್ ಕ್ಲಾಸ್ ಇರಲಿ, ಜಿಯಾಗ್ರಾಫಿ ಇರಲಿ, ಅಕಂಟೆನ್ಸಿಯೇ ಇರಲಿ, ಲಹರಿ ಬಂದಾಗ ಬರೆಯದೇ ಬೇರೆ ವಿಧಿಯಿಲ್ಲ ಎಂಬಂತೆ ಆಗುತ್ತಿದ್ದೆ.

ಆ ದಿನ ಹತ್ತು ಗಂಟೆಗೆ ಪ್ರಾರ್ಥನೆ ಮುಗಿಸಿ ಬುಕ್ ಹಿಡಿದು ಬಾವಿಯ ಕಡೆಗೆ ಹೊರಟೆ. ಆದರೆ, ಆಗಲೇ ಯಾರೋ ಅಲ್ಲಿ ಬಂದು ಕುಳಿತಿರುವುದಕ್ಕೆ ಸಾಕ್ಷಿಯಂತೆ ಒಂದು ಬ್ಯಾಗ್ ಕಾಣಿಸಿತು. ಬ್ಯಾಗಿನ ಮೇಲೆ ಒಂದು ತುಂಬಾ ಪುಟ್ಟಗಿನ ಸ್ಟೀಲ್ ಡಬ್ಬ. ಮುಂದೆ ಹೋದಂತೆ ಇಬ್ಬರು ಹುಡುಗರ ತಲೆಯೂ ಕಾಣಿಸಿತು- ಅದೇ ಓಪಶನಲ್ ಕ್ಲಾಸ್ ನ ಪ್ರಶ್ನೆಯ ಭಂಡಾರಗಳು! ತಿಂಡಿ ತಿನ್ನಲು ಬಂದು ಕುಳಿತಿರಬಹುದೆಂದು; ಪುಟ್ಟ ಡಬ್ಬಿಯಲ್ಲಿ ಚಟ್ನಿಯೋ, ಚಟ್ನಿ ಪುಡಿಯೋ ಇರಬಹುದೆಂದು ಊಹಿಸಿದೆ. ತಿಂದಾದ ಮೇಲೆ ಎದ್ದು ಹೂಗಬಹುದೆಂದು ತಿಳಿದು, ಪಕ್ಕದಲ್ಲಿದ್ದ ಮಾವಿನ ಮರದ ಬೋಡ್ಡೆಯ ಬುಡಕ್ಕೆ ಹೋಗಿ ಕುಳಿತು ಕವಿತೆ ಬರೆಯಲು ಪ್ರಾರಂಭಿಸಿದೆ.

ನಾನು ಕುಳಿತ ಮಾವಿನ ಮರ ಬಾವಿಗಿಂತಲೂ ಸ್ವಲ್ಪ ಹಿಂದೆ ಇದ್ದುದ್ದರಿಂದ ನಾನು ಬಂದು ಕುಳಿತದ್ದು ಅವರಿಗೆ ಗೊತ್ತಾಗಲಿಲ್ಲ. ನನಗವರ ಮಾತು ಸ್ಪಷ್ಟವಾಗಿ ಕೇಳಿಸುತ್ತಿತ್ತು. ಅವರ ಹೆಸರುಗಳನ್ನಿಲ್ಲಿ ಪ್ರಸ್ತಾಪಿಸುವುದು ಬೇಡ; ಒಬ್ಬನಿಗೆ ಹೆಗಡೆ ಎಂದೂ, ಇನ್ನೊಬ್ಬನಿಗೆ ಭಟ್ಟ ಎಂದೂ ಕರೆಯೊಣ. ಬರೆಯುವುದನ್ನು ಒಂದು ಹಂತಕ್ಕೆ ನಿಲ್ಲಿಸಿ, ಅವರ ಸಂಭಾಷಣೆಯ ಕಡೆಗೂ ಸ್ವಲ್ಪ ಕಿವಿಗೂಟ್ಟೆ. ಹೀಗೆ ಕದ್ದಾಲಿಸಿದ್ದೆ ತಪ್ಪಾಯಿತು!!! ನಡೆಯಬಾರದ್ದು ನಡೆಯುತ್ತಿರುವುದು ಅರಿವಿಗೆ ಬಂತು. ನನ್ನೂರಲ್ಲಿ, ಅದೂ ಹಳ್ಳಿಯ ಕಾಲೇಜಿನಲ್ಲಿ ಯಾರೂ ಉಹಿಸದೇ ಇರುವ೦ಥದ್ದು ನನಗೆ ಗೊಚರಿಸಿ, ಮನಸ್ಸೆಲ್ಲ ಹಾಳಾಯಿತು.

ಅವರ ಸಂಭಾಷಣೆ ಹೀಗಿತ್ತು-
ಹೆಗಡೆ-"ಏನೋ ದೋಸ್ತ, ಇದು ಕಿಕ್ಕೇ ಇಲ್ಲ?"
ಭಟ್ಟ-"ಬಾಯಲ್ಲಿಟ್ಟ ಕೂಡಲೇ ಉರಿ ಹತ್ತಲಿಕ್ಕೆ ಇದೇನು ಮೆಣಸಿನ ಕಾಯಿಯ?! ತಾಳ್ಮೆ ಇರಲಿ"
ಹೆಗಡೆ-" ಮಾಲು ಎಲ್ಲಿಯದು?"
ಭಟ್ಟ-"ಅದೇ, ಗೋವಾ ಪೂಜಾರಿ"
ಹೆಗಡೆ-"strong ಪುಡಿಯನ್ನು ಸೆರಿಸಿದ್ದಾನಾ ಕೇಳಿ ತಂದ್ಯಾ?"
ಭಟ್ಟ-"ಮೂರೂ ವರುಷದಿಂದ ಕೊಡ್ತಾ ಇರೋವ್ನಿಗೆ ಮತ್ತೆಂತ ಕೇಳಿ ತರದು?"
ಹೆಗಡೆ-" ಗೋವಾ ಪೂಜಾರಿಯಿಂದ ತಗಳವಾಗ್ಲೆ ಒಂದ್ಸಲ ಮೂಸಿ ನೋಡೇ ತರಬೆಕಿತ್ತು. ಈ ಸಲದ್ದು ಮಾಲು ಏನೇನೂ ಸರಿಯಿಲ್ಲ. special ಪುಡಿ ಹಾಕಿದ್ದೇ ಸುಳ್ಳು"
ಭಟ್ಟ-"ಏಯ್! ಸುಮ್ನಿರೊ. ಸಿಕ್ತಾ ಇರೋದೇ ಹೆಚ್ಚು, ಇವನ ತಲೆಹರಟೆ ಬೇರೆ! ಗೋವಾ ಪೂಜಾರಿ ಆಗಿದ್ದಕೆ ಎಲ್ಲಿಂದಾದ್ರು ತಂದು ಕೊಡ್ತಾ ಇರದು, ಅದೂ special ಪುಡಿ ಹಾಕಿ. ಮನುಷ್ಯನಿಗೆ ನಂಬಿಕೆ ಮುಖ್ಯ. ನೀನು ಮತ್ತೆ ಬಾಯಿ ತೆಗದ್ರೆ, ನಾನು ನಿನನ್ನ ಈ ಬಾವಿಗೆ ನೂಕದು ಗ್ಯಾರಂಟಿ!"

ಅಲ್ಲಿಗೆ ಹೆಗಡೆ ಸುಮ್ಮನಾದ. ಭಟ್ಟನೂ "ನಶಾ ಹೆ ಪ್ಯಾರ್ ಕ ನಶಾ ಹೆ" ಎಂದು ಹಾಡು ಗುನುಗುತ್ತ ಕುಳಿತ. ಸ್ವಲ್ಪ ಹೊತ್ತಿಗೆ ಪುಟಾಣಿ ಸ್ಟೀಲ್ ಡಬ್ಬಿಯ ಮುಚ್ಚಳ ಹಾಕಿದ ಸದ್ದೂ ಕೇಳಿಸಿತು. ಅವ್ರು ಎದ್ದು ಹೊರಟರೆ, ನಾನು ಮಾವಿನ ಮರದಡಿ ಕುಳಿತಿರುವುದು ಕಾಣಿಸಿದರೆ- ಎಂದು ಭಯವಾಗಿ, ಸದ್ದು ಮಾಡದೇ ವೇಗವಾಗಿ ನಡೆದು ಕಾಲೇಜ್ ಕಡೆಗೆ ಹೋಗಿ, ಲೈಬ್ರರಿ ಯಲ್ಲಿ ಕುಳಿತೆ. ನನ್ನ ಬಳಿ ಯಾವುದೇ ಸಾಕ್ಷಿ ಇಲ್ಲವೆಂದು ಯಾರಿಗೂ ದೂರು ಕೊಡಲು ಹೋಗಲಿಲ್ಲ. ಇಂಥ ವ್ಯಸನಿಗಳು ನನಗೆಲ್ಲಾದರು ತೊಂದರೆ ಮಾಡಿದರೆ ಎಂಬ ಭಯದಿಂದಲೂ ಸುಮ್ಮನಾದೆ.

ಸುಮಾರು ವರ್ಷಗಳ ನಂತರ, ಬೆಂಗಳೂರಿನಲ್ಲಿ ನಾನು ಕೆಲಸ ಮಾಡುತ್ತಿದ್ದ ಒಂದು ಟೆಕ್ ಪಾರ್ಕ್ ಬದಿಯಲ್ಲಿರುವ ಟೀ ಅಂಗಡಿಯಲ್ಲೊಂದು ದಿನ ಭಟ್ಟ ಸಿಕ್ಕಿದ. ಹಳೆಯದೆಲ್ಲ ನೆನಪದರೂ, ನನ್ನ ಉರಿನವ ಎಂದೂ, ನನ್ನ ಕ್ಲಾಸ್ ಮೇಟ್ ಎಂದೂ ಖುಷಿಯಿಂದ ಚೆನ್ನಾಗಿಯೇ ಮಾತನಾಡಿದೆ. ನಂತರ ದಿನಗಳಲ್ಲಿ ಟೀ ಅಂಗಡಿಗೆ ಬಂದಾಗ ಆಗಾಗ ಸಿಗುತ್ತಿದ್ದ. ಚೆನ್ನಾಗಿ ಗೆಳೆತನ ಆದಮೇಲೆ ಒಂದು ದಿನ ಕೇಳಿದೆ- "ಸಿಗರೇಟು ಸೆದಲ್ವಾ?"
ಅವನ ಉತ್ತರ-"ಇಲ್ಲ"
"ಕುಡಿತ?"
"ನೋ!"
"ಸುಳ್ಳು ಹೇಳುತಿಯಾ?"
"ಸಿಗರೇಟು ಸೇದದಿರುವುದಕ್ಕೆ ಟೀ ಅಂಗಡಿಯವನೆ ಸಾಕ್ಷಿ!"
"ಹಾಗಾದರೆ, ಗಾಂಜಾ, ಹೆರಾಯಿನ್ ಮಾತ್ರ?"
"ಯಾರು?!!!!"ಎಂದನು ಜೋರಾಗಿ ನಗಹತ್ತಿದ. "ಏನಂದುಕೊಂಡಿದ್ದಿಯ ನನ್ನ?" ಎಂದು ಗಂಭೀರನಾದ. ನಾನು ಅಂದು ನಡೆದ ಘಟನೆಯನ್ನು ನಾನು ಕಂಡಂತೆ,ಕೇಳಿಸಿಕೊಂದಂತೆ ವಿಸ್ತಾರವಾಗಿ ವಿವರಿಸಿದೆ.

ಅವನು " ಕಾಲೇಜಿನ ಪ್ರಿನ್ಸಿಪಾಲರಿಗೊ, ಪೊಲೀಸ್ ಗೋ ದೂರು ದಾಖಲಿಸದುದಕ್ಕೆ ತುಂಬಾ ಧನ್ಯವಾದಗಳು ಮಾರಾಯ್ತಿ!"

"ಅವತ್ತು ನೀನು ನಮ್ಮನ್ನು ಅಲ್ಲಿಯೇ ಮತನಾಡಿಸಿದ್ದರೆ ವಿಶೇಷ ರುಚಿಯ ಕಬ್ಬಿನ ಹಾಲು ಸಿಗುತ್ತಿತ್ತಲ್ಲ!! ಗೋವಾ ಪೂಜಾರಿ ಒಬ್ಬ ಕಾಳು ಮೆಣಸಿನ  ವ್ಯಾಪಾರಿ. ಆಸುಪಾಸಿನಲ್ಲಿ ಎಲ್ಲೇ ಆಲೆಮನೆ ಆದರೂ, ನಮಗೆ ಕಬ್ಬಿನ ಹಾಲನ್ನು ತರಿಸಿ ಕೊಡುತ್ತಿದ್ದ. ಅದಕ್ಕೆ ಶು೦ಠಿ ಮತ್ತು ಜಾಯಿ ಕಾಯಿ ಪುಡಿಯನ್ನು ಹದವಾಗಿ ಬೆರೆಸಿ ಕೊಡುತ್ತಿದ್ದ. ಜಾಯಿ ಕಾಯಿ ನಿದ್ದೆ ಬರಿಸಲೂ, ಶು೦ಠಿ ನಿದ್ದೆಯನ್ನು ತಡೆಯಲು ಸಹಕಾರಿ. ಅದನ್ನೇ ಒಂದು ರೀತಿಯ ಅಮಲೆಂಬ ಭ್ರಮೆಯಲ್ಲಿ ನಾವಿದ್ದೆವು. ಹೆಗಡೆ ಅವತ್ತು ಕಿಕ್ ಎಂದಿದ್ದು ಅದಕ್ಕೇ. ಮತ್ತು, ಅವನು ಹಾಲು ಎಂದಿದ್ದು ನಿನಗೆ ಮಾಲು ಎಂದು ಕೇಳಿಸಿರಬೆಕು."

" ಮತ್ತೆ ಆ ಪುಟಾಣಿ ಡಬ್ಬಿಯಲ್ಲಿ ಏನಿತ್ತು?"
"ಉಪ್ಪಿನಕಾಯಿ!!!!!"

ಸೋಮವಾರ, ಮಾರ್ಚ್ 12, 2018

ಕಪ್ಪು ಹುಡುಗ (racism)

ಕಪ್ಪು ಹುಡುಗನಿಗೆ ಮುತ್ತು ಕೊಟ್ಟವಳು
ನಡುಗಿಹೋದಳು.
ಅವಳ ಭೂಮಿಯೇ ಕುಸಿದುಹೋಯಿತು.
ರಕ್ತ ಹೆಪ್ಪುಗಟ್ಟಿ ಮೈಯೆಲ್ಲ ಕಪ್ಪಗಾಯಿತು-
ಮೈಲಿಗೆ ಎಂದರೆ ಇದೇ ಇರಬೇಕು!
ವರ್ಣಭೇದ ಪದ್ದತಿಯ ಮೂರ್ತಿಯೇ ಅವನಾಗಿ ನಿಂತತೆನ್ನಿಸಿ,
ಪ್ರೀತಿಯ ಮುತ್ತೇ ತನಗೆ ಮುಳುವಾಗಿದ್ದು ಕಂಡು ರಕ್ತಕಾರಿದಳು.
ರಕ್ತಕಾರಿ ಕಾರಿ ಕರಗಿಹೋಗುತ್ತಿದ್ದ ಅವಳ ದೇಹಕ್ಕೆ
ರಕ್ತದಾನ ಮಾಡಿದವನು ಅವನೇ!
ಇಬ್ಬರ ರಕ್ತದ ಗುಂಪೂ ಒಂದೇ ಅಂತೆ.
ದೇಹ ಕಪ್ಪಾದರೂ ಒಳಗಿರುವ ರಕ್ತ ಕೆಂಪೇ!

ಶನಿವಾರ, ಮಾರ್ಚ್ 10, 2018

Inspired by Kateri music video-

ಹಣ್ಣನ್ನು ಸಿಹಿಯೆಂದವರೇ ಕಹಿ ಎಂದರು,
ಹೆಣ್ಣನ್ನು ದೇವಿಯೆಂದವರೇ ರಾಕ್ಷಸಿ ಎಂದರು.
ಬೆಳಕಿನ ವೇಷ ಹಾಕಿ,
ಬೆಳಕನ್ನೇ ಬಚ್ಚಿಟ್ಟರು.
 ಶ್ವೇತ ಕುಬ್ಜವಾದರು.

ಹಣ್ಣನ್ನು ತಿಂದವರೇ ತಿರುಗಿ ಕಕ್ಕಿಕೊಂಡರು,
 ಹೆಣ್ಣನ್ನು ಕೊಂದವರೇ ಪಾಪವ ದಕ್ಕಿಸಿಕೊಂಡರು.
ಬೆಳಕಿಗೆ ಕಣ್ಣರಳಿಸಿ
ಬೆಳಕಿನ ಕಣ್ಮುಚ್ಚಿಸಿ,
 ಕೆಂಪು ದೈತ್ಯವಾದರು.

ಹಣ್ಣನ್ನು ಬಿಸಾಕಿ,
ಹೆಣ್ಣನ್ನು ಹೊಸಕಿಹಾಕಿ,
ಕಾಲ ಕಳೆಯಹೊರಟವರು ದೇಶ-ಕಾಲದಲ್ಲಿ ಆಯಾಮವಿಲ್ಲದೆ ಹೀನವಾದರು.

ಗುರುವಾರ, ಫೆಬ್ರವರಿ 22, 2018

ಅರಿವಿಗೆ ಮೀರಿದ್ದು


ಸಾವಿಗೆ ಜಿನುಗಿದ ಕಣ್ಣೀರು
ಖಾಲಿತನದ ಬಿರುಗಾಳಿಯನ್ನೆಬ್ಬಿಸಿದೆ.
ಸಾವೆಂಬ ಪ್ರಶ್ನೆಗೆ ಉತ್ತರವಿಲ್ಲವೇ?!!

ಮುಚ್ಚಿದ ಕಣ್ಣು ಮಣ್ಣು ಕಾಣುವವರೆಗಷ್ಟೇ
ನನ್ನ ಜ್ಞಾನ.

ಕಣ್ಣು ಮುಚ್ಚಿ ತಪಸ್ಸಿಗೆ ಕುಳಿತರೆ
ಕಂಡದ್ದೆಲ್ಲ ನನ್ನ ಅರಿವಿನದೇ ಪರಿಷ್ಕೄತ ರೂಪ,
ಮಿಕ್ಕಿದ್ದೆಲ್ಲ ಕತ್ತಲೆಯ ಕೂಪ.
ಜ್ಞಾನೋದಯದಲ್ಲೂ ಸಾವಿನಾಚೆ ಕಂಡಿರಲಿಕ್ಕಿಲ್ಲ!!

ಸಾವಿನಾಚೆಯೇನೆಂದು ಗೊತ್ತಿದ್ದರೆ
ಜೀವನ ಪ್ರೀತಿ ಕಡಿಮೆಯಿರುತ್ತಿತ್ತೇನೋ?!

ಹೊತ್ತು


ಕೆಲಸದಿಂದ ಕಿತ್ತೊಗೆಯಿರಿ ನನ್ನನ್ನು!
ಪುಟ್ಟ ಮಗುವಿನೊಡನೆ ಹೊತ್ತು ಕಳೆಯಬೇಕಿದೆ.

ರಾತ್ರಿ ಮಗ್ಗುಲಲ್ಲಿ ಮಲಗಿದ ಮಗು
ದಾಯೀಮಾ ಬೇಕೆಂದು ರಚ್ಚೆಹಿಡಿದಾಗ,
ನಾನೇ ತಾಯಿಯಾಗಿದ್ದೂ
ತಾಯಿಯಾಗದ ಪರಿ ಪರಿತಪಿಸುವಂತಾಗಿದೆ.
ಕೆಲಸದಿಂದ ಕಿತ್ತೊಗೆಯಿರಿ ನನ್ನನ್ನು!

ಬೆಳಿಗ್ಗೆ ನಿದ್ದೆಯಲಿರುವ ಮಗುವಿಗೆ
ಮುತ್ತು ಕೊಟ್ಟು ಹೊರಟರೆ,
ರಾತ್ರಿ ಬಂದು ಮಲಗಿದ ಮಗುವಿನ ಮಗ್ಗುಲಲ್ಲಿ
ನಿದ್ದೆ ಬಾರದೇ ಕಣ್ಣು ಒದ್ದೆಯಾಗಿದೆ.
ಕೆಲಸದಿಂದ ಕಿತ್ತೊಗೆಯಿರಿ ನನ್ನನ್ನು!

ಯಾವ ಅನಿವಾರ್ಯತೆಗೆ ಗುರಿಯಾಗಿ
ದುಡಿಯುತ್ತಿದ್ದೇನೆ?!
ಇನ್ಯಾವಾಗ ಪುಟ್ಟ ಮಗುವಿನಲ್ಲಿ
ನನ್ನ ಬಾಲ್ಯವನ್ನು ಕಾಣುವುದು?!

ದುಡಿದ ದುಡ್ಡು ನಾಳೆಗೆ ಉಳಿದೀತು,
ಕಳೆದು ಹೋದ ಸಮಯ
ಕಳೆದು ಹೋದೀತು;
ದುಡ್ಡಿನಿಂದ ಸಮಯ ಕೊಳ್ಳಲಾಗದಿದ್ದರೂ,
ಸಮಯದಿಂದ ಸಂತೋಷವನ್ನು ಕಂಡೇನು!!

ಮಗುವಿನೊಡನೆ ಆಡುವ ಸಮಯ
ಸರಿದುಹೋದರೆ ಮತ್ತೆ ಬಾರದು!!
ಕೆಲಸದಿಂದ ಕಿತ್ತೊಗೆಯಿರಿ ನನ್ನನ್ನು!!


ಬುಧವಾರ, ಫೆಬ್ರವರಿ 21, 2018

ನೆನಪಾಗಿದೆ


ಗಾಳಿ ಸುಳಿದು ಸುಳಿದು
ಸವಕಲಾದ ಕಿರುದಾರಿಯಲಿ
ನೀನು ಸುಳಿದಾಡಿದ್ದು ಮತ್ತೆ ನೆನಪಾಗಿದೆ.

ಚಳಿಗೆ ಮುಖವೊಡ್ಡಿ
ಬಿರುಕಾದ ತುಟಿಯಿಂದ
ನೀನು ಗುನುಗುತಿದ್ದ ಹಾಡು ಮತ್ತೆ ನೆನಪಾಗಿದೆ.

ಗೆಜ್ಜೆಕಟ್ಟಿ ಕುಣಿಯುವಾಗ
ಬಯಲೆಲ್ಲ ಹೆಜ್ಜೆ ಗುರುತಿಗೆ
ಗುರಿಯಾಗಿದ್ದು ಮತ್ತೆ ನೆನಪಾಗಿದೆ.

ಹಿಗ್ಗಿ ಹಿಗ್ಗಿ ನಕ್ಕು
ನೀನು ನನ್ನ ಹಿಗ್ಗಿಸಿದ್ದು ಮತ್ತೆ ನೆನಪಾಗಿದೆ.

ಅತ್ತೂ ಕರೆದು
ನೀನು ನನ್ನ ಪ್ರೀತಿಸಿದ್ದು ಮತ್ತೆ ನೆನಪಾಗಿದೆ.

ಕಾಲದ ಸುಳಿಯಲ್ಲಿ ಸಿಕ್ಕಿ
ಈಗ ಎಲ್ಲವೂ ನೆನಪಾಗಿದೆ(ನೆನಪು ಮಾತ್ರ)!!!!

ಬುಧವಾರ, ಅಕ್ಟೋಬರ್ 14, 2015

ಬ್ಯಾಗ್ ಬದಲಾದಾಗ(ಕಥೆ )

ಬಹುಶಹ ಅದೊಂದು ಘಟನೆ ನಡೆಯದೆ ಇದ್ದಿದ್ದರೆ, ಕಾಲೇಜು ಮುಗಿಯುವವರೆಗೂ ನನ್ನ ಮತ್ತು ಅಕ್ಕನ ಬೇಸಿಗೆ ರಜಗಳು ಮುಂಬಯಿ ಮತ್ತು ಬೆಂಗಳೂರುಗಳಲ್ಲೇ ಕಳೆಯುತ್ತಿದ್ದವೇನೊ!!!!!

ಒಮ್ಮೆ ಹೀಗಾಯಿತು...(ಒಮ್ಮೆ ಆಗಿದ್ದೇ ಸಾಕಾಗುವಷ್ಟಾಯಿತು)!!!!!!

ಮುಂಬಯಿಯ ಚಿಕ್ಕಪ್ಪನ ಮನೆಯಲ್ಲಿ 20 ದಿನಗಳ ರಜ ಕಳೆದು, ಬೆಂಗಳೂರಿನ ಮಾವನ ಮನೆಗೆಂದು ರೈಲಿನಲ್ಲಿ ಹೊರಟೆವು. ನಾನಾಗ ಪಿ ಯು ಸಿ ಮೊದಲ ವಷ೯ ಮುಗಿಸಿದ್ದು, ಅಕ್ಕ ಪದವಿಯ ಮೊದಲ ವಷ೯ ಮುಗಿಸಿದ್ದಳು. ನಮಗಿಬ್ಬರಿಗೂ ಸಾಕಷ್ಟು ವಷ೯ ಪ್ರಯಾಣದ ಅನುಭವವಿದ್ದ ಕಾರಣ ಹಿರಿಯರಾರೂ ನಮ್ಮ ಜೊತೆ ಪ್ರಯಾಣಿಸುವ ಅಗತ್ಯವಿರಲಿಲ್ಲ.

ರಾತ್ರಿ ಬಹಳ ಹೊತ್ತು ನಮಗಿಬ್ಬರಿಗೂ ನಿದ್ದೆ ಹತ್ತಲಿಲ್ಲ.ಕಾರಣವಿಷ್ಟೇ, ಒಬ್ಬ ಮಧ್ಯ ವಯಸ್ಸಿನ ವ್ಯಕ್ತಿಯ ಗೊರಕೆ! ಅಕ್ಕ ನನಗೆ ಅಲ್ಲೇ ಇರಲು ಹೇಳಿ, ತಾನೆಲ್ಲಾದರೂ ಬೇರೆ ಭೋಗಿಯಲ್ಲಿ ಜಾಗವಿದೆಯೇ ಎಂದು ನೋಡಿಬರುತ್ತೇನೆಂದಳು. ಪಕ್ಕದ ಭೋಗಿಯಲ್ಲೆ ನಾಲ್ಕೈದು ಬತ೯ಗಳು ಖಾಲಿ ಇದ್ದವು. ನಾವು ನಮ್ಮ ಏರ್ ಬ್ಯಾಗ್ ನ್ನೆತ್ತಿಕೊಂಡು ಅಲ್ಲಿಗೆ ಹೋಗಿ, ಬ್ಯಾಗನ್ನು ಬತ೯ನ ಕೆಳಗೆ ನೂಕಿ, ಹಾಯಾಗಿ ನಿದ್ದೆಹೋಗಬಹುದೆಂದುಕೊಂಡೆವು. ಮುಂದಿನ ಸ್ಟೇಶನಿನಲ್ಲಿ ಯಾರಾದರೂ ಈ ಬತ೯ಗಾಗಿ ಬಂದರೆ ಎದ್ದುಹೋದರಾಯಿತೆಂದುಕೊಂಡು, ನೆಮ್ಮದಿಯಾಗಿ ನಿದ್ದೆಹೋದೆವು.

ಬೆಳಿಗ್ಗೆ 10 ಘಂಟೆಗೆ ಬೆಂಗಳೂರು ತಲುಪುವುದಾದ್ದರಿಂದ, 9 ಘಂಟೆಗೆದ್ದ ನಾನು ಮುಖ ತೊಳೆದು ಬಂದವಳು, ಟವೆಲ್ ಸಲುವಾಗಿ ಕೆಳಗಿದ್ದ ಬ್ಯಾಗನ್ನು ಎಳೆದಾಗ - ಬ್ಯಾಗ್ ಯಾಕೋ ಬಣ್ಣ ಕಳೆದುಕೊಂಡಂತೆ/ಮಾಸಲಾದಂತೆ ಕಂಡಿತು. ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ತಡವಾಗಿ ಎದ್ದಿದ್ದರಿಂದ ತಲೆಯೆಲ್ಲ ಗುಂಯ್ ಗುಡುತ್ತಿದ್ದುದರಿಂದ ಹೀಗಾಗುತ್ತಿದೆ ಎಂದೆಣಿಸಿದೆ. ಬ್ಯಾಗಿನ ಪಕ್ಕದ ಖಾನೆಗಳಲ್ಲಿ ಟವೆಲ್ ಸಿಗಲಿಲ್ಲ. ಅಕ್ಕನಿಗೆ ಚೆನ್ನಾಗಿ ಬೈದುಕೊಂಡು, ಒಳಗೆಲ್ಲೋ ಸೇರಿಸಿ ಬಿಟ್ಟಿದ್ದಾಳೆ ಇನ್ನೆಷ್ಟು ಹುಡುಕಾಡಬೇಕೋ ಎಂದುಕೊಂಡು,ಮುಖ್ಯ ಖಾನೆಯನ್ನು ತೆರೆದರೆ ಒಳಗೇನಿದೆ.......ಬರೇ ಊದಿನಕಡ್ಡಿಯ ಪೊಟ್ಟಣಗಳು!!!!!! ನನಗೆ ಗೊತ್ತಾಗಿಹೋಯ್ತು- ನಿಜವಗಿಯೂ ಬ್ಯಾಗ್ ಬದಲಾಗಿಹೋಗಿದೆ ಎಂದು; ಯಾರೋ ನಮ್ಮ ಬ್ಯಾಗನ್ನೆತ್ತಿಕೊಂಡು ಹೋಗಿದ್ದಾರೆ ಎಂದು. ಅಕ್ಕನನ್ನೆಬ್ಬಿಸಿ ಹೇಳಿದಾಗ, ಅವಳೂ ಹೌಹಾರಿದಳು!

ನಮ್ಮ ಕಂಪಾಟ೯ಮೆಂಟ್ ನಲ್ಲಿ ಯಾರೂ ಇಲ್ಲದ್ದರಿಂದ, ನಮ್ಮ ಗಲಾಟೆಯನ್ನು ವೀಕ್ಷಿಸುವರಾರೂ ಇರಲಿಲ್ಲ ಮತ್ತು ಈ ಬ್ಯಾಗ್ ಅಲ್ಲೇ ಇರುವ ಯಾರದ್ದೋ ಆಗಿರುವ ಸಾಧ್ಯತೆ ಬಹಳ ಕಡಿಮೆಯಿತ್ತು. ನಾವಿಬ್ಬರೂ ಬಹಳ ಹೊತ್ತು ಏನು ಮಾಡಬೇಕೆಂದು ತೋಚದೆ ಸುಮ್ಮನೆ ಕುಳಿತೆವು. ಆಮೇಲೆ ನಾನೊಂದು ಊದಿನಕಡ್ಡಿಯ ಪೊಟ್ಟಣವನ್ನೆತ್ತಿಕೊಂಡೆ, ಪರಿಮಳ ಸವಿಯೋಣವೆಂದು! ಪೊಟ್ಟಣ ತೆರೆದಾಗ ಕಂಡದ್ದೇನು....ಊದಿನಕಡ್ಡಿಯ ಬದಲು, ಸಾವಿರ ರೂಪಾಯಿಗಳ ಒಂದು ಕಟ್ಟು!!!!!!ಹೌಹಾರಿದೆವು. ಎಣಿಸಿದರೆ, ಸಾವಿರ ರೂಪಾಯಿಗಳ 100 ನೋಟುಗಳು. ಇನ್ನೂ ಕೆಲವು ಪೊಟ್ಟಣಗಳನ್ನು ತೆರೆದು ನೋಡಿದರೆ, ಎಲ್ಲದರಲ್ಲೂ ಹಣವಿದೆ!! ಎಣಿಸಿದಾಗ ಕಾಣಿಸಿದ್ದು ಒಟ್ಟೂ 25 ಪೊಟ್ಟಣಗಳು- ಅಂದರೆ, 25 ಲಕ್ಷ ರೂಪಾಯಿಗಳು!!!!!!!!!

ಮತ್ತೆ ಸುಮ್ಮನೆ ಕುಳಿತೆವು, ಯೋಚಿಸಿದೆವು. ತುಂಬಾ ಕೆಳ ಧ್ವನಿಯಲ್ಲಿ ಚಚಿ೯ಸಿದೆವು. ಈ ರೀತಿ ಹಣವನ್ನು ಸಾಗಿಸುತ್ತಿದ್ದಾರೆಂದರೆ, ಯಾವುದೋ ಭೂಗತ ಲೋಕೆಕ್ಕೆ ಸಂಬಂಧಿಸಿದ್ದೆಂದು ಕಾಣಿಸುತ್ತದೆ; ಭೂಗತ ಲೋಕದಲ್ಲಿ ಹೀಗೆ - ವಸ್ತು, ಹಣ ಮತ್ತು ವಿಷಯಗಳು ಒಬ್ಬನಿಂದೊಬ್ಬನಿಗೆ ಹಸ್ತಾಂತರವಾಗುವುದಾಗಿಯೂ್- ವಸ್ತು ಎಲ್ಲಿಂದ ಬಂತು, ಎಲ್ಲಿಗೆ ಹೋಗುತ್ತಿದೆ, ಅದೆಂತಹ ವಸ್ತು ಎಂದು ಕೂಡ ಹಸ್ತಾಂತರ ಮಾಡುವ ಯಾರಿಗೂ ಗೊತ್ತಿರುವುದಿಲ್ಲವೆಂದು ಕಾದಂಬರಿಗಳಲ್ಲಿ, ಸಿನಿಮಾಗಳಲ್ಲಿ ನೋಡಿದ್ದೆವು. ಇದೂ ಹೀಗೆಯೇ ಏನೋ!! ಈ ವಿಷಯವನ್ನು ಪೋಲೀಸರಿಗೆ ತಿಳಿಸಲೂ ಭಯವಾಯಿತು. ಇನ್ನೇನು ಮಾಡುವುದು???  ನಾವು ಮೊದಲು ನಮ್ಮ ಕಳೆದುಹೋದ ಬ್ಯಾಗಿನಲ್ಲಿ  ಏನೇನಿತ್ತೆನ್ನುವುದನ್ನು ನೆನಪಿಸಿಕೊಂಡೆವು. ನಮ್ಮ ಬಟ್ಟೆಗಳು ಮತ್ತು ಚಿಕ್ಕಮ್ಮ ಡಬ್ಬಗಳಲ್ಲಿ ಕೊಟ್ಟ ತಿಂಡಿಗಳು ಮಾತ್ರ ಅದರಲ್ಲಿದ್ದವು; ಮತ್ತೆಲ್ಲ ವಸ್ತುಗಳು ನಮ್ಮ ವ್ಯಾನಿಟಿ ಬ್ಯಾಗಿನಲ್ಲಿದ್ದವು. ಬ್ಯಾಗಿನಲ್ಲಿ ನಮ್ಮನ್ನು ಗುರುತಿಸಬಹುದಾದ ಅಥವಾ ನಮ್ಮ ಬಗ್ಗೆ ಸ್ವಲ್ಪವಾದರೂ ಸುಳಿವು ಕೊಡಬಹುದಾದ ಯಾವ ವಸ್ತುಗಳೂ ಇಲ್ಲ ಎಂದು ಖಾತ್ರಿಮಾಡಿಕೊಂಡು
ಒಂದು ದಾರಿ ಹುಡುಕಿಕೊಂಡೆವು.

ಇನ್ನೇನು ನಾವಿಳಿಯುವ ಸ್ಟೇಷನ್ ಬರುವುದರಲ್ಲಿತ್ತು. ನಾವಿಬ್ಬರೂ ಬೇಗ ಮುಖ ತೊಳೆದು ಬಂದು, ವ್ಯಾನಿಟಿ ಬ್ಯಾಗಿನಲ್ಲಿದ್ದ ಕಚಿ೯ಫಿನಲ್ಲೇ ಮುಖ ಒರೆಸಿ, ಕೂದಲನ್ನೂ ಬಾಚಿಕೊಂಡೆವು. ಅಕ್ಕ ರೂ. 5,೦೦೦ ವನ್ನು ಕಂತೆಯಿಂದ ತೆಗೆದು ವ್ಯಾನಿಟಿ ಬ್ಯಾಗಿನಲ್ಲಿಟ್ಟಳು.

ಕಛೇರಿಯ ಸಮಯವಾದ್ದರಿಂದ ಮಾವನಿಗೆ ನಮ್ಮನ್ನು ಕರೆದುಕೊಂಡು ಹೋಗಲು ಬರಲಾಗಲಿಲ್ಲ. ಒಳ್ಳೆಯದೇ ಆಯಿತು. ಮೊದಲು ಆಟೊ ಹಿಡಿದು ಮಲ್ಲೇಶ್ವರಂ ಮಾಕೆ೯ಟ್ ಬಳಿ ಇಳಿದೆವು. ಅಲ್ಲಿಂದ ಸೀದಾ ಬಟ್ಟೆ ಅಂಗಡಿಗೆ ಹೋಗಿ ನಾಲ್ಕು ಜೊತೆ ಅವಶ್ಯಕ ಬಟ್ಟೆಗಳನ್ನು ಕೊಂಡೆವು. ಸಾವಿರದ ನೋಟಾದ್ದರಿಂದ, ಅಂಗಡಿಯಲ್ಲಿ ನೋಟನ್ನೊಮ್ಮೆ ಅತ್ತ ಇತ್ತ ತಿರುಗಿಸಿ ನೋಡಿದರು; ನಂತರ ತೆಗೆದುಕೊಂಡರು.
ಅವು ನಕಲಿ ನೋಟುಗಳಂತೂ ಆಗಿರಲಿಲ್ಲ! ಅಲ್ಲಿಂದ ಮುಂದೆ, ಬ್ಯಾಗ್ ಅಂಗಡಿಗೆ ಹೋಗಿ - ಈ ಬ್ಯಾಗ್ ಮತ್ತು ತೆಗೆದುಕೊಂಡ ಬಟ್ಟೆಗಳನ್ನು ಹಿಡಿಸಬಲ್ಲ ದೊಡ್ಡದೊಂದು ಬ್ಯಾಗ್ ಖರೀದಿಸಿದೆವು. ಎಲ್ಲವನ್ನೂ ಹೊಸ ಬ್ಯಾಗಿಗೆ ತುಂಬಿ, ಆಟೊ ಹಿಡಿದು, ಮಲ್ಲೇಶ್ವರಂನ ಇನ್ನೊಂದು ತುದಿಯಲ್ಲಿದ್ದ ಮಾವನ ಮನೆಗೆ ಹೊರಟೆವು.

ಮಾವನ ಮನೆ ತಲುಪಿದರೂ ನಮ್ಮ ಭಯ ಕಡಿಮೆಯಾಗಲಿಲ್ಲ. ಆ ಬ್ಯಾಗಿನ ವಾರಸುದಾರ ನಮ್ಮನ್ನು ಹುಡುಕಿಕೊಂಡು ಬಂದು ನಮಗೇನಾದರೂ ಅಪಾಯ ಮಾಡಿದರೆ!!! ಆ ಹಣವಂತು ನಮ್ಮದಲ್ಲ. ನಮಗೆ ನಮ್ಮದಲ್ಲದ ಹಣದ ತಲೆನೋವು ಬೇಕಾಗಿರಲಿಲ್ಲ. ಆದರೇನು ಮಾಡುವುದು??!! ಈಗ ತಂದಾಗಿದೆ. ರೈಲಿನಲ್ಲೇ ಬಿಟ್ಟು ಬಂದುಬಿಡಬೇಕಿತ್ತು- ಎಂದು ಇಬ್ಬರೂ ಪರಿತಪಿಸಿದೆವು. ಅತ್ತೆ-ಮಾವನಿಗೆ ಈ ವಿಷಯವನ್ನು ಹೇಳಲು ಧೈಯ೯ವಾಗಲಿಲ್ಲ.

ಎರಡು ರಾತ್ರಿ ನಮಗಿಬ್ಬರಿಗೂ ಸರಿಯಾಗಿ ನಿದ್ದೆ ಹತ್ತಲಿಲ್ಲ. ಮೂರನೆಯ ದಿನ ಏನೋ ತರುವ ನೆಪವೊಡ್ಡಿ, ಇಲ್ಲೇ ಅಂಗಡಿಗೆ ಹೋಗುತ್ತೇವೆಂದು ಅತ್ತೆಗೆ ಹೇಳಿ, ಮನೆಗೆ ದೂರವಾಣಿ ಕರೆ ಮಾಡಲು ಹೊರಬಿದ್ದೆವು. ಕರೆ ತೆಗೆದುಕೊಂಡ ಅಪ್ಪನಿಗೆ ವಿಷಯ ತಿಳಿಸಿದೆವು.  ವಿಷಯ ತಿಳಿದ ಅಪ್ಪ ಸುಸ್ತಾಗಿಹೋದ! ನಾಳೆ ಮತ್ತೆ ಕರೆ ಮಾಡಲು ಹೇಳಿದ; ಅಷ್ಟೊತ್ತಿಗೆ ಅಮ್ಮನ ಜೊತೆ ಚಚಿ೯ಸಿ ಒಂದು ನಿಧಾ೯ರಕ್ಕೆ ಬರುವೆನೆಂದ. ನಮಗೆ ಸ್ವಲ್ಪ ನಿರಾಳವಾಯಿತು. ರಾತ್ರಿ ಸ್ವಲ್ಪ ನಿದ್ದೆ ಬಂತು. ಮಾರನೆಯ ದಿನ ನಾವು ಕರೆ ಮಡಿದಾಗ, ಏನಾದರೂ ನೆಪ ಹೇಳಿ ಇನ್ನು ನಾಲ್ಕು ದಿನಗಳಲ್ಲಿ ಮನೆಗೆ ಹೊರಟುಬಿಡುವಂತೆ ನಮಗೆ ಹೇಳಲಾಯಿತು.

ಆವತ್ತು ಮೇ ೫. ನಾನಾಗ ದ್ವಿತೀಯ ಪಿಯುಸಿಗೆ ಕಾಲಿಡುತ್ತಿದ್ದುದರಿಂದ, ನಮಗೆ ಮೇ ೧೫ ರಿಂದಲೇ ತರಗತಿಗಳು ಪ್ರಾರಂಭವಗುವವೆಂದು ಮಾವನಿಗೆ ಹೇಳಿ, ಮೇ ೧೦ ಕ್ಕೆ ಊರಿಗೆ ಹೊರಡಲು ಬಸ್ ಟಿಕೆಟ್ ಖಾತ್ರಿಮಾಡಿಕೊಂಡೆವು.

ಮೇ ೧೦ರ ರಾತ್ರಿ ಬಸ್ ಹತ್ತಿ ಹಣದ ಗಂಟು ತುಂಬಿದ ಬ್ಯಾಗನ್ನು ನಮ್ಮ ಸೀಟಿನ ಕೆಳಗೇ ಇಟ್ಟುಕೊಂಡೆವು. ರಾತ್ರಿ ನಾವಿಬ್ಬರೂ ಕಣ್ಣು ಮುಚ್ಚಲಿಲ್ಲ- ಭಯಕ್ಕೋ, ಸಂಕಟಕ್ಕೋ, ಅಪರಾಧಿ ಭಾವನೆಗೋ!!!!!!

ಮನೆ ತಲುಪಿದ ಮೇಲೆ ಸಾಕಷ್ಟು ನಿರಾಳವೆನಿಸಿತು. ನಮ್ಮ ಜವಾಬ್ದಾರಿ ಅಲ್ಲಿಗೆ ಮುಗಿಯಿತು. ಅಪ್ಪ ಆಗಲೇ ಯೋಚಿಸಿದ್ದ- ಈ ಹಣವನ್ನು ಟ್ರಂಕಿನಲ್ಲಿ ಭದ್ರವಾಗಿ ಇಡುವುದೆಂದು; ಕೆಲಸಮಯ ಇದರ ವಾರಸುದಾರರಿಗಾಗಿ ಕಾಯೋಣವೆಂದು.......................................................................................................................................................................................................................................

3 ವಷ೯ ಕಳೆಯಿತು. ಹಣ ಹಾಗೇ ಉಳಿಯಿತು. ವಾರಸುದಾರ ಬರಲಿಲ್ಲ. ಆ ವಷ೯ ಅಕ್ಕನ ಮದುವೆಯಾಯಿತು. ಮದುವೆಯಲ್ಲಿ ರೂ. 5೦,೦೦೦ ಕಡಿಮೆಬಿದ್ದಾಗ, ಟ್ರಂಕಿನಿಂದ ರೂ. 5೦,೦೦೦ ವನ್ನು ತೆಗೆಯಲಾಯಿತು. ಮಾರನೆ ವಷ೯ ಅಷ್ಟೇ ಹಣವನ್ನು ತಿರುಗಿ ಟಂಕಿನಲ್ಲಿಟ್ಟರು.

ನಮಗೆಲ್ಲಾ ಗೊತ್ತಾಗಿ ಹೋಗಿತ್ತು; ಇನ್ನು ಯಾರೂ ಈ ಹಣ ಹುಡುಕಿಕೊಂಡು ಬರಲಾರರು, ಅದೂ 4 ವಷ೯ಗಳಾದ ಮೇಲೆ! ಆದರೂ ಯಾರದೋ ಹಣವನ್ನು ಖಾಚು೯ಮಾಡಲು ಅಪ್ಪನಿಗೆ ಮನಸ್ಸಿರಲಿಲ್ಲ. ನಮಗೆ ಆ ಹಣ ಉಪಯೋಗಿಸಿದಾಗ ಜನರ ಕಣ್ಣಿಗೆ ಬೀಳುವ ಭಯವೂ ಇತ್ತು.

ಅಕ್ಕನ ಮದುವೆಯಾದ ಮಾರನೆ ವಷ೯ ಅಕ್ಕ-ಭಾವ ಬೆಂಗಳೂರಿನ ಮಾವನ ಮನೆಗೆ ಒಂದು ವಾರದ ಮಟ್ಟಿಗೆ ಹೋಗುವಾಗ-ಅವರ ಕೈಲಿ ರೂ.1೦ ಲಕ್ಷ ಕೊಟ್ಟು ಅಪ್ಪ ಹೇಳಿದ- ’ ಈ ನೋಟಿನ ರೂಪದ ಹಣ ಒಂದು ದಿನ ಹಾಳಾಗಿ ಹೋಗುತ್ತದೆ. ಅದಕ್ಕೆ ಬದಲಾಗಿ ಚಿನ್ನವನ್ನು ಖರೀದಿಸಿ ತನ್ನಿ. ಇಡುವುದು ಸುಲಭವಾಗುತ್ತದೆ’. ಬೆಂಗಳೂರಿನ  ಹತ್ತು ಬೇರೆಬೇರೆ ಆಭರಣ ಮಳಿಗೆಗಳಿಂದ, ರೂ.1೦ ಲಕ್ಷಗಳ ಚಿನ್ನ ಖರೀದಿಯಾಯಿತು; ಟ್ರಂಕನ್ನು ಸೇರಿತು! ಇನ್ನುಳಿದದ್ದು ರೂ. 14,95,೦೦೦.

ಸ್ನಾತಕೋತ್ತರ ಪದವಿಗಾಗಿ ನಾನು ಧಾರವಾಡ ಸೇರಿದ ಮೇಲೆ ರೂ. 5 ಲಕ್ಷಗಳನ್ನು ಚಿನ್ನವಾಗಿ ಪರಿವತಿ೯ಸಲಾಯಿತು; ಟ್ರಂಕಿಗೆ ಸೇರಿಸಲಾಯಿತು. ನಾವ್ಯಾರೂ ಆ ಹಣದಲ್ಲಿ ಒಂದು ಪೈಸೆಯನ್ನೂ ನಮ್ಮ ಸ್ವಂತಕ್ಕಾಗಿ ಉಪಯೋಗಿಸಿಕೊಳ್ಳಲಿಲ್ಲ. ಅಪ್ಪನಿಗೆ ತಾನು ದುಡಿದ ಹಣವನ್ನು ಬಿಟ್ಟು ಬೇರೆಯದನ್ನು ಉಪಯೋಗಿಸಲು ಮನಸ್ಸಿರಲಿಲ್ಲ. ನಮಗೂ ಸಾಕಷ್ಟು ತಿಳಿಹೇಳಿದ್ದ- ಆತ್ಮವಂಚನೆ ಒಳ್ಳೆಯದಲ್ಲವೆಂದು.

ನಾನು ಬೆಂಗಳೂರಿಗೆ ಉದ್ಯೋಗ ಅರಸಿ ಬಂದಮೇಲೆ ಉಳಿದ ರೂ. 1೦ ಲಕ್ಷಗಳನ್ನು ಬೆಂಗಳೂರಿನಲ್ಲೂ, ರೂ. 95.೦೦೦ ಗಳನ್ನು ಊರಿನಲ್ಲೂ ಚಿನ್ನವಾಗಿ ಪರಿವತಿ೯ಸಿ ಟ್ರಂಕಿಗೆ ಸೇರಿಸಲಾಯಿತು.
ಟ್ರಂಕ್ ನಿಧಾನವಾಗಿ ತುಕ್ಕು ಹಿಡಿಯಲು ಪ್ರಾರಂಭಿಸಿತ್ತು.ಹೀಗಾಗಿ ರೂ.೨೫ ಲಕ್ಷ ಮುಖಬೆಲೆಯ ಚಿನ್ನವನ್ನು ಒಂದು ಪ್ಲಾಸ್ಟಿಕ್ ಡಬ್ಬಿಗೆ ವಗಾ೯ಯಿಸಲಾಯಿತು. ವಗಾ೯ಯಿಸುವಾಗ ನಾನೂ ಅಲ್ಲೇ ಇದ್ದೆ-ಎಷ್ಟೊಂದು ಹಾರಗಳು, ಬಳೆಗಳು, ಉಂಗುರಗಳು, ಕಿವಿಯೋಲೆಗಳು!!!!!!!

ಮೊದಲಬಾರಿಗೆ ಬೆಂಗಳೂರಿನಲ್ಲಿ ಅಕ್ಕ-ಭಾವ ರೂ.1೦ ಲಕ್ಷಗಳನ್ನು ಪರಿವತಿ೯ಸಿದಾಗ 2,೦೦೦ ಗ್ರಾಂ ಚಿನ್ನ ಖರೀದಿಯಾಗಿತ್ತು. ಧಾರವಾಡದಲ್ಲಿ ರೂ. 5 ಲಕ್ಷಗಳು 5೦೦ ಗ್ರಾಂ ಚಿನ್ನವಾಗಿ ಬದಲಾದವು. ನಂತರ, ಬೆಂಗಳೂರಿನಲ್ಲಿ ಮತ್ತೆ ರೂ.1೦ ಲಕ್ಷಗಳು 4೦೦ ಗ್ರಾಂ ಚಿನ್ನವಾಗಿಯೂ, ಊರಿನಲ್ಲಿ ರೂ.95,೦೦೦ ಗಳು 35 ಗ್ರಾಂ ಚಿನ್ನವಾಗಿಯೂ ಪರಿವತ೯ನೆಗೊಂಡವು.

ನನ್ನ ಮದುವೆಯಲ್ಲಿ ಫೋಟೊದಲ್ಲಿ ಸುಂದರವಾಗಿ ಕಾಣಲು ನನಗೊಂದಿಷ್ಟು ಆಭರಣಗಳು ಬೇಕಿದ್ದವು. ರೋಲ್ಡ್ ಗೋಲ್ಡ್ ಖರೀದಿಸಲು ಹೋದರೂ, ಏನಿಲ್ಲವೆಂದರೂ, ಎರಡರಿಂದ ಮೂರು ಸಾವಿರ ರೂಪಾಯಿಗಳು ಖಚಾ೯ಗುತ್ತಿದ್ದವು. ಹೀಗಾಗಿ ಅಪ್ಪನಿಗೆ ಪೆಟ್ಟಿಗೆಯಿಂದ ಒಂದೆರಡು ಹಾರ ಮತ್ತು ಬಳೆಗಳನ್ನು ತೆಗೆದುಕೊಡಲು ಹೇಳಿದೆ. ಎರಡು ದಿನಗಳ ಮಟ್ಟಿಗೆ ರೋಲ್ಡ್ ಗೋಲ್ಡ್ ಎಂದು ಕರೆಸಿಕೊಳ್ಳಲು ಹೊರಟವು ಚಿನ್ನದ ಆಭರಣಗಳು!! ಮೊದಲ ಬಾರಿಗೆ ಆ ಆಭರಣಗಳನ್ನು ಉಪಯೋಗಿಸುವ ಅವಕಾಶ ನನ್ನದಾಯಿತು.

ಮದುವೆ ಮನೆಯಲ್ಲಿ ಕಳ್ಳತನಗಳು ಜಾಸ್ತಿ ಎಂದು, ಅಪ್ಪ ಆ ಚಿನ್ನದ ಡಬ್ಬವನ್ನು ಬ್ಯಾಂಕ್ ಲಾಕರ್ ನಲ್ಲಿರಿಸಿದರು. ಮದುವೆ ಮುಗಿದ ಒಂದು ವಾರಕ್ಕೆ ನಾನು ರೋಲ್ಡ್ ಗೋಲ್ಡ್ ಹೆಸರಿನಿಂದ ಉಪಯೋಗಿಸಿದ ಚಿನ್ನವೂ ಲಾಕರ್ ಸೇರಿತು.

ಇದಾಗಿ ಎರಡು ವಷ೯ಗಳಾದರೂ ಇನ್ನು ಒಮ್ಮೆಯೂ ಲಾಕರನ್ನು ತೆರೆದಿಲ್ಲ. ಯಾರದೋ ಹಣ, ಚಿನ್ನವನ್ನು ಕಾಯಲು, ಅಪ್ಪ ಬ್ಯಾಂಕ್ ಲಾಕರ್ ಫೀಯನ್ನು ತಮ್ಮ ಸ್ವಂತ ಹಣದಿಂದ ಕಟ್ಟುತ್ತಿದ್ದಾರೆ. ಆದರೆ, ಯಾರದೋ ಹಣ ನಮ್ಮ ಕಷ್ಟಕಾಲದಲ್ಲಿ ನೆರವಾಗಿದೆ. ಆ ಹಣ ಕೈಗೆ ಬಂದು 11 ವಷ೯ಗಳಾಗಿವೆ. ಇನ್ನು ಅದರ ವಾರಸುದಾರ ಬಂದು ಅದನ್ನು ತಿರುಗಿ ಕೇಳುತ್ತಾನೆನ್ನುವ ನಂಬಿಕೆ ನಮಗಾರಿಗೂ ಇಲ್ಲ.

ಹೀಗಾಗಿ ನಮ್ಮ ಜೀವನದಲ್ಲಿ ನಮಗೊಂದು ಹಣಕಾಸಿನ ಭದ್ರತೆಯಿದೆ. 25 ಲಕ್ಷ ರೂಪಾಯಿಗಳೀಗ 75 ಲಕ್ಷ ರೂಪಾಯಿ ಬೆಲೆಯ ಚಿನ್ನದ ರೂಪದಲ್ಲಿವೆ. ಹಾಗೂ ಒಮ್ಮೆ ಅದರ ವಾರಸುದಾರ ಬಂದು ಹಣವನ್ನು ತಿರುಗಿ ಕೇಳಿದರೆ, ಕೊಡಬೆಕಾದದ್ದು ರೂ.25 ಲಕ್ಷಗಳಷ್ಟೇ!!! ಇನ್ನು ನಮಗೆ ಮಿಕ್ಕುವ ಭದ್ರತೆ ರೂ.5೦ ಲಕ್ಷಗಳಷ್ಟು. ನಾವ್ಯಾರೂ ಆ ಹಣವನ್ನು ಉಪಯೋಗಿಸುವುದಿಲ್ಲವೆಂದು ಗೊತ್ತು! ಆದರೂ, ಹಣಕಾಸಿನ ಭದ್ರತೆ ನಮ್ಮನ್ನು ಇನ್ನಷ್ಟು ಸುಖಿಗಳನ್ನಾಗಿಸಿದೆ.

ಟಿಪ್ಪಣಿ: ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಕಥೆಯಲ್ಲಿ ಸಿಗುವ ಹಣ, ಒಡವೆಗಳೆಲ್ಲವೂ ನಿಜ ಜೀವನದಲ್ಲಿ ಇರುವುದಿಲ್ಲ!!!!!!!